ಮೈಸೂರು ದಸರಾ; ಆನೆಗಳಿಗೆ ಬೀಳ್ಕೊಡುಗೆ, ಲಾರಿ ಹತ್ತಲು ಶ್ರೀರಾಮ ನಕಾರ
ಮೈಸೂರು, ಅಕ್ಟೋಬರ್, 07: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಸಂಭ್ರಮ-ಸಡಗರ ಮುಗಿದಿದೆ. ಜಂಬೂಸವಾರಿಯಲ್ಲಿ ಗಜಪಡೆ ಯಶಸ್ವಿಯಾಗಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಶುಕ್ರವಾರ ಅರಮನೆಯಿಂದ ಕಾಡಿಗೆ ಆನೆಗಳನ್ನು ಬೀಳ್ಕೊಡಲಾಯಿತು. ಇದೇ ಮೊದಲ ಬಾರಿಗೆ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದ ಶ್ರೀರಾಮ ಆನೆ ಲಾರಿ ಹತ್ತಲು ನಕಾರ ಮಾಡಿದ್ದು, ಈ ದೃಶ್ಯ ಗಮನ ಸೆಳೆದಿದೆ.
ಎರಡು ವರ್ಷ ಸರಳವಾಗಿ ದಸರಾ ನಡೆದ ಹಿನ್ನೆಲೆಯಲ್ಲಿ ಅರಮನೆ ಒಳಗೆ ಜಂಬೂಸವಾರಿ ಮೆರವಣಿಗೆ ಸಾಗಿ ಬಂದಿತ್ತು. ಹಾಗಾಗಿ ಹೆಚ್ಚಿನ ಜನರು ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಅದ್ಧೂರಿಯಾಗಿ ದಸರಾ ನಡೆದ ಹಿನ್ನೆಲೆಯಲ್ಲಿ ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿತ್ತು. ಬುಧವಾರ ಐತಿಹಾಸಿಕ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ಧ ದಸರಾ ಗಜಪಡೆ ಮರಳಿ ಸ್ವಸ್ಥಾನಕ್ಕೆ ವಾಪಸಾದವು. ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಟ್ಟಿದ್ದವು.
ಮೈಸೂರು ದಸರಾದಲ್ಲಿ ಗಮನ ಸೆಳೆಯಲಿರುವ 47 ಸ್ತಬ್ಧ ಚಿತ್ರಗಳು
ಬೆಳಗ್ಗೆಯೇ ಮಾವುತರು ಹಾಗೂ ಕಾವಾಡಿಗರು ತಮ್ಮ ಆನೆಗಳಿಗೆ ಸ್ನಾನ ಮಾಡಿಸಿ, ಭೋಜನ ನೀಡಿದರು. ನಂತರ ಅರ್ಚಕ ಪ್ರಹ್ಲಾದ್ ಜೋಶಿ ಎಲ್ಲಾ ಆನೆಗಳಿಗೆ ಪೂಜೆ ಸಲ್ಲಿಸಿದರು. ಎರಡು ತಿಂಗಳ ಮುಂಚೆಯೇ ಅರಮನೆಗೆ ಬಂದಿದ್ದ ಆನೆಗಳನ್ನು ಬೀಳ್ಕೊಡುವಾಗ ಭಾವುಕ ವಾತಾವರಣ ನಿರ್ಮಾಣ ಆಗಿತ್ತು. ಕ್ಯಾಪ್ಟನ್ ಅಭಿಮನ್ಯು, ಭೀಮ, ಅರ್ಜುನ, ಗೋಪಿ, ಗೋಪಾಲಸ್ವಾಮಿ, ಕಾವೇರಿ, ಚೈತ್ರಾ, ವಿಜಯ, ಮಹೇಂದ್ರ, ಪಾರ್ಥ ಸಾರಥಿ, ಧನಂಜಯ, ಶ್ರೀರಾಮ ಆನೆಗಳನ್ನು ಜನರು ಅರಮನೆಯೊಳಗೆ ಮತ್ತೊಮ್ಮೆ ಕಣ್ತುಂಬಿಸಿಕೊಂಡು ಬೀಳ್ಕೊಟ್ಟರು.
ಕಾಡಿಗೆ ಮರಳಲು ಶ್ರೀರಾಮ ಹಿಂದೇಟು
ಇದೇ ಮೊದಲ ಬಾರಿಗೆ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದ ಶ್ರೀರಾಮ ಆನೆ ಲಾರಿ ಹತ್ತಲು ನಕಾರ ಮಾಡಿದ್ದಾನೆ. ಎಲ್ಲಾ ಆನೆಗಳು ಯಾವುದೇ ಕಿರಿಕಿರಿ ಮಾಡದೆ ಲಾರಿ ಹತ್ತಿದರೆ, ಶ್ರೀರಾಮ ಮಾತ್ರ ಲಾರಿ ಹತ್ತಲು ಒಪ್ಪಲಿಲ್ಲ. ಕಳೆದ ಎರಡು ತಿಂಗಳಿನಿಂದ ನಾಡಿನಲ್ಲೇ ಇದ್ದು, ಈಗ ಕಾಡಿಗೆ ಹೋಗಲು ಭೀಮ ಮತ್ತು ಶ್ರೀರಾಮ ಆನೆಗಳು ಹಿಂದೇಟು ಹಾಕಿದವು. ಈ ವೇಳೆ ಲಾರಿಗೆ ಏರಿಸಲು ಮಾವುತರು ಹರಸಾಹಸಪಟ್ಟರು. ಅಭಿಮನ್ಯು ಮೂಲಕ ನೂಕಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಮಾವುತರು ಹಾಗೂ ಕಾವಾಡಿಗರು ಬಂದು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ.
ಜಂಬೂ ಸವಾರಿ ಯಶಸ್ವಿಗೊಳಿಸಿ ರಿಲ್ಯಾಕ್ಸ್ ಮೂಡ್ಗೆ ತೆರಳಿದ ಗಜಪಡೆ
ಹರಸಾಹನ ಪಟ್ಟ ಮಾವುತರು
ಸುಮಾರು ಗಂಟೆಗಳ ಕಾಲ ಶ್ರೀರಾಮ ಸತಾಯಿಸಿದ್ದಾನೆ. ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟೇ ಪೇಚಾಡಿದರೂ ಕೂಡ ಶ್ರೀರಾಮ ಜಗ್ಗಲಿಲ್ಲ. ಕೊನೆಗೆ ಅಭಿಮನ್ಯುವಿನ ಮೂಲಕ ನೂಕಿಸಿದರೂ ಶ್ರೀರಾಮ ಲಾರಿ ಏರದೇ ನಿಂತಲ್ಲೇ ಮಲಗಿಬಿಟ್ಟಿತು. ಕೊನೆಗೂ ಅಭಿಮನ್ಯು ಮೂಲಕವೇ ತಳ್ಳಿ ಶ್ರೀರಾಮನನ್ನು ಲಾರಿ ಏರಿಸಲಾಯಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಉಳಿದ ಆನೆಗಳು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಂಡು ಇದೀಗ ತವರಿಗೆ ಪಯಣ ಬೆಳೆಸಿವೆ.
ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಗಾದಿ ಗೌತಮ್, ಡಿಸಿಎಫ್ ಕರಿಕಾಳನ್ ಸೇರಿದಂತೆ ಇತರೆ ಅರಣ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಂದರ್ಭಲ್ಲಿ ಜಿಲ್ಲಾಡಳಿತದ ವತಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಅಭಿಮನ್ಯು ಗಾಂಭೀರ್ಯ ನಡೆಗೆ ಜನರು ಫಿದಾ!
ಅಭಿಮನ್ಯು ಮೂರನೇ ಬಾರಿ ಅಂಬಾರಿ ಹೊತ್ತು ಯಶಸ್ವಿಯಾಗಿ ಬನ್ನಿಮಂಟಪ ತಲುಪಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಹಿಡಿದು ಮಾವುತರು ಹಾಗೂ ಕಾವಾಡಿಗರು ಸಂಭ್ರಮದಲ್ಲಿದ್ದರು. ಬುಧವಾರ ದಸರಾ ಜಂಬೂ ಸವಾರಿ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಅಭಿಮನ್ಯು ನೇತೃತ್ವದ ಗಜಪಡೆ ಅರಮನೆ ಆವರಣದಲ್ಲಿ ದಣಿವಾರಿಸಿಕೊಂಡವು. ಅಭಿಮನ್ಯು ಮಾವುತ ವಸಂತ ಯುದ್ಧ ಗೆದ್ದ ಸಂಭ್ರಮದಲ್ಲಿದ್ದಾರೆ. ಅಲ್ಲದೆ ಇತರೆ ಆನೆಗಳು ಯಾವುದೇ ಸಮಸ್ಯೆ ಇಲ್ಲದೆ ಮೆರವಣಿಯಲ್ಲಿ ಸಾಗಿ ಬಂದವು. ಈ ಹಿನ್ನೆಲೆಯಲ್ಲಿ ಗುರುವಾರ ಆನೆಗಳಿಗೆ ಮೀಸಲಾದ ಅರಮನೆ ಆವರಣದಲ್ಲಿ ನಿರ್ಮಿಸಿರುವ ತೊಟ್ಟಿಯಲ್ಲಿ ಸ್ನಾನ ಮಾಡಿಸಲಾಗಿತ್ತು. ಗುರುವಾರ ಆನೆಗಳಿಗೆ ಯಾವುದೇ ತಾಲೀಮು, ಕಸರತ್ತು ಇರಲಿಲ್ಲ. ಹಾಗಾಗಿ ಆನೆಗಳು ರಿಲ್ಯಾಕ್ಸ್ ಮೂಡ್ಗೆ ಜಾರಿದ್ದವು. ಮಾವುತರು ಆನೆಗಳನ್ನು ತೊಳೆಯುತ್ತಿದ್ದರೆ, ನೀರಿನಲ್ಲಿ ಆಟವಾಡುತ್ತಾ ಆನೆಗಳು ನಿರಾಳ ಆಗಿದ್ದವು.
ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ ಜನ
ಜಂಬೂಸವಾರಿ ಮುಗಿದ ತಕ್ಷಣ ದಸರಾ ಆನೆಗಳು ಅರಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರೆ, ಜನರು ತಮ್ಮ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ದಸರಾ ಸಂಭ್ರಮ ಮುಗಿದರೂ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಏರುತ್ತಲೇ ಇತ್ತು. ಗುರುವಾರ ಸಾಕಷ್ಟು ಜನ ಆನೆಗಳೊಡನೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದರು. ಮಾವುತರು ಹಾಗೂ ಕಾವಾಡಿಗರು ಯಾವುದೇ ಪ್ರತಿರೋಧ ತೋರದೆ ಜನರಿಗೆ ಫೋಟೋ ತೆಗೆಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದರು.