ಐಐಟಿ ಮೈಸೂರಿನ ಕೈ ತಪ್ಪಲು ಏನು ಕಾರಣ? ಪ್ರತಾಪ ಉತ್ತರ
ಮೈಸೂರು, ಸೆಪ್ಟೆಂಬರ್. 10: ಐಐಟಿ ಮೈಸೂರಿಗೆ ತಪ್ಪಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣವಂತೆ! ಹೀಗೆಂದು ಹೇಳಿದವರು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ.
ಪ್ರತಾಪ್ ಸಿಂಹ ಮಾಧ್ಯಮಗಳ ಮುಂದೆ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ತಮ್ಮಫೇಸ್ ಬುಕ್ ಪೇಜ್ ನಲ್ಲಿಯೂ ಸಹ ಬರೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಐಐಟಿ ಮಂಜೂರು ಮಾಡುವ ಘೊಷಣೆ ಮಾಡಿದಾಗಲೇ ಸಿಎಂ ಎಚ್ಚೆತ್ತುಕೊಳ್ಳಬೇಕಾಗಿತ್ತು. ಮೈಸೂರನ್ನು ಮಾತ್ರ ಪ್ರಸ್ತಾವನೆಲ್ಲಿ ಹೆಸರಿಸಿ ಕಳುಹಿಸಿದ್ದರೆ ಸಾಂಸ್ಕೃತಿಕ ನಗರಿಗೆ ಐಐಟಿ ಒಲಿಯುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.[ಐಐಟಿ ಸ್ಥಾಪನೆ ರೇಸ್ ನಲ್ಲಿ ಗೆದ್ದ ಧಾರವಾಡ]
ಪ್ರತಾಪ್ ಸಿಂಹ ಅವರ ಈ ಹೇಳಿಕೆಗೆ ಸಾಮಾಜಿಕ ತಾಣದಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದೆ. ಅನೇಕ ಜನರು ಪ್ರತಾಪ್ ಅವರ ಮಾತನ್ನು ಖಂಡಿಸಿದ್ದು ಒಟ್ಟಿನಲ್ಲಿ ಐಐಟಿ ಕರ್ನಾಟಕದಲ್ಲಿ ಸ್ಥಾಪನೆಯಾಗುತ್ತಿರುವುದು ಸ್ವಾಗತಾರ್ಹ, ಮೈಸೂರಾದರೇನು? ಧಾರವಾಡವಾದರೇನು? ಎಂದು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಇಡೀ ರಾಜ್ಯದ ಮುಖ್ಯಮಂತ್ರಿ, ಅವರು ಮೈಸೂರಿಗೆ ಮಾತ್ರ ಸೀಮಿತರಲ್ಲ ಎಂಬುದನ್ನು ತಿಳಿದುಕೊಳ್ಳಿ, ನೀವು ಒಬ್ಬ ಜನಪ್ರತಿನಿಧಿ, ನಿಮ್ಮಿಂದ ಇಂಥ ಮಾತು ನಿರೀಕ್ಷೆ ಮಾಡಿರಲಿಲ್ಲ ಎಂಬ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿವೆ.[ಐಐಟಿಗೆ ಧಾರವಾಡವೇ ಸೂಕ್ತ ಎಂದಿದ್ದ ಓದುಗರು]
ಮೈಸೂರಿಗೆ ಐಐಟಿ ಕೈ ತಪ್ಪಿದ್ದರ ಬಗ್ಗೆ ಮಾತನಾಡುವ ನೀವು, ಹಿಂದುಳಿದ ರಾಯಚೂರಿಗೆ ಐಐಟಿ ನೀಡಬೇಕು ಎಂದು ಯಾಕೆ ಹೇಳಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಎಲ್ಲ ಗೊಂದಲಗಳನ್ನು ಬಿಟ್ಟು ಐಐಟಿ ಸ್ಥಾಪನೆ ಮತ್ತು ಅಭಿವೃದ್ಧಿಗೆ ಎಲ್ಲ ಪಕ್ಷದ ನಾಯಕರು ಒಂದಾಗಿ ಶ್ರಮಿಸಿ ಎಂಬ ಮಹತ್ವದ ಸಲಹೆಗಳನ್ನು ನೀಡಲಾಗಿದೆ.
ಸ್ಮಾರ್ಟ್ ಸಿಟಿಗೆ ಮೈಸೂರು ಆಯ್ಕೆಯಾಗದಿದ್ದಾಗ ಐಐಟಿ ಒಲಿಯುತ್ತದೆ ಎಂದು ಭಾವಿಸಲಾಗಿತ್ತು. ಅಲ್ಲದೇ ಮೈಸೂರಿಗೆ ಆಗಮಿಸಿದ ಕೇಂದ್ರದ ತಂಡ ಸ್ಥಳ ಪರಿಶೀಲನೆಯನ್ನು ಮಾಡಿಕೊಂಡು ಹೋಗಿತ್ತು. ಆದರೆ ಅಂತಿಮವಾಗಿ ಐಐಟಿ ಸ್ಥಾಪನೆಗೆ ಧಾರವಾಡವನ್ನು ಆಯ್ಕೆ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಲಾಗಿತ್ತು.
Posted by Pratap Simha, MP onWednesday, September 9, 2015