ಸದ್ಯದಲ್ಲೇ ಮೈಸೂರು- ಹಾಸನ-ಮಂಗಳೂರು ರೈಲು ಮಾರ್ಗ ವಿದ್ಯುದೀಕರಣ
ಮೈಸೂರು, ಆಗಸ್ಟ್ 3: ಮೈಸೂರು - ಬೆಂಗಳೂರು ವಿದ್ಯುದೀಕರಣದ ಬಳಿಕ ರೈಲ್ವೆ ಇಲಾಖೆ ಪ್ರಮುಖ ಮಾರ್ಗವೆಂದೇ ಹೆಸರಾದ ಮೈಸೂರು-ಹಾಸನ-ಮಂಗಳೂರು ಮಾರ್ಗವನ್ನು ಮುಂದಿನ ದಿನಗಳಲ್ಲಿ ವಿದ್ಯುದ್ದೀಕರಣಗೊಳಿಸಲು ಮುಂದಾಗಿದೆ.
ಪ್ರಧಾನಿ ಮೋದಿ ನೇತೃತ್ವದ 2019ರ ಬಜೆಟ್ ನಲ್ಲಿ ಈ ಮಾರ್ಗಗಳ ವಿದ್ಯುದೀಕರಣದ ಕುರಿತು ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಹಣಕಾಸಿನ ಅನುಮೋದನೆ ದೊರಕಿದೆ.
316 ಕೋಟಿ ವೆಚ್ಚದಲ್ಲಿ ಮೈಸೂರು-ಹಾಸನ-ಮಂಗಳೂರು ರೈಲ್ವೆ ಮಾರ್ಗದ ವಿದ್ಯುದೀಕರಣ ಆರಂಭಗೊಳ್ಳಲಿದೆ. ಇದರೊಳಗೆ ಹಾಸನ-ಅರಸೀಕೆರೆ ಮಾರ್ಗವೂ ಅಡಕಗೊಂಡಿದೆ. ಒಟ್ಟು 347 ಕಿ.ಮೀ. ವಿದ್ಯುದೀಕರಣ ನಡೆಯಲಿದೆ. 2022ರೊಳಗೆ ಈ ಕಾಮಗಾರಿ ಮುಗಿಸಬೇಕೆಂದು ತಿಳಿಸಲಾಗಿದೆ.

ಈ ಯೋಜನೆಯಡಿ ಮೈಸೂರು-ಚಾಮರಾಜನಗರ ಮಾರ್ಗದ 61 ಕಿ.ಮಿಯನ್ನು ರೈಲ್ವೆ ಮಾರ್ಗದ ವಿದ್ಯುದೀಕರಣಗೊಳಿಸಲಾಗುವುದು. ಅಂದಾಜು 57 ಕೋಟಿ ಮೊತ್ತದ ಯೋಜನೆ ಇದಾಗಿದೆ. ರೈಲ್ವೆ ಮಂಡಳಿ ಕಾಮಗಾರಿಯ ನಿರ್ವಹಣೆ ಹೊಣೆಯನ್ನು ಬೆಂಗಳೂರಿನಲ್ಲಿ ಈಚೆಗಷ್ಟೇ ಕಾರ್ಯಾರಂಭಿಸಿದ ಕೇಂದ್ರೀಯ ರೈಲ್ವೆ ವಿದ್ಯುದೀಕರಣ ಸಂಘಟನೆ ಕಚೇರಿ ನಿರ್ವಹಿಸಲಿದೆ ಎಂಬುದು ರೈಲ್ವೆ ಮೂಲಗಳಿಂದ ಖಚಿತಪಟ್ಟಿದೆ.
ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡರೆ, ರೈಲುಗಳ ಸಂಚಾರದ ವೇಗ ತುಸು ಹೆಚ್ಚಲಿದೆ. ಇದರ ಜತೆ ವಿವಿಧ ಜಂಕ್ಷನ್ಗಳಲ್ಲಿ ರೈಲ್ವೆ ಎಂಜಿನ್ಗೆ ಡೀಸೆಲ್ ತುಂಬಿಸುವ ಕಿರಿಕಿರಿ ತಪ್ಪಲಿದೆ. ಪ್ರಯಾಣದ ಅವಧಿಯೂ ತಗ್ಗಲಿರುವುದು ಪ್ರಯಾಣಿಕರಿಗೆ ಸಂತಸದ ವಿಷಯವಾಗಿದೆ.












Click it and Unblock the Notifications