ಮೈಸೂರು ದಸರಾ; ರೈತ ದಸರಾಗೆ ಅದ್ಧೂರಿ ಚಾಲನೆ; ಕಲಾ ತಂಡಗಳ ವೈಭವ
ಮೈಸೂರು, ಸೆಪ್ಟೆಂಬರ್, 30: ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಮತ್ತು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ರೈತ ದಸರಾಗೆ ಚಾಲನೆ ನೀಡಿದರು. ನಂದಿ ಪೂಜೆ ನೆರವೇರಿಸಿ, ನಗಾರಿ ಬಾರಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಸಚಿವ ಸೋಮಶೇಖರ್ ಅವರು, ಪ್ರತಿ ತಾಲೂಕಿನಲ್ಲಿ ರೈತ ದಸರಾ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕೃಷಿಕರ ಬಗ್ಗೆ ಸಾಕಷ್ಟು ಕಾಳಜಿ ಹೊಂದಿರುವ ಸಚಿವ ಬಿ.ಸಿ.ಪಾಟೀಲ್ ಅವರು, ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ಮೂಲಕ ರೈತರ ಕಷ್ಟಸುಖಗಳನ್ನು ಆಲಿಸಲಿದ್ದಾರೆ. ಇದರ ಜೊತೆಗೆ ರೈತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ಎಂದರು. ನಂತರ ಸಚಿವರು ಎತ್ತಿನಗಾಡಿಯಲ್ಲಿ ಮೆರವಣಿಗೆಯಲ್ಲಿ ಸಾಗಿದ್ದು, ಪೂರ್ಣಕುಂಭ, ಗಿರಿಜನ ನೃತ್ಯ, ಕೀಲುಗೊಂಬೆ, ಮಂಗಳವಾದ್ಯ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಪ್ರಕಾರದ ಜಾನಪದ ಕಲಾತಂಡಗಳು ಭವ್ಯ ಮೆರವಣಿಗೆಯಲ್ಲಿ ಸಾಗಿದವು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಂಗಲ್ಸ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಮಾಜಿ ಅಧ್ಯಕ್ಷರಾದ ಅಪ್ಪಣ್ಣ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದೊಡ್ಡ ನಾಗಯ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಳಸಂತೆಯಲ್ಲಿ ಗೋಲ್ಡ್ ಕಾರ್ಡ್ ಮಾರಾಟಕ್ಕೆ ಬ್ರೇಕ್
ಕಾಳಸಂತೆಯಲ್ಲಿ ಗೋಲ್ಡ್ ಕಾರ್ಡ್ ಮಾರಾಟದ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್ ಅವರು, ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ. ಆನ್ಲೈನ್ ಮತ್ತು ಆಫ್ ಲೈನ್ ಬಿಡಲಾಗಿತ್ತು. ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಗ್ರಾಮೀಣ ದಸರಾ ಕಾರ್ಯಕ್ರಮದ ವೈಭವ
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ತಾಲ್ಲೂಕಿನ ಜಯಪುರ ಗ್ರಾಮದಲ್ಲಿ ಗುರುವಾರ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮವು ಸಂಭ್ರಮ, ಸಡಗರದಿಂದ ನೆರವೇರಿತ್ತು. ಗ್ರಾಮೀಣ ದಸರಾಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದ್ದರು. ದಾರಿಪುರ ಗ್ರಾಮದ ಕರೂರು ಬಸವೇಶ್ವರ ದೇವಸ್ಥಾನದ ಬಳಿ ದೇವರ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ದರು. ಬಳಿಕ ಮಾತನಾಡಿದ್ದ ಅವರು, ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಅಂಗವಾಗಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಗ್ರಾಮೀಣ ದಸರಾ ಅಚರಣೆ ಮಾಡಲಾಗುತ್ತಿದೆ. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ದಸರಾ ಆಚರಣೆಗೆ ತೊಡಕಾಗಿದ್ದು, ಈ ಬಾರಿ ಅದ್ಧೂರಿ ದಸರಾ ಮಾಡಲಾಗುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ತಿಳಿಸಿದ್ದರು.
ಅದ್ಧೂರಿಯಿಂದ ನಡೆದ ಗ್ರಾಮೀಣ ದಸರಾ
ಈಗಾಗಲೇ ಮೈಸೂರು ತಾಲೂಕಿನಲ್ಲಿ ಅದ್ಧೂರಿಯಿಂದ ಸಂಪ್ರದಾಯಕವಾಗಿ ಗ್ರಾಮೀಣ ದಸರಾ ಆಚರಿಸಲಾಗಿದೆ. ಸಾಂಸ್ಕೃತಿಕ ಕಲಾತಂಡಗಳಿಂದ ಮತ್ತಷ್ಟು ಮೆರಗು ದೊರಕಿತ್ತು. ಬಳಿಕ ಶಾಸಕರಾದ ಜಿ.ಟಿ.ದೇವೇಗೌಡ ಅವರು ಮಾತನಾಡಿದ್ದು, ಗ್ರಾಮೀಣ ಭಾಗದಲ್ಲಿ ಗ್ರಾಮೀಣ ದಸರಾ ಆಚರಣೆ ಮಾಡುತ್ತಿರುವುದು ಬಹಳ ಸಂತೋಷದಾಯಕವಾಗಿದೆ. ದಸರೆಯನ್ನು ಗ್ರಾಮೀಣ ಭಾಗದಲ್ಲಿ ಆಚರಿಸುವ ಮೂಲಕ, ದಸರಾ ಸಂಭ್ರಮವು ಎಲ್ಲರ ಮನೆ ತಲುಪಿತಂದಾಗಿದೆ ಎಂದು ತಿಳಿಸಿದ್ದರು. ತಾಲೂಕಿನಲ್ಲಿ ಗ್ರಾಮೀಣ ದಸರಾವನ್ನು ಬಹಳ ಅಚ್ಚುಕಟ್ಟಾಗಿ ಆಚರಣೆ ಮಾಡಲಾಗುತ್ತಿದ್ದು, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಸರ್ಕಾರದ ಮಾಹಿತಿಯು ಸಾರ್ವಜನಿಕರಿಗೆ ತಿಳಿಸುವಂತಹ ಮಾಹಿತಿ ರಥಗಳನ್ನು ಬಹಳ ವ್ಯವಸ್ಥಿತವಾಗಿ ಆಯೋಜಿಸಿದ್ದಾರೆ ಎಂದು ಹೇಳಿದ್ದರು.
ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದ ಗಜಪಡೆ
ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದ ದಸರಾ ಆನೆಗಳು, ಡೋಲು, ವಾದ್ಯಗಳ ನಿನಾದ, ಟಾಂಗಾ ಸರೋಟು ನಡಿಗೆ, ಸಾಂಸ್ಕೃತಿಕ ಕಲಾ ತಂಡಗಳ ಅದ್ಭುತ ನೃತ್ಯ ಪ್ರದರ್ಶನ, ಸರ್ಕಾರದ ವಿವಿಧ ಯೋಜನೆಗಳ 25 ಮಾಹಿತಿ ರಥಗಳು, 101 ಪೂರ್ಣಕುಂಭ ಸ್ವಾಗತದ ಜೊತೆಗೆ ಜಯಪುರ ಗ್ರಾಮದ ಗುಜ್ಜಮ್ಮ ದೇವಸ್ಥಾನದ ಬಳಿಯ ವೇದಿಕೆ ಕಾರ್ಯಕ್ರಮಕ್ಕೆ ಮೆರವಣಿಗೆಯು ಸಾಗಿತ್ತು. ಗ್ರಾಮೀಣ ದಸರಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿವಿಧ ಇಲಾಖೆಯ ಮಳಿಗೆಗಳನ್ನು ಶಾಸಕರಾದ ಜಿ.ಟಿ.ದೇವೇಗೌಡ ಅವರು ಉದ್ಘಾಟಿಸಿದ್ದರು.
ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಆರ್.ಪೂರ್ಣಿಮಾ ಅವರು ಮಾತನಾಡಿ, ಸಂಭ್ರಮವನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಸರ್ಕಾರವು ಗ್ರಾಮೀಣ ದಸರಾ ಆಚರಿಸಲಾಗುತ್ತದೆ. ಜಯಪುರದಲ್ಲಿ ನಡೆದ ಗ್ರಾಮೀಣ ದಸರಾ ಆಚರಣೆಯೂ ಜಂಬೂ ಸವಾರಿ ಮೆರವಣಿಗೆಯಷ್ಟೇ ಸಂಭ್ರಮದಿಂದ ಕೂಡಿದೆ ಎಂದು ತಿಳಿಸಿದ್ದರು.