ಮೈಸೂರಿನ ಹಲವೆಡೆ 3 ಲಕ್ಷ ಗಿಡ ನೆಡಲು ಇಲಾಖೆ ತೀರ್ಮಾನ
ಮೈಸೂರು, ಮೇ 30: ಮೈಸೂರು ಅರಣ್ಯ ವಲಯ ವ್ಯಾಪ್ತಿಯ 325 ಎಕರೆ ಪ್ರದೇಶದಲ್ಲಿ ಒಟ್ಟು 3,15,000 ಸಸಿಗಳನ್ನು ನೆಟ್ಟು ಕಾಡು ಬೆಳೆಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಕಳೆದ ಬೇಸಿಗೆಯಲ್ಲಿ ಬಂಡೀಪುರ ಅರಣ್ಯ ವಲಯದ ಬಹುಭಾಗ ಹಾಗೂ ಮೈಸೂರು ಅರಣ್ಯ ವಲಯದ ಕೆಲವು ಪ್ರದೇಶದಲ್ಲಿ ಬೆಂಕಿ ಅನಾಹುತದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ವನ್ಯ ಸಂಪತ್ತು ನಾಶವಾಗಿತ್ತು. ಈ ಸಂದರ್ಭದಲ್ಲಿ ಲಕ್ಷಾಂತರ ಮರ ಗಿಡಗಳು ಬೆಂಕಿಗಾಹುತಿಯಾಗಿದ್ದವು. ಹಾಗಾಗಿ ಆ ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಮುಂದಾಗಿದೆ.
ಈ ಸಾಲಿನ ಮುಂಗಾರಿನ ಆರಂಭದಲ್ಲಿ ಮೈಸೂರು ಅರಣ್ಯ ವಲಯ ವ್ಯಾಪ್ತಿಯ ಎಚ್.ಡಿ ಕೋಟೆ, ಟಿ ನರಸೀಪುರ ಹಾಗೂ ಮೈಸೂರು ವಲಯದ 325 ಎಕರೆ ಅರಣ್ಯ ಪ್ರದೇಶದಲ್ಲಿ ಉತ್ತಮ ಜಾತಿಯ ಗಿಡಗಳನ್ನು ನೆಡಲು ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಸುಮಾರು 6 ರಿಂದ 12 ಅಡಿ ಎತ್ತರದ ಗಿಡಗಳನ್ನು ವಿವಿಧ ನರ್ಸರಿಗಳಲ್ಲಿ ಬೆಳೆಸಲಾಗಿದೆ.
ಕಹಿಬೇವು, ತೇಗ, ಹೆಬ್ಬೇವು, ಕಾಡು ಬಾದಾಮಿ, ಸಂಪಿಗೆ, ಸಿಲ್ವರ್, ನೇರಳೆ, ಹುಣಸೆ, ಹೊಂಗೆ, ಹಲಸು, ಸೀಬೆ, ಶ್ರೀಗಂಧ, ಮಾವು, ಬಿಲ್ವಪತ್ರೆ, ನೆಲ್ಲಿ ಹೀಗೆ 25ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ಹೊಸದಾಗಿ ಅರಣ್ಯ ಪ್ರದೇಶಗಳಲ್ಲಿ ನೆಡಲಾಗುತ್ತಿದೆ. ಬಂಡೀಪುರ ಭಾಗದಲ್ಲಿ ಬೀಜದ ಉಂಡೆಗಳನ್ನು ಕಾಡಿನ ಮೈದಾನದ ಪ್ರದೇಶದಲ್ಲಿ ಎಸೆಯುವ ಮೂಲಕ ಬಿತ್ತನೆ ಮಾಡಲಾಗುತ್ತದೆ. ನಿರೀಕ್ಷಿತ ಮಳೆ ಬಂದರೆ ಈ ಗಿಡಗಳು ಬೇರೂರಿ ಬೆಳೆಯುತ್ತವೆ.

ಮೈಸೂರು ವಲಯದಲ್ಲಿರುವ ವರಕೋಡು, ಚಿಕ್ಕನಹಳ್ಳಿ ಕಾಡು, ಎಚ್.ಡಿ ಕೋಟೆಯಲ್ಲಿರುವ ಮುನೇಶ್ವರ ಗುಡ್ಡ, ತಿ .ನರಸೀಪುರದಲ್ಲಿರುವ ತಲಕಾಡು ನದಿ ತೀರದ ಕಾಡು, ಉಕ್ಕಲಗೆರೆ ಹಾಗೂ ವಾಟಾಳ್ ವನ್ಯ ಪ್ರದೇಶದಲ್ಲಿ ಗಿಡ ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರು ವಲಯ ಅರಣ್ಯ ಇಲಾಖೆಯಿಂದ ನಾಲ್ಕು ತಿಂಗಳ ಹಿಂದೆ ಯೋಜನೆ ರೂಪಿಸಿ ಗಿಡಗಳನ್ನು ಬೆಳೆಸಲು ಕ್ರಮ ಜರುಗಿಸಿದ್ದು, "ಈ ಬಾರಿ ನಾವು ನಿರೀಕ್ಷಿಸಿದ ಮಟ್ಟಕ್ಕೆ ಮಳೆಯಾಗಿಲ್ಲ. ನಗರ ಪ್ರದೇಶಗಳಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಆದರೆ ಅರಣ್ಯ ಪ್ರದೇಶಗಳಲ್ಲಿ ಇನ್ನಷ್ಟು ಮಳೆ ಆಗಬೇಕಿತ್ತು. ಸದ್ಯಕ್ಕೆ ಗಿಡಗಳು ಸಿದ್ಧವಾಗಿರುವುದರಿಂದ ಇನ್ನೊಂದೆರಡು ಬಾರಿ ಅರಣ್ಯ ಪ್ರದೇಶಗಳಲ್ಲಿ ಮಳೆಯಾದರೆ ಗಿಡ ನೆಡುವ ಕೆಲಸ ಆರಂಭಿಸುತ್ತೇವೆ' ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ. ಸಿ ಪ್ರಶಾಂತ್.












Click it and Unblock the Notifications