ಗಣೇಶ ಚತುರ್ಥಿಯಂದು ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಮೈಸೂರು, ಸೆಪ್ಟೆಂಬರ್ 2 : ಸಾಂಸ್ಕೃತಿಕ ನಗರಿಯಲ್ಲಿ ನಿಜವಾದ ಗಣಪನಿಗೆ ಪೂಜೆ ಸಲ್ಲಿಸಲಾಯಿತು. ಅರೇ ಇದೇನಪ್ಪಾ ಎಂದು ಅಚ್ಚರಿ ಪಡಬೇಡಿ. ಮೈಸೂರು ದಸರಾ ಅರಮನೆಯ ಆನೆಗಳಿಗೆ ಸೋಮವಾರ ಗಣೇಶ ಚತುರ್ಥಿ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು.
ವಿಘ್ನನಿವಾರಕನ ಆರಾಧನೆ ದಿನದಂದು ಗಜಪಡೆಯ ಆನೆಗಳಿಗೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಪೂಜೆ ಮಾಡಯಿತು. ಅರಮನೆಯ ಆವರಣಕ್ಕೆ ಆಗಮಿಸಿರುವ ಮೊದಲ ತಂಡದ ಗಜಪಡೆಯ 6 ಆನೆಗಳು ಪೂಜೆ ಸ್ವೀಕರಿಸಿದವು.
ಹೂಗಳಿಂದ ಅಲಂಕೃತಗೊಂಡ ಗಜಪಡೆಯ ಆನೆಗಳಿಗೆ, ಫಲತಾಂಬೂಲ ನೀಡಿ ಸತ್ಕರಿಸಲಾಯಿತು. ಇನ್ನು ಪೂಜೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಆನೆಗಳಿಗೆ ಬೆಲ್ಲ, ಕಬ್ಬನ್ನು ನೀಡಿ ಪೂಜೆ ನೆರವೇರಿಸಿದರು.

ಫಿರಂಗಿಗಳಿಗೆ ವಿಶೇಷ ಪೂಜೆ : ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನಲೆ ಫಿರಂಗಿಗಳಿಗೆ ಜಿಲ್ಲಾ ಪೊಲೀಸ್ ಆಯುಕ್ತರು ಪೂಜೆ ಸಲ್ಲಿಸಿದರು. ಅರಮನೆ ಆಡಳಿತ ಮಂಡಳಿಯಿಂದ ಪೊಲೀಸ್ ಇಲಾಖೆಗೆ ಫಿರಂಗಿಗಳ ಹಸ್ತಾಂತರದ ಬಳಿಕ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅರಮನೆ ಆವರಣದಲ್ಲಿ ಫಿರಂಗಿಗಳಿಗೆ ಪೂಜೆ ನೆರವೇರಿಸಿದರು.
ನಾಳೆಯಿಂದ ಫಿರಂಗಿ ತಾಲೀಮಿನಲ್ಲಿ ಪೊಲೀಸರು ಭಾಗವಹಿಸಲಿದ್ದು. ಮೂರು ದಿನಗಳ ಬಳಿಕ ಗಜಪಡೆಗೆ ತಾಲೀಮು ನಡೆಯಲಿದೆ.












Click it and Unblock the Notifications