Mysuru Dasara 2023: ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಪರೀಕ್ಷೆ ಕಡ್ಡಾಯ, ಈ ನಿರ್ಧಾರ ಏಕೆ?, ಇಲ್ಲಿದೆ ವಿವರ
ಮೈಸೂರು, ಜುಲೈ, 29: ದಸರಾ ಆನೆಗಳ ಆರೋಗ್ಯದ ಮೇಲೆ ವಿಶೇಷ ಕಾಳಜಿವಹಿಸುವ ಉದ್ದೇಶದಿಂದ ಈ ಬಾರಿ ಹೆಣ್ಣಾನೆಗಳಿಗೆ 'ಪ್ರೆಗ್ನೆನ್ಸಿ ಟೆಸ್ಟ್' ನಡೆಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ.
ಕಳೆದ ವರ್ಷ ದಸರಾ ಮಹೋತ್ಸವದಲ್ಲಿ ಗರ್ಭಿಣಿ ಆನೆ ತಂದು ತಾಲೀಮಿಗೆ ಬಳಸಿಕೊಂಡಿದ್ದು ವನ್ಯಜೀವಿ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಲಕ್ಷ್ಮಿ ಎಂಬ ಹೆಸರಿನ ಆನೆಯು ಅರಮನೆ ಅಂಗಳದಲ್ಲೇ ಗಂಡು ಮರಿಗೆ ಜನ್ಮ ನೀಡಿತ್ತು. ಇದರಿಂದ ಅರಣ್ಯ ಇಲಾಖೆ ಮುಜುಗರ ಅನುಭವಿಸಿತ್ತು. ಹಾಗಾಗಿ ಈ ಬಾರಿ ಆನೆಗಳ ಆರೋಗ್ಯದತ್ತ ಕಾಳಜಿ ವಹಿಸುವ ಜೊತೆಗೆ ಗಜಪಡೆಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಲು ಮುಂದಾಗಿದೆ.

ಪ್ರೆಗ್ನೆನ್ಸಿ ಟೆಸ್ಟ್ ಕಡ್ಡಾಯ
ಈ ಬಾರಿ ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆಸ್ಸಿ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಎಪಿಸಿಸಿಎಫ್ ಶಾಶ್ವತಿ ಮಿಶ್ರಾ ಅವರು ಹೆಣ್ಣಾನೆಗಳಿಗೆ ಕಡ್ಡಾಯವಾಗಿ ರಕ್ತ ಹಾಗೂ ಮೂತ್ರ ಪರೀಕ್ಷೆ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ನಾಲ್ಕು ಕ್ಯಾಂಪ್ನಲ್ಲಿರುವ ಹೆಣ್ಣಾನೆಗಳ ಸ್ವಭಾವ, ವರ್ತನೆ ಮೇಲೆ ಹೆಚ್ಚು ನಿಗಾ ಇರಿಸಲು ನಿರ್ದೇಶನ ನೀಡಿದ್ದಾರೆ. ಹೀಗೆ ಕಳೆದ ಬಾರಿ ಆದ ತಪ್ಪು ಮರುಕಳಿಸದಂತೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ.
ಪ್ರತಿ ಅನೆಗೂ ಹೆಲ್ತ್ ಕಾರ್ಡ್
ಪ್ರತಿವರ್ಷ ಆನೆಗಳನ್ನು ದಸರೆಗೆ ಕರೆತರುವ ಮುನ್ನ ಸಾಮಾನ್ಯ ತಪಾಸಣೆ ನಡೆಸಲಾಗುತ್ತಿತ್ತು. ಆದರೆ, ಆನೆಗಳ ವರ್ತನೆ, ಆರೋಗ್ಯ ಸ್ಥಿತಿ ಹೇಗಿದೆ? ಗರ್ಭಧರಿಸಿದೆಯೇ? ಎಂಬುದರ ಬಗ್ಗೆ ನಿಖರ ಮಾಹಿತಿ ಲಭಿಸುತ್ತಿರಲಿಲ್ಲ. ಇದೀಗ ಆನೆಗಳನ್ನು ಸಂಪೂರ್ಣ ತಪಾಸಣೆ ನಡೆಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ. ಆನೆ ಹೆಸರು, ವಯಸ್ಸು, ತೂಕ, ಎತ್ತರ, ಏನಾದರೂ ಕಾಯಿಲೆ ಇದೆಯೇ? ಪಾದ ಹೇಗಿದೆ? ಹೆಣ್ಣಾನೆಯಾದರೆ ಗರ್ಭ ಧರಿಸಿದೆಯೇ? ಎಂಬುದನ್ನು ಪರಿಶೀಲಿಸಿ ಅದನ್ನು ಹೆಲ್ತ್ ಕಾರ್ಡ್ನಲ್ಲಿ ನಮೂದಿಸುತ್ತಾರೆ. ಹೀಗೆ ಪ್ರತಿ ಅನೆಗೂ ಒಂದೊಂದು ಹೆಲ್ತ್ ಕಾರ್ಡ್ ಇರುತ್ತದೆ.
ಅರ್ಜುನನಿಗೆ ಕೊಕ್ ಏಕೆ?
ಕಳೆದ ವರ್ಷ ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿದ್ದ ಅರ್ಜುನನಿಗೆ ಈ ಬಾರಿ ಕೊಕ್ ನೀಡಲಾಗಿದೆ. ವಯಸ್ಸಾಗಿರುವ ಕಾರಣ ಅರ್ಜುನನನ್ನು ದಸರೆಯಿಂದ ಕೈಬಿಡಲಾಗಿದೆ. ಇನ್ನು ಗೋಪಾಲಸ್ವಾಮಿ ಆನೆ ಇತ್ತೀಚಿಗೆ ಕಾಡಾನೆ ದಾಳಿಗೆ ಒಳಗಾಗಿ ಮೃತಪಟ್ಟಿತ್ತು. ಲಕ್ಷ್ಮಿ ಗಂಡು ಮರಿಗೆ ಜನ್ಮ ನೀಡಿರುವುದರಿಂದ ಈ ಬಾರಿಯೂ ಬರುವುದಿಲ್ಲ. ಹಾಗಾಗಿ ಈ ಬಾರಿ ಹೆಚ್ಚು ಹೊಸ ಆನೆಗಳನ್ನು ನಿರೀಕ್ಷೆ ಮಾಡಲಾಗಿದೆ.
"ದಸರೆಗೆ ಕರೆತರಬಹುದಾದ ಆನೆಗಳ ಆರೋಗ್ಯ ತಪಾಸಣೆ, ಹೆಣ್ಣಾನೆಗಳಾದರೆ ಗರ್ಭ ಧರಿಸಿದೆಯೇ? ಎಂಬ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ನಾನಾ ಆನೆ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ," ಎಂದು ಸಿಎಫ್ ಡಾ.ಮಾಲತಿಪ್ರಿಯ ತಿಳಿಸಿದ್ದಾರೆ.
ಈ ಬಾರಿ ಅದ್ಧೂರಿ ದಸರಾ
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಹಬ್ಬಕ್ಕೆ ನೆಂಟರಿಷ್ಟರನ್ನು ಕರೆದು ಅರ್ಧ ಊಟ ಮಾಡಿ ಎಂದು ಹೇಳಲು ಸಾಧ್ಯನಾ? ಕಷ್ಟ ಇರಲಿ ಸುಖ ಇರಲಿ ಮರಿಯಂತು ಹೊಡೆಯುತ್ತೇವೆ. ದಸರಾ ಮಹೋತ್ಸವವನ್ನೂ ಹಾಗೆ ಎಲ್ಲರನ್ನು ಕರೆದು ಅದ್ದೂರಿಯಾಗಿಯೇ ಮಾಡೋಣ. ಕೋವಿಡ್ನಿಂದ ಜನ ತತ್ತರಿಸಿ ಹೋಗಿದ್ದರು. ಎಲ್ಲರೂ ಇದೀಗ ಸುಲಲಿತವಾಗಿರುವಾಗ ನಾಡು ಸುಭಿಕ್ಷೆಯಿಂದ ಇರುತ್ತದೆ. ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದರು.












Click it and Unblock the Notifications