Breaking: ಮೈಸೂರು ಮೇಯರ್,ಉಪಮೇಯರ್ ಬಿಜೆಪಿಗೆ: ಜೆಡಿಎಸ್ಗೆ ಶಾಕ್!
ಮೈಸೂರು, ಸೆಪ್ಟೆಂಬರ್ 6: ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಪ್ರಕ್ರಿಯೆ ಮುಗಿದಿದ್ದು ಬಿಜೆಪಿಯ ಅಭ್ಯರ್ಥಿ ಶಿವಕುಮಾರ್ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಬಿಜೆಪಿಗೆ ಬೆಂಬಲ ಸೂಚಿಸಿದರೂ ಉಪಮೇಯರ್ ಪಟ್ಟದಿಂದ ವಂಚಿತವಾಗಿದೆ.
ಮೇಯರ್ ಸ್ಥಾನಕ್ಕಾಗಿ ಮೂರು ಪಕ್ಷಗಳಿಂದ ತೀವ್ರ ಪೈಪೋಟಿ ನಡೆದಿತ್ತು. ಕೊನೆಯ ಹಂತದವರೆಗೂ ಯಾವುದೇ ಪಕ್ಷಗಳು ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ಬಿಜೆಪಿಗೆ ಮೈಸೂರಿನ ಮಹಾಪೌರ ಪಟ್ಟ ದೊರೆತಿದೆ.
ನಗರದ 47ನೇ ವಾರ್ಡ್ನ ಸದಸ್ಯ ಶಿವಕುಮಾರ್ ಮೇಯರ್ ಆಗಿ ನೇಮಕಗೊಂಡಿದ್ದಾರೆ. ಆದರೆ ಉಪಮೇಯರ್ ಆಗಬೇಕಿದ್ದ ಜೆಡಿಎಸ್ನ ರೇಷ್ಮಾ ಉಪಮೇಯರ್ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಬಿಜೆಪಿಯ ಅಭ್ಯರ್ಥಿ ನಾಗೇಶ್ ಆಯ್ಕೆಯಾಗಿದ್ದಾರೆ. ಈ ಮೂಲಕ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎರಡನೇ ಬಾರಿಗೂ ಬಿಜೆಪಿ ಅಭ್ಯರ್ಥಿಯೇ ಮೇಯರ್ ಆಯ್ಕೆಯಾಗುವುದರ ಜೊತೆಗೆ ಉಪಮೇಯರ್ ಸ್ಥಾನವನ್ನು ದಕ್ಕಿಸಿಕೊಂಡಿದೆ.

ಚುನಾವಣಾ ಒಳಮೈತ್ರಿಯಲ್ಲಿ ಜೆಡಿಎಸ್ ಉಪಮೇಯರ್ ಸ್ಥಾನಕ್ಕೆ ಒಪ್ಪಿಕೊಂಡಿತ್ತು. ಅದರಂತೆ ಉಪ ಮೇಯರ್ ಚುನಾವಣೆಗೆ ಜೆಡಿಎಸ್ ನ ರೇಷ್ಮಾ ಬಾನು ನಾಮಪತ್ರ ಸಲ್ಲಿಸಿದ್ದರು. ಆದರೆ ಉಪ ಮೇಯರ್ ಸ್ಥಾನ ಬಿಸಿಎಗೆ ಮೀಸಲಿಡಲಾಗಿತ್ತು. ಆದರೆ ರೇಷ್ಮಾ ಬಾನು ನಾಮಪತ್ರ ಸಲ್ಲಿಸುವ ವೇಳೆ ಬಿಸಿಎ ಸರ್ಟಿಫಿಕೇಟ್ ಸಲ್ಲಿಸದ ಕಾರಣ ಅವರ ನಾಮಪತ್ರ ತಿರಸ್ಕೃತಗೊಂಡು ಉಪ ಮೇಯರ್ ಸ್ಥಾನ ಕೈತಪ್ಪಿದೆ.

ಮಂಗಳವಾರ ಬೆಳಗ್ಗೆ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿತ್ತು. ಕಾಂಗ್ರೆಸ್ ನಿಂದ ಮೇಯರ್ ಸ್ಥಾನಕ್ಕೆ ಸಯ್ಯದ್ ಹಸ್ರತ್ ಉಲ್ಲಾ ಮತ್ತು ಗೋಪಿ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಶೋಭಾ ಸುನೀಲ್ ನಾಮಪತ್ರ ಸಲ್ಲಿಸಿದರೇ, ಜೆಡಿಎಸ್ ನಿಂದ ಮೇಯರ್ ಸ್ಥಾನಕ್ಕೆ ಕೆ. ವಿ ಶ್ರೀಧರ್ , ಉಪಮೇಯರ್ ಸ್ಥಾನಕ್ಕೆ ರೇಷ್ಮಾಭಾನು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಶಿವಕುಮಾರ್, ಉಪಮೇಯರ್ ಸ್ಥಾನಕ್ಕೆ ರೂಪಾ ನಾಮಪತ್ರ ಸಲ್ಲಿಸಿದ್ದರು.












Click it and Unblock the Notifications