'ದಿವಂಗತ' ಕವಿಯಿಂದ ಕವನ ವಾಚನ, ಪ್ರತಾಪಸಿಂಹ ಕ್ಷೇತ್ರ ಬದಲು!: ದಸರಾ ಕವಿಗೋಷ್ಠಿ ಆಹ್ವಾನಪತ್ರಿಕೆಯ ಎಡವಟ್ಟುಗಳು..
ಮೈಸೂರು, ಸೆ.27 : ಈ ಬಾರಿಯ ದಸರಾ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ದೊಡ್ಡದೊಂದು ಪ್ರಮಾದ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಮೃತಪಟ್ಟ ಕವಿಯೊಬ್ಬರ ಹೆಸರನ್ನು ಕವನ ವಾಚನ ಸಾಲಿಗೆ ಸೇರಿಸಿರುವುದಕ್ಕೆ ಸಾಹಿತ್ಯಾಸಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷ ದಸರಾ ಹಬ್ಬದಲ್ಲಿ ಕವಿಗೋಷ್ಠಿ ಆಯೋಜನೆ ಮಾಡಲಾಗುತ್ತದೆ. ಕವಿಗೋಷ್ಠಿಯಲ್ಲಿ ನೂರಾರು ಸಾಹಿತಿಗಳು, ಉದಯೋನ್ಮುಖ ಕವಿಗಳು ತಮ್ಮ ಕವನ ವಾಚನ ಮಾಡುವುದು ವಾಡಿಕೆ. ಇದು ಹೆಮ್ಮೆಯ ಸಂಗತಿ ಕೂಡ ಹೌದು. ಆದರೆ, ಈ ಬಾರಿ ಪ್ರಧಾನ ಕವಿಗೋಷ್ಠಿಯಲ್ಲಿ 3 ವರ್ಷಗಳ ಹಿಂದೆಯೇ ಮೃತಪಟ್ಟಿರುವ ಹಿರಿಯ ಕವಿ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ ಜಿ. ಕೆ.ರವೀಂದ್ರಕುಮಾರ್ ಅವರ ಹೆಸರನ್ನು ಸೇರಿಸಲಾಗಿದೆ. ಇದಕ್ಕೆ ಸಾಹಿತ್ಯ ಪ್ರೇಮಿಗಳ ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಯುವ ದಸರಾ: ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಆಹ್ವಾನ
ಕವನ ವಾಚನ ಮಾಡುವ ಕವಿಗಳು ಜೀವಂತವಾಗಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬುದನ್ನು ಅರಿಯಲು ಆಗದಷ್ಟು ಅಸೂಕ್ಮ ಮನಸ್ಸಿನ ಅಧಿಕಾರಿಗಳನ್ನು ಸಮಿತಿಯಲ್ಲಿ ಕೂರಿಸಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಇದು ತಿಳಿಯುತ್ತಿದ್ದಂತೆ ದಸರಾ ಕವಿಗೋಷ್ಠಿ ಸಮಿತಿ ಅವರ ಹೆಸರು ಬದಲಿಸಿ ಹೊಸ ಆಹ್ವಾನ ಪತ್ರಿಕೆ ರವಾನಿಸಿದೆ. ಈ ಕುರಿತು ಸಮಿತಿ ಕಾರ್ಯಾಧ್ಯಕ್ಷ ಪ್ರೊ. ಎಂ.ಜಿ.ಮಂಜುನಾಥ್ ಅವರನ್ನು ವಿಚಾರಿಸಿದರೆ, ಅದು ಅಧಿಕೃತ ಆಹ್ವಾನ ಪತ್ರಿಕೆಯಲ್ಲ. ಮೊದಲು ಹೆಸರಿತ್ತು. ಅದನ್ನು ತೆಗೆಸಿ ಹೊಸದನ್ನು ನೀಡಲಾಗಿದೆ ಎನ್ನುವ ಉತ್ತರ ನೀಡುತ್ತಾರೆ. ಆದರೆ, ರವೀಂದ್ರಕುಮಾರ್ ಹೆಸರನ್ನು ನೀಡಿದವರು ಯಾರು ಎಂದು ಕೇಳಿದರೆ ಅವರಿಂದ ಸಮರ್ಪಕ ಉತ್ತರ ಬರಲಿಲ್ಲ.
ಇತ್ತೀಚಿಗೆ ಸರಕಾರ ಕೆಲವು ನಿಗಮ ಮಂಡಳಿಗಳಿಗೆ ಕೆಲವರ ಹೆಸರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿತ್ತು. ಅದರಲ್ಲಿ ನಮ್ಮನ್ನು ಅಗಲಿದ್ದ ರಾಜೇಶ್ವರಿ ತೇಜಸ್ವಿ ಅವರ ಹೆಸರನ್ನು ಸೇರಿಸಿತ್ತು. ಇದೀಗ ದಸರಾ ಮುಖ್ಯ ಕವಿಗೋಷ್ಠಿಯಲ್ಲಿ ಇಂತಹ ಮಹಾ ಎಡವಟ್ಟು ಆಗಿದೆ.
ಸಂಸದ ಪ್ರತಾಪಸಿಂಹ ಕ್ಷೇತ್ರವೇ ಬದಲು
ಈ ತಪ್ಪುಗಳ ಸರಮಾಲೆ ಹಾಗೆ ಮುಂದುವರಿಯುತ್ತದೆ. ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪಸಿಂಹ ಅವರ ಕ್ಷೇತ್ರವೇ ಬದಲಾಗಿದೆ. ಚಾಮರಾಜನಗರ ಕ್ಷೇತ್ರದ ಸಂಸದ ಪ್ರತಾಪಸಿಂಹ ಎಂದು ಹೆಸರಿಸಲಾಗಿದೆ. ಇನ್ನು ಈ ಆಹ್ವಾನ ಪತ್ರಿಕೆ ವೈರಲ್ ಆಗಿದ್ದು, ಎಲ್ಲೆಡೆ ಟೀಕೆಗಳು ಕೇಳಿ ಬರುತ್ತಿದೆ.
''ಯಾವುದೇ ಸಮಿತಿಗೆ ಅಧಿಕಾರಿಗಳು ಅಥವಾ ಸದಸ್ಯರನ್ನು ನೇಮಕ ಮಾಡುವ ಮೊದಲು ಅವರು ಆ ಕ್ಷೇತ್ರದ ಪರಿಣಿತರ ಅಥವಾ ಅಲ್ಲವಾ ಎಂಬುದನ್ನು ತಿಳಿದುಕೊಳ್ಳಬೇಕು. ಅದು ಬಿಟ್ಟು ಸಿಕ್ಕಸಿಕ್ಕವರನ್ನು ಸಮಿತಿಗೆ ಆಯ್ಕೆ ಮಾಡಿದರೆ ಇಂತಹ ಎಡವಟ್ಟುಗಳು ಮರುಕಳಿಸುತ್ತಲೇ ಇರುತ್ತದೆ'' ಎಂಬುದು ಸಾರ್ವಜನಿಕರ ಅಭಿಪ್ರಾಯ.