ಪ್ರೀತಿಸುವಂತೆ ಕಾಟ: ಬೆಂಕಿ ಹಚ್ಚಿಕೊಂಡು ಅಪ್ರಾಪ್ತೆ ಆತ್ಮಹತ್ಯೆ
ಮೈಸೂರು, ಫೆಬ್ರವರಿ 26 : ಪ್ರೀತ್ಸೆ .. ಪ್ರೀತ್ಸೆ ಎಂದು ಹಿಂದೆ ಬಿದ್ದ ಯುವಕನ ಕಿರುಕುಳ ತಾಳಲಾರದೇ ಮನನೊಂದ 15 ವರುಷದ ಅಪ್ರಾಪ್ತೆಯೋರ್ವಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉದಯಗಿರಿಯ ಮುನ್ನೇಶ್ವರ ನಗರದಲ್ಲಿ ನಡೆದಿದೆ.
ರಕ್ಷಿತಾ (15) ಮೃತಪಟ್ಟ ಅಪ್ರಾಪ್ತೆ. ಆರೋಪಿ ಗಿರೀಶ್ ಕಳೆದ ಹಲವು ದಿನಗಳಿಂದ ರಕ್ಷಿತಾಳನ್ನು ನನ್ನನ್ನು ಪ್ರೀತಿಸು ಎಂದು ಒತ್ತಾಯಿಸುತ್ತಿದ್ದ. ಅಷ್ಟೇ ಅಲ್ಲದೇ ಮನೆ ಬಿಟ್ಟು ಬಾ, ಓಡಿಹೋಗಿ ಮದುವೆಯಾಗೋಣ ಎಂದು ಒತ್ತಡ ಹೇರಿದ್ದ. ಒಂದು ವೇಳೆ ಮದುವೆಯಾಗಲು ಒಪ್ಪದಿದ್ದರೆ ನಿನ್ನ ಮನೆಯವರನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಆರೋಪಿ ಗಿರೀಶ್ ನ ಬೆದರಿಕೆಗೆ ಹೆದರಿದ ರಕ್ಷಿತಾ ಫೆಬ್ರವರಿ 21 ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಆಕೆಯನ್ನು ಪೋಷಕರು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದರು. ಅಂದಿನಿಂದಲೂ ರಕ್ಷಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ರಕ್ಷಿತಾ ಸಾವನ್ನಪ್ಪಿದ್ದಾಳೆ.

ಈ ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಆರೋಪಿ ಗಿರೀಶ್ ವಿರುದ್ಧ ಪೋಕ್ಸೋ(Protection of Children from Sexual Offences) ಕಾಯಿದೆ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಗಿರೀಶ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.











Click it and Unblock the Notifications