ಅ.5ರಿಂದ ಮೂರು ದಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧ
ಮೈಸೂರು, ಅಕ್ಟೋಬರ್ 4: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಅಕ್ಟೋಬರ್ 5ರಿಂದ (ನಾಳೆ) ಭಕ್ತರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಅಕ್ಟೋಬರ್ 6ರಂದು ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
ಇನ್ನು ಅಕ್ಟೋಬರ್ 7ರಂದು ವಿಶ್ವವಿಖ್ಯಾತ ಮೈಸೂರು ದಸರಾ 2021ರ ಉದ್ಘಾಟನಾ ಮಹೋತ್ಸವ ಉದ್ಘಾಟನೆಗೊಳ್ಳಲಿದೆ. ಮಾಜಿ ಸಿಎಂ ಎಸ್.ಎಂ. ಕೃಷ್ಣರವರು ಈ ಬಾರಿಯ ಮೈಸೂರು ದಸರಾಗೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಲಿದ್ದಾರೆ.

ಹೀಗಾಗಿ ಅಕ್ಟೋಬರ್ 05ರಂದು ಬೆಳಗಿನ ಜಾವ 4 ಗಂಟೆಯಿಂದ ಅಕ್ಟೋಬರ್ 07ರ ಮಧ್ಯಾಹ್ನದ ವರೆಗೂ ನಿರ್ಬಂಧ ಹೇರಲಾಗಿದೆ. ಆದರೆ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಎಂದಿನಂತೆ ನಡೆಯಲಿದೆ. ಅಲ್ಲದೆ ಮೆಟ್ಟಿಲು ಮಾರ್ಗದಿಂದಲೂ ಚಾಮುಂಡಿ ದೇವಸ್ಥಾನಕ್ಕೆ ಭಕ್ತರ ನಿರ್ಬಂಧವಿದೆ.
ದಾಸೋಹ, ಊಟದ ವ್ಯವಸ್ಥೆ ಮಾಡುವುದು ಅಥವಾ ಪ್ರಸಾದ ವಿತರಣೆಗೂ ಬ್ರೇಕ್ ಹಾಕಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರವು ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು, ತುರ್ತು ಸೇವಾ ವಾಹನಗಳು ಹಾಗೂ ಚಾಮುಂಡಿ ಬೆಟ್ಟದ ಸುತ್ತಲಿನ ಗ್ರಾಮಸ್ಥರನ್ನು ಹೊರತುಪಡಿಸಿ ಎಲ್ಲರಿಗೂ ನಿರ್ಬಂಧ ಹೇರಿ ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ವಿದ್ಯುದ್ದೀಪಗಳಿಂದ ಝಗಮಗಿಸಲಿದೆ ಮೈಸೂರು
ವಿದ್ಯುದ್ದೀಪದ ಮೂಲಕ ಮೈಸೂರು ದಸರಾಕ್ಕೆ ಮೆರಗು ನೀಡುವ ಕೆಲಸ ಭರದಿಂದ ಸಾಗಿದೆ. ನಗರದ ಬಹುತೇಕ ಕಡೆಗಳಲ್ಲಿ ದೀಪ ಅಳವಡಿಕೆ ಕಾರ್ಯ ಮುಗಿದಿದ್ದು, ಇಡೀ ಮೈಸೂರು ನಗರ ವಿದ್ಯುದ್ದೀಪದ ರಂಗಿನಲ್ಲಿ ಮಿಂಚಲು ಸಜ್ಜಾಗುತ್ತಿದೆ.
ಮೈಸೂರು ದಸರಾ ಸಂಭ್ರಮ ಕಳೆದ ಎರಡು ವರ್ಷಗಳಿಂದ ಕಳೆಗುಂದಿದೆ. ಆದರೆ ದೀಪ ಅಳವಡಿಕೆಯಿಂದ ಮೇಲ್ನೋಟಕ್ಕೆ ಸ್ವರ್ಗವೇ ಧರೆಗಿಳಿದ ಅನುಭವವಾಗುತ್ತದೆ. ಝಗಮಗಿಸುವ ಬೆಳಕಿನಲ್ಲಿ ಸುತ್ತಾಡುವುದೇ ಒಂಥರಾ ಮಜಾ ನೀಡುತ್ತದೆ. ಅ.7ರಿಂದ ರಾತ್ರಿಯಾಗುತ್ತಿದ್ದಂತೆಯೇ ಇಡೀ ಮೈಸೂರು ನಗರ ವಿದ್ಯುತ್ ಬೆಳಕಿನಲ್ಲಿ ಝಗಮಗಿಸುತ್ತಾ ಸ್ವರ್ಗ ಲೋಕವೇ ಧರೆಗಿಳಿದಂತೆ ಭಾಸವಾಗಲಿದೆ.
ಇದಕ್ಕಾಗಿ ಮೈಸೂರು ನಗರದ ಪ್ರಮುಖ ವೃತ್ತಗಳಾದ ರಾಮಸ್ವಾಮಿ, ಚಾಮರಾಜ, ಕೃಷ್ಣರಾಜ, ಜೆಎಸ್ಎಸ್ ವಿದ್ಯಾಪೀಠದ ಬಳಿಯ ಬಸವೇಶ್ವರ ವೃತ್ತ, ಪಾಲಿಕೆ ಕಚೇರಿ, ಅಗ್ರಹಾರ, ಸಿದ್ದಪ್ಪ ವೃತ್ತ, ಆಯುರ್ವೇದ ಆಸ್ಪತ್ರೆ, ಆರ್ಟಿಒ ಹೀಗೆ ನಗರದ ಸುಮಾರು ನಲವತ್ತಕ್ಕೂ ಹೆಚ್ಚಿನ ವೃತ್ತಗಳಿಗೆ ಹಾಗೂ ಪ್ರಮುಖ ರಸ್ತೆಗಳಾದ ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಮೈಸೂರು- ಬೆಂಗಳೂರು ರಸ್ತೆ, ಚಾಮರಾಜ ಜೋಡಿ ರಸ್ತೆ, ಎಂ.ಜಿ. ರಸ್ತೆ, ಜೆಎಲ್ಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳನ್ನು ವಿದ್ಯುದ್ದೀಪ ಅಲಂಕಾರ ಮಾಡಿದ್ದು, ಹೊಸಲೋಕಕ್ಕೆ ಕರೆದೊಯ್ದ ಅನುಭವ ನೀಡಲಿದೆ.












Click it and Unblock the Notifications