'ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ ಯೋಜನೆ ವಿಲೀನ ಬೇಡ'
ಮೈಸೂರು, ಫೆಬ್ರವರಿ 20 : ರೈತ ಹಾಗೂ ಸಹಕಾರ ಸಂಘ ಸದಸ್ಯರ ಆರೋಗ್ಯದ ಆಶಾಕಿರಣವಾಗಿದ್ದ ಯಶಸ್ವಿನಿ ಆರೋಗ್ಯ ಭಾಗ್ಯ ಯೋಜನೆಯನ್ನು ವಾಜಪೇಯಿ ಆರೋಗ್ಯಶ್ರೀ ಯೋಜನೆಯೊಂದಿಗೆ ವಿಲೀನಗೊಳಿಸದೆ ಯಥಾಸ್ಥಿತಿಯಲ್ಲಿಯೇ ಮುಂದುವರೆಸಬೇಕೆಂದು ಮಾಜಿ ಸಂಸದ ಎಚ್ ವಿಶ್ವನಾಥ್ ಸರ್ಕಾರಕ್ಕೆ ಆಗ್ರಹಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2003ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಆರಂಭವಾದ ಯಶಸ್ವಿನಿ ಯೋಜನೆಯು ದೇಶದಲ್ಲಿಯೇ ಅತ್ಯುತ್ತಮ ಯೋಜನೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.[ಕಾಂಗ್ರೆಸ್ಸಿಗೆ ಸೋಮಣ್ಣ ಬರುವುದಾದರೆ ಸ್ವಾಗತ: ವಿಶ್ವನಾಥ್]
ಇಂತಹ ಮಹತ್ವಪೂರ್ಣ ಯೋಜನೆಯನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಹೋಗಲು ರಾಜ್ಯ ಸರ್ಕಾರ ನಿರಾಸಕ್ತಿ ತಾಳಿದೆ. ಉತ್ತಮವಾಗಿ ನಡೆದುಕೊಂಡು ಹೋಗುತ್ತಿದ್ದ ಯೋಜನೆಯನ್ನು ದೇಶದಲ್ಲಿಯೇ ವಿಫಲವಾದ ವಾಜಪೇಯಿ ಆರೋಗ್ಯಶ್ರೀಯೊಂದಿಗೆ ವಿಲೀನಗೊಳಿಸವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ರಾಜ್ಯದಲ್ಲಿ ಕಳೆದ ಹದಿನಾಲ್ಕು ವರ್ಷಗಳಲ್ಲಿಂದಲೂ ಯೋಜನೆಯಡಿ ಎರಡು ಯಶಸ್ವಿನಿ ಆಸ್ಪತ್ರೆಗಳು ಸೇರಿದಂತೆ ಸರ್ಕಾರಿ ಹಾಗೂ ಖಾಸಗಿಯ ಸುಮಾರು 780 ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿವೆ.
ಸರ್ಕಾರದಿಂದ ಸುಮಾರು 1225 ಕೋಟಿ ರೂಪಾಯಿಗಳನ್ನು ಚಿಕಿತ್ಸೆಗಾಗಿ ವ್ಯಯ ಮಾಡಲಾಗಿದೆ. 43 ಲಕ್ಷಕ್ಕೂ ಅಧಿಕ ಮಂದಿ ಯೋಜನೆಯ ಫಲಾನುಭವಿಗಳಿದ್ದು ಹೃದಯ ಸೇರಿದಂತೆ ಒಟ್ಟು 823 ಶಸ್ತ್ರ ಚಿಕಿತ್ಸೆಗಳು ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಸುಲಭವಾಗಿ ಚಿಕಿತ್ಸೆ ಲಭ್ಯವಾಗುತ್ತಿದೆ.[ಮೋದಿ ರಾಬಿನ್ ಹುಡ್ನಂತೆ ಆಡುತ್ತಿದ್ದಾರೆ : ವಿಶ್ವನಾಥ್ ಟೀಕೆ]
ಆದ್ದರಿಂದ ಈ ಯೋಜನೆಯೊಂದಿಗೆ ಇತರೇ ವಿಫಲ ಯೋಜನೆಗಳನ್ನು ವಿಲೀನಗೊಳಿಸಿ ಅದರ ಹೊರತಾಗಿ ವಿಫಲ ಯೋಜನೆಯೊಂದಿಗೆ ಯಶಸ್ವಿನಿಯನ್ನು ವಿಲೀನಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವು ಸರಿಯಲ್ಲವೆಂದರು. ಈ ಬಗ್ಗೆ ಪುನರ್ ಪರಿಶೀಲನೆ ಅಗತ್ಯ ಎಂದರು.
ಸರ್ಕಾರಕ್ಕೆ ಪತ್ರ : ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಪತ್ರ ಬರೆಯಲಾಗಿದ್ದು ಇಂದಿಗೂ ಸರ್ಕಾರದಿಂದ ಪ್ರತ್ಯುತ್ತರ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೋಟೀಸ್ : ನಾನೇನು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವೆನೇ? ಹಗರಣಗಳಲ್ಲಿ ಭಾಗಿಯಾಗಿರುವೆನೇ? ಪಕ್ಷಕ್ಕೆ ಮುಜುಗರವನ್ನುಂಟು ಮಾಡುವ ಕೆಲಸವೇನಾದರು ಮಾಡಿರುವೇನೆ ನನಗೇಕೆ ನೋಟೀಸು.
ನನಗೆ ಇಲ್ಲಿಯವರೆಗೂ ಎಐಸಿಸಿ ಹಾಗೂ ಕೆಪಿಸಿಸಿಯಿಂದ ಯಾವುದೇ ನೋಟೀಸ್ ಬಂದಿಲ್ಲ ಎಂದು ಶೋಕಾಸ್ ನೋಟಿಸ್ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದರು.












Click it and Unblock the Notifications