ಲೋಕಸಭಾ ಚುನಾವಣೆ 2019:ಮೈಸೂರು ಕ್ಷೇತ್ರದ ಮಾಹಿತಿ ನೀಡಿದ ಡಿಸಿ
ಮೈಸೂರು, ಮಾರ್ಚ್ 11:ಲೋಕಸಭಾ ಚುನಾವಣೆಗೆ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಮೈಸೂರಿನಲ್ಲಿ ಚುನಾವಣಾ ಅಧಿಸೂಚನೆಯನ್ನು ಮಾ.19ಕ್ಕೆ ಜಾರಿಗೊಳಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ಚುನಾವಣಾ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 24,65,102 . ಅದರಲ್ಲಿ ಪುರುಷ ಮತದಾರರು 12,34,454, ಮಹಿಳಾ ಮತದಾರರ ಸಂಖ್ಯೆ 12, 30,648.
ಈ ಬಾರಿ ಯುವ ಮತದಾರರ ಸಂಖ್ಯೆ 36,163ರಷ್ಟಿದೆ. ಈಗಾಗಲೇ 24 ಗಂಟೆಯೊಳಗೆ ರೈಲ್ವೆ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲು ಡೆಡ್ ಲೈನ್ ನೀಡಲಾಗಿದೆ.
ನೀತಿ ಸಂಹಿತೆ ಜಾರಿ:ಕಾರ್ಯಕ್ರಮಗಳು ರದ್ದು, ಮೈಸೂರಿನಲ್ಲಿ ರಾಜಕೀಯ ಲೆಕ್ಕಾಚಾರ ಶುರು
ಅಲ್ಲದೇ 24 ಗಂಟೆಯೊಳಗೆ ಜನಪ್ರತಿನಿಧಿಗಳು ಸರ್ಕಾರಿ ವಾಹನಗಳನ್ನು ಒಪ್ಪಿಸಲು ಸೂಚಿಸಲಾಗಿದೆ. ಸರ್ಕಾರಿ ಹಣ ಬಳಸಿ ಜಾಹೀರಾತು ನೀಡುವುದಕ್ಕೆ ನಿಷೇಧ ಹೇರಲಾಗಿದೆ ಎಂದರು. ಇವಷ್ಟೇ ಅಲ್ಲದೇ ಸರ್ಕಾರಿ ವೆಬ್ಸೈಟ್ ಗಳಲ್ಲಿ ರಾಜಕೀಯ ಪಕ್ಷಗಳ, ರಾಜಕೀಯ ಭಾವಚಿತ್ರ ತೆರವುಗೊಳಿಸಲು ಸೂಚಿಸಲಾಗಿದೆ.
ಭಿತ್ತಿ ಪತ್ರಗಳ ತೆರವು
2019ರ ಸಾಲಿನ ಲೋಕಸಭಾ ಚುನಾವಣೆಯನ್ನು ನ್ಯಾಯ ಸಮ್ಮತವಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದ್ದು, ಮೈಸೂರು ನಗರಪಾಲಿಕೆಯಿಂದ ಅಭಯ ತಂಡಗಳನ್ನು ಈಗಾಗಲೇ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಜಿಲ್ಲೆಯಾದ್ಯಂತ ಫ್ಲೆಕ್ಸ್, ಹೋಲ್ಡಿಂಗ್ಸ್, ಭಿತ್ತಿ ಪತ್ರಗಳು ಸೇರಿದಂತೆ ಸರ್ಕಾರಿ ಕಾರ್ಯಕ್ರಮ, ಯೋಜನೆಗಳ ಪ್ರದರ್ಶಕಗಳನ್ನು ಭಾನುವಾರ ರಾತ್ರಿಯಿಂದಲೇ ತೆರವುಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಿಖಿಲ್ ಕುಮಾರಸ್ವಾಮಿ ಮೈಸೂರಿನಿಂದ ಸ್ಪರ್ಧೆ? ದಿನೇಶ್ ಗುಂಡೂರಾವ್ ಹೇಳಿದ್ದೇನು?
ಮಾರ್ಚ್ 26 ಕೊನೆಯ ದಿನ
ನಾಮಪತ್ರಗಳನ್ನು ಸಲ್ಲಿಸಲು ಮಾರ್ಚ್ 26 ಕೊನೆಯ ದಿನವಾಗಿದೆ. ಮಾರ್ಚ್ 27ರ ನಂತರ ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ನಾಮಪತ್ರ ಹಿಂಪಡೆಯಲು ಮಾರ್ಚ್ 29 ಕೊನೆ ದಿನ. ಏಪ್ರಿಲ್ 18 ಚುನಾವಣೆ ನಡೆಯಲಿದೆ.
ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಜ್ಜು
ವಿವಿ ಪ್ಯಾಟ್ ಸರಬರಾಜು
ಮತದಾನ ಎಣಿಕೆ ಮೇ 23 ರಂದು ನಡೆಯಲಿದ್ದು, ಮತದಾನದ ವೇಳೆ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್ ಸಂಪರ್ಕ , ಶೌಚಾಲಯ, ರಾಂಪ್ ವ್ಯವಸ್ಥೆಯನ್ನು ಒದಗಿಸಲು ಕ್ರಮ ವಹಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೂ ಬ್ಯಾಲೆಟ್ ಯೂನಿಟ್ , ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್ ಸರಬರಾಜು ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ
ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ಬಾಲಕೃಷ್ಣ, ಎಸ್ ಪಿ ಅಮಿತ್ ಸಿಂಗ್ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ , ಜಿ.ಪಂ ಸಿಇಓ ಕೆ.ಜ್ಯೋತಿ. ಅಪರ ಜಿಲ್ಲಾಧಿಕಾರಿ ಅನುರಾಧ ಮತ್ತಿತರರು ಭಾಗಿಯಾಗಿದ್ದರು.