ಚಾಮುಂಡಿ ಬೆಟ್ಟದಲ್ಲಾಗಿದ್ದ ಭೂಕುಸಿತ ವೀಕ್ಷಣೆ ಮಾಡಿದ ಉಸ್ತುವಾರಿ ಸಚಿವ
ಮೈಸೂರು, ನವೆಂಬರ್ 2: ಮೈಸೂರು ನಗರದ ಚಾಮುಂಡಿ ಬೆಟ್ಟದಲ್ಲಿ ಕೆಲವು ದಿನಗಳ ಹಿಂದೆ ಭೂಕುಸಿತ ಉಂಟಾಗಿದ್ದ ಹಿನ್ನೆಲೆ, ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲಿಸಿದರು.
ಭೂಕುಸಿತವಾಗಿರುವ ಸ್ಥಳ ಸಚಿವ ಎಸ್.ಟಿ. ಸೋಮಶೇಖರ್ ಭೇಟಿ ನೀಡಿದ ವೇಳೆ ಸ್ಥಳೀಯ ಶಾಸಕ ಜಿ.ಟಿ. ದೇವೇಗೌಡ, ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಮುಡಾ ಆಯುಕ್ತ ನಟೇಶ್ ಹಾಗೂ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.
ಪರಿಶೀಲನೆ ಬಳಿಕ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, "ಚಾಮುಂಡಿ ಬೆಟ್ಟದ ಅಪಾಯಕಾರಿ ಸ್ಥಳಗಳಲ್ಲಿ ಶಾಶ್ವತ ಕಾಮಗಾರಿಗಳನ್ನು ನಡೆಸಲಾಗುವುದು. ಚಾಮುಂಡಿ ಬೆಟ್ಟದ ಅಪಾಯಕಾರಿ ಸ್ಥಳಗಳಲ್ಲಿ ಭೂಕುಸಿತ ಆಗದಂತೆ ಶಾಶ್ವತ ಕಾಮಗಾರಿಯ ಅಗತ್ಯವಿದೆ. ಈ ಸಂಬಂಧ ಮಂಗಳವಾರ ಸಿಎಂ ಜೊತೆ ಚರ್ಚಿಸಲಾಗುವುದು," ಎಂದು ಹೇಳಿದರು.

"ಮಂಗಳವಾರದಂದು ಕೆಆರ್ಎಸ್ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಲು ಬರಲಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಲಾಗುವುದು. ಮೈಸೂರು ಜಿಲ್ಲೆಯ 11 ಶಾಸಕರನ್ನು ನಾಳೆ ಕೆಆರ್ಎಸ್ಗೆ ಬರಲು ಹೇಳಿದ್ದೇನೆ. ಇಂದು ಸಹ ಸುದೀರ್ಘ ಸಭೆ ನಡೆಸಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಬಂದಾಗ ಎಲ್ಲಾ ಶಾಸಕರು ತಮ್ಮ ಕ್ಷೇತ್ರದ ಬಗ್ಗೆ ಮಾಹಿತಿ ನೀಡಲಿದ್ದಾರೆ," ಎಂದು ತಿಳಿಸಿದರು.
"ದೀಪಾವಳಿ ನಂತರ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಚಾಮುಂಡಿ ಬೆಟ್ಟಕ್ಕೆ ಆಗಮಿಸಲಿದ್ದಾರೆ. ಅವರು ಸಹ ಭೂಕುಸಿತವಾಗಿರುವ ಸ್ಥಳವನ್ನು ಪರಿಶೀಲಿಸಲಿದ್ದಾರೆ. ಎಲ್ಲೆಲ್ಲಿ ಅಗತ್ಯವಿದೆಯೋ ಆ ಸ್ಥಳಗಳಲ್ಲಿ ಶಾಶ್ವತ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಿದ್ದಾರೆ," ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ಜನಪ್ರತಿನಿಧಿಗಳ ಜತೆ ಸಚಿವ ಎಸ್ಟಿಎಸ್ ಸಭೆ
ಚಾಮುಂಡಿ ಬೆಟ್ಟಕ್ಕೂ ಭೇಟಿಗೂ ಮುನ್ನ ಮಳೆ ಹಾನಿ ಕುರಿತಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಲು ಜಿ.ಪಂ. ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಸೋಮಶೇಖರ್ ಭಾಗವಹಿಸಿದ್ದರು. ಮಳೆ ಹಾನಿಯಿಂದಾಗಿರುವ ನಷ್ಟ ಹಾಗೂ ಕೈಗೊಳ್ಳಬೇಕಿರುವ ಪರಿಹಾರ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ವಸ್ತುಸ್ಥಿತಿ ವಿವರಿಸೋಣ ಎಂದರು.
ಮೈಸೂರು ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಮಳೆಯಿಂದ ಇಬ್ಬರು ಸಾವಿಗೀಡಾಗಿದ್ದಾರೆ. ಐದು ಪ್ರಾಣಿಗಳ ಪ್ರಾಣ ಹಾನಿಯಾಗಿದೆ. 1249 ಮನೆಗಳು ಮಳೆಯಿಂದ ಹಾನಿಗೊಳಗಾಗಿವೆ. ಇದರಲ್ಲಿ 34 ಮನೆಗಳು ಅಕ್ಟೋಬರ್ನಲ್ಲೇ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು.
ಚರಂಡಿ ನೀರು ತಗ್ಗು ಪ್ರದೇಶ, ಮನೆಗಳಿಗೆ ನುಗ್ಗದಂತೆ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂಬುದರ ಕುರಿತು ಸಭೆಯಲ್ಲಿ ಚರ್ಚೆಯಾಯಿತು. ಮೈಸೂರು ಜಿಲ್ಲೆಯಲ್ಲಿ 147.96 ಎಕರೆ ಬೆಳೆ ಹಾನಿ, 214.97 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದ್ದರೆ, ಅಂದಾಜು 700 ಕಿ.ಮೀ.ನಷ್ಟು ರಸ್ತೆ ಹಾಳಾಗಿದೆ. 67 ಪ್ರಾಥಮಿಕ ಶಾಲೆಗಳು, 33 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.












Click it and Unblock the Notifications