Mysuru dasara 2023: ಅರಮನೆಗೆ ಎರಡನೇ ತಂಡದ ಆನೆಗಳ ಎಂಟ್ರಿ
ಮೈಸೂರು, ಸೆಪ್ಟೆಂಬರ್, 26: ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಗಜಪಡೆಯ 2ನೇ ತಂಡ ಅರಮನೆಗೆ ಆಗಮಿಸಿದ್ದು, 14 ಆನೆಗಳು ಇದೀಗ ಅಂಬಾವಿಲಾಸದಲ್ಲಿ ಬೀಡುಬಿಟ್ಟಂತಾಗಿದೆ.
5 ಆನೆಗಳಲ್ಲಿ ಮೂರು ಆನೆಗಳು ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ರಾಂಪುರ ಆನೆ ಶಿಬಿರದ ಹಿರಣ್ಯಾ, ರೋಹಿತ್, ದೊಡ್ಡಹರವೆ ಶಿಬಿರದ ಲಕ್ಷ್ಮೀ ಆನೆಗಳು ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿವೆ. ಉಳಿದಂತೆ ದುಬಾರೆ ಶಿಬಿರದ ಪ್ರಶಾಂತ ಮತ್ತು ಸುಗ್ರೀವ ಆನೆಗಳು ಈ ಹಿಂದಿನ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದವು.

ವಿವಿಧ ಆನೆ ಶಿಬಿರಗಳಿಂದ ಸುಗ್ರೀವ, ಪ್ರಶಾಂತ, ಲಕ್ಷ್ಮೀ, ರೋಹಿತ್ ಮತ್ತು ಹಿರಣ್ಯಾ ಆನೆಗಳು ಟ್ರಕ್ಗಳ ಮೂಲಕ ನೇರವಾಗಿ ಅರಮನೆಗೆ ಬಂದಿಳಿದವು. 2ನೇ ತಂಡದಲ್ಲಿ ಬಂದ 5 ಆನೆಗಳಿಗೆ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರನಾಥ ದೇವಾಲಯ ಬಳಿ ಪಾದ ತೊಳೆದು, ಹರಿಶಿನ-ಕುಂಕುಮ ಹಚ್ಚಿ ಸೇವಂತಿಗೆ ಹೂ ಇರಿಸಿ ಬಳಿಕ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಎಲ್ಲಾ ಆನೆಗಳಿಗೂ ಕಬ್ಬು-ಬೆಲ್ಲವನ್ನು ನೀಡಲಾಯಿತು.
ನಂತರ ಡಿಸಿಎಫ್ ಸೌರಭ್ ಕುಮಾರ್ ಮಾತನಾಡಿ, 2ನೇ ತಂಡದಲ್ಲಿ 5 ಆನೆಗಳು ಮೈಸೂರಿಗೆ ಬಂದಿದ್ದು, ಗಜಪಡೆಯಲ್ಲೀಗ 14 ಆನೆಗಳಿವೆ. ಮೊದಲ ತಂಡದಲ್ಲಿ ಕರೆತಂದಿದ್ದ 9 ಆನೆಗಳಿಗೆ ಪೌಷ್ಟಿಕ ಆಹಾರ ನೀಡುವ ಜೊತೆಗೆ ನಿತ್ಯ ತಾಲೀಮು ನಡೆಸಲಾಗುತ್ತಿದೆ. ಅಭಿಮನ್ಯು, ಮಹೇಂದ್ರ, ಧನಂಜಯ, ಭೀಮ ಮತ್ತು ಕಂಜನ್ ಆನೆಗಳಿಗೆ 550 ಕೆ.ಜಿ. ಭಾರ ಹಾಕಿ ತಾಲೀಮು ನಡೆಸಿದ್ದು, ಎಲ್ಲಾ ಆನೆಗಳು ತಾಲೀಮನ್ನು ಯಶಸ್ವಿಗೊಳಿಸಿವೆ ಎಂದು ತಿಳಿಸಿದ್ದಾರೆ.
ಈ ಬಾರಿ ದಸರಾದಲ್ಲಿ ಏನಿರುತ್ತೆ? ಏನಿರಲ್ಲ?
ಮೈಸೂರು, ಸೆಪ್ಟೆಂಬರ್, 25: ಕಾವೇರಿ ವಿವಾದ ಹಾಗೂ ಬರಗಾಲದ ಹಿನ್ನೆಲೆ ಈ ಬಾರಿ ಸರಳ ದಸರಾ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಎಂದಿನಂತೆ ಸಾಂಪ್ರದಾಯಿಕ ದಸರಾ ನಡೆಯಲಿದ್ದು, ಹಲವಾರು ಕಾರ್ಯಕ್ರಮಗಳಿಗೂ ಕೋಕ್ ಬೀಳುವ ಸಾಧ್ಯತೆ ಇದೆ. ಹಾಗಾದರೆ ಈ ಬಾರಿಯ ದಸರಾ ಮಹೋತ್ಸವದಲ್ಲಿ ಏನುಂಟು ಏನಿಲ್ಲ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್.ಸಿ.ಮಹದೇವಪ್ಪ ಹೇಳುವಂತೆ, ದಸರಾ ಆಚರಣೆಯಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮವು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಇರಬೇಕು. ಈ ಬಾರಿ ಅದ್ಧೂರಿಯಲ್ಲದ ಹಾಗೂ ಸರಳವೂ ಅಲ್ಲದ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಯುವ ದಸರಾ ನಡೆಯೋದು ಡೌಟ್
ಪ್ರತಿವರ್ಷ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಯುವ ದಸರಾ ನೋಡಲು ವಿದ್ಯಾರ್ಥಿಗಳ ದಂಡೇ ಬರುತ್ತದೆ. ದಸರಾದಲ್ಲಿ ಅತಿಹೆಚ್ಚು ಜನ ಸೇರುವ ಕಾರ್ಯಕ್ರಮಗಳಲ್ಲಿ ಯುವ ದಸರಾವೂ ಒಂದು. ಈ ಒಂದು ಕಾರ್ಯಕ್ರಮಕ್ಕೆ ಅಂದಾಜು 8 ಕೋಟಿ ರೂಪಾಯಿ ಬೇಕು. ಆದರೆ, ಈ ಬಾರಿ ಬರಗಾಲ ಇರುವುದರಿಂದ ಸರ್ಕಾರ ಸರಳ ದಸರಾ ಆಚರಿಸುವ ತೀರ್ಮಾನ ಮಾಡಿರುವ ಹಿನ್ನೆಲೆಯಲ್ಲಿ ಯುವ ದಸರಾ ನಡೆಯುವುದು ಡೌಟು. ಬದಲಿಗೆ ಯುವ ಸಂಭ್ರಮ ನಡೆಸುವ ಆಲೋಚನೆ ಜಿಲ್ಲಾಡಳಿತ ಇದೆ.
ಜಲಸಾಹಸ ಕ್ರೀಡೆ ಇಲ್ಲ
ದಸರಾ ಎಂದರೆ ಅಲ್ಲಿ ಕ್ರೀಡಾಕೂಟಕ್ಕೂ ಅಷ್ಟೇ ಮಹತ್ವ ಇದೆ. ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಆಗಮಿಸುತ್ತಾರೆ. ದಸರಾ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಹೆಮ್ಮೆಯ ಜೊತೆಗೆ, ಆಟಗಾರನ ಕನಸು ಕೂಡ. ಕ್ರೀಡಾಕೂಟಕ್ಕೆ ಅಂದಾಜು 5 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಆದರೆ, ಈ ಬಾರಿ ದಸರಾದಲ್ಲಿ ಕ್ರೀಡಾಕೂಟ ನಡೆಯಲಿದೆ. ಆದರೆ, ವರುಣ ಕೆರೆಯಲ್ಲಿ ನಡೆಯುವ ಜಲ, ಸಾಹಸ ಕ್ರೀಡೆಗೆ ಕೋಕ್ ನೀಡುವ ಸಂಭವ ಇದೆ.
ಏರ್ ಶೋ ಇಲ್ಲ
ಸಾಮಾನ್ಯವಾಗಿ ದಸರಾ ಮಹೋತ್ಸವದಲ್ಲಿ ಏರ್ ಶೋ ಕೂಡ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ಮೂಡಿಸುವ ಇದು ಜನರ ನೆಚ್ಚಿನ ಪ್ರದರ್ಶನ. ಒಂದು ಗಂಟೆಯ ಇದಕ್ಕೆ ಸಾಕಷ್ಟು ಜನ ಆಸಕ್ತಿಯಿಂದ ಹೋಗುತ್ತಿದ್ದರು. ಆದರೆ, ಈ ಬಾರಿ ಮಳೆ ಕೊರತೆಯಿಂದ ಬರ ಇರುವುದರಿಂದ ಏರ್ ಶೋ ಅನ್ನು ರದ್ದು ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಸಾಂಸ್ಕೃತಿಕ ಕಾರ್ಯಕ್ರಮ ಅಭಾದಿತ
ಸಚಿವರಾದ ಎಚ್.ಸಿ. ಮಹದೇವಪ್ಪ ಪ್ರಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಪರಂಪರೆಯನ್ನು ಬಿಂಬಿಸುವ ರೀತಿ ಇರಬೇಕು. ಕವಿಗೋಷ್ಠಿಯಲ್ಲಿ ಸಂವಿಧಾನ, ಗಣರಾಜ್ಯ, ಕರ್ನಾಟಕ ಏಕೀಕರಣ, ಮೈಸೂರು ಅರಸರ ಬಗ್ಗೆ ಮಾಹಿತಿ ನೀಡುವ ಜೊತೆಗೆ ಹಾಸ್ಯ ಬರಿತವಾಗಿ ಇರಬೇಕು. ಆಹಾರ ಮೇಳದಲ್ಲಿ ದೇಶೀಯ ಆಹಾರ ಪದ್ಧತಿಯ ಆಹಾರಗಳನ್ನು ನೀಡಬೇಕು ಅಲ್ಲದೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಹಾಗೆಯೇ ಈ ಬಾರಿ ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆ ಮಾಡಬೇಕು. ದಸರಾ ಚಲನ ಚಿತ್ರೋತ್ಸವದಲ್ಲಿ ಸಾಮಾಜಿಕ ಸಂದೇಶ ಸಾರುವ ಚಿತ್ರಗಳನ್ನು ಪ್ರದರ್ಶನ ಮಾಡಬೇಕು. ಯುವ ನಿರ್ದೇಶಕರಿಗೆ ಉತ್ತೇಜನ ನೀಡುವಂತೆ ಇರಬೇಕು. ಕಿರು ಚಿತ್ರಗಳ ಸ್ಪರ್ಧೆ ಏರ್ಪಡಿಸೇಕು ಎಂದು ತಿಳಿಸಿದ್ದಾರೆ. ಜೊತೆ ಫಲಪುಷ್ಪ ಪ್ರದರ್ಶನ ಆಕರ್ಷಣೀಯವಾಗಿ ಇರಬೇಕು. ಹಣ್ಣು ಮೇಳದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಬೆಳೆಯುವ ಹಣ್ಣುಗಳ ಪ್ರದರ್ಶನ ಆಗಬೇಕು. ಈ ವೇಳೆ ರೈತರಿಂದ ನೇರವಾಗಿ ಹಣ್ಣುಗಳ ಖರೀದಿ ಅಗಬೇಕು ಎಂದು ತಿಳಿಸಿದ್ದಾರೆ.












Click it and Unblock the Notifications