ಮೈಸೂರು ದಸರಾ ವಿಶೇಷ; ಗಜಪಡೆಯ ಶಕ್ತಿ ವೃದ್ಧಿಗೆ ಭಕ್ಷ್ಯ, ಭೋಜನ!
ಮೈಸೂರು, ಸೆಪ್ಟೆಂಬರ್ 23; ಒಂದೆಡೆ ಅರಮನೆ ಆವರಣದಲ್ಲಿ ಜಂಬೂಸವಾರಿಗೆ ಗಜಪಡೆಯನ್ನು ತಾಲೀಮು ಮೂಲಕ ಸಜ್ಜುಗೊಳಿಸುತ್ತಿದ್ದರೆ, ಮತ್ತೊಂದೆಡೆ ಅವುಗಳಿಗೆ ಪೌಷ್ಠಿಕ ಆಹಾರಗಳನ್ನು ನೀಡಿ ದೈಹಿಕ ಆರೋಗ್ಯ ಮತ್ತು ಶಕ್ತಿ ಸಾಮರ್ಥ್ಯವನ್ನು ವೃದ್ಧಿಸುವ ಕಾರ್ಯವೂ ಪ್ರತಿನಿತ್ಯ ನಡೆಯುತ್ತಿದೆ.
ಗಜಪಡೆಗೆ ಹೊತ್ತಿಗೆ ಸರಿಯಾಗಿ ಆಹಾರವನ್ನು ಒದಗಿಸುವುದು ಸುಲಭದ ಕೆಲಸವಲ್ಲ. ಅದರಲ್ಲೂ ದಸರಾ ಗಜಪಡೆಗೆ ನಿಗದಿತ ಮತ್ತು ನಿಯಮಿತ ಪೌಷ್ಠಿಕಾಂಶವುಳ್ಳ ಆಹಾರವನ್ನು ತಯಾರು ಮಾಡಿ ನೀಡುವುದು ಮಾವುತರು ಮತ್ತು ಕಾವಡಿಗಳಿಗೆ ಸವಾಲಿನ ಕೆಲಸ ಎಂದರೂ ತಪ್ಪಾಗಲಾರದು.
ಈ ಬಾರಿಯ ದಸರಾದಲ್ಲಿ ಒಟ್ಟು 8 ಆನೆಗಳು ಪಾಲ್ಗೊಳ್ಳುತ್ತಿವೆ. ಕಾವಡಿ ಮತ್ತು ಮಾವುತರು ಖುಷಿಖುಷಿಯಾಗಿ ತಾವು ನೋಡಿಕೊಳ್ಳುವ ಆನೆಗಳಿಗೆ ಆಹಾರ ತಯಾರಿಸುವುದರಲ್ಲಿ ಮಗ್ನರಾಗಿರುವ ದೃಶ್ಯಗಳು ಅರಮನೆ ಆವರಣದಲ್ಲಿ ಗಮನಸೆಳೆಯುತ್ತಿವೆ. ಗಜಪಡೆ ಕ್ಯಾಪ್ಟನ್ 'ಅಭಿಮನ್ಯು'ವಿಗೆ ವಿಶೇಷ ಆತಿಥ್ಯ ದೊರೆಯುತ್ತದೆ.
ಈ ಬಾರಿಯೂ ವಿಜಯದಶಮಿಯಂದು 'ಅಭಿಮನ್ಯು' ಅಂಬಾರಿ ಹೊರಲಿದೆ. ಕಳೆದ ಬಾರಿ ಅಂಬಾರಿ ಹೊತ್ತು ಸುಸೂತ್ರವಾಗಿ ಜಂಬೂಸವಾರಿಯನ್ನು ನೆರವೇರಿಸಿದ್ದಾನೆ. ಆದರೆ ಆತನ ಬಗ್ಗೆ ತುಸು ಜಾಸ್ತಿ ಕಾಳಜಿಯನ್ನು ವಹಿಸಿ ಶಕ್ತಿಯುತ, ಸ್ವಾದಿಷ್ಟ ಆಹಾರಗಳನ್ನು ನೀಡಿ ದೈಹಿಕವಾಗಿ ಬಲಿಷ್ಠಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಗಜಪಡೆಗೆ ರಾಜಾತಿಥ್ಯದ ಭೋಜನ
ಇದುವರೆಗೆ ಕಾಡಿನಲ್ಲಿ ಸೊಪ್ಪು ಹಾಗೂ ಹುರುಳಿ ಇನ್ನಿತರ ಧಾನ್ಯಗಳನ್ನು ತಿನ್ನುತ್ತಿದ್ದ ಗಜಪಡೆಗೆ ಈಗ ರಾಜಾತಿಥ್ಯದ ಭೋಜನವನ್ನು ನೀಡಲಾಗುತ್ತಿದೆ. ವಿವಿಧ ತರಕಾರಿಗಳು, ಧಾನ್ಯಗಳು, ಬೆಣ್ಣೆ, ಗ್ಲುಕೋಸ್ ಹೀಗೆ ವಿವಿಧ ಬಗೆಯ ಶಕ್ತಿಯುತ ಆಹಾರಗಳನ್ನು ನೀಡಲೇಬೇಕಾಗಿದೆ. ಮೊದಲಿಗೆ ಅವುಗಳು ಈ ಆಹಾರವನ್ನು ಬಾಯಿಚಪ್ಪರಿಸಿಕೊಂಡು ತಿನ್ನುವುದಿಲ್ಲ. ಅವುಗಳಿಗೆ ಅದನ್ನು ಅಭ್ಯಾಸ ಮಾಡಿಸಬೇಕಾಗುತ್ತದೆ. ಈ ಹಿಂದೆ ದಸರಾದಲ್ಲಿ ಪಾಲ್ಗೊಂಡ ಆನೆಗಳಿಗೆ ಸಮಸ್ಯೆಯಾಗುವುದಿಲ್ಲ. ಆದರೆ ಹೊಸದಾಗಿ ಬರುವ ಆನೆಗಳಿಗೆ ಆಹಾರ ಕ್ರಮವೂ ಹೊಸತಾಗಿರುವುದರಿಂದ ಅವುಗಳನ್ನು ಅಭ್ಯಾಸ ಮಾಡಿಸಲಾಗುತ್ತದೆ. ನಂತರ ಅದಕ್ಕೆ ಹೊಂದಿಕೊಳ್ಳುತ್ತವೆ.

ಅರಮನೆ ಆವರಣದಲ್ಲಿಯೇ ತಯಾರಿ
ಕಳೆದ ವರ್ಷದಿಂದ ಜಂಬೂಸವಾರಿ ಅರಮನೆ ಆವರಣದಲ್ಲಿ ನಡೆಯುತ್ತಿದೆ. ಆದರೆ ಈ ಹಿಂದೆ ಚಿನ್ನದ ಅಂಬಾರಿಯನ್ನು ಹೊತ್ತು ಸುಮಾರು 5 ಕಿ.ಮೀ.ದೂರವನ್ನು ಆನೆ ಸಾಗಬೇಕಿತ್ತು. ಹೀಗಾಗಿ ಅವುಗಳ ಆರೋಗ್ಯದ ಜತೆಗೆ ಅವುಗಳನ್ನು ಭಾರಹೊರುವುದಕ್ಕೆ ತಯಾರಿ ಮಾಡಲೆಂದೇ ಸುಮಾರು ಎರಡು ತಿಂಗಳು ಇರುವಾಗಲೇ ಆರೈಕೆ ಮಾಡಲಾಗುತ್ತಿತ್ತು. ಕಳೆದ ಬಾರಿಯಿಂದ ಅರಮನೆ ಆರವರಣದಲ್ಲಿಯೇ ಜಂಬೂ ಸವಾರಿ ನಡೆಯುತ್ತಿರುವುದರಿಂದ ಅಂಬಾರಿ ಹೊರುವ ಆನೆಗೆ ಹೆಚ್ಚಿನ ಶ್ರಮವಿರುವುದಿಲ್ಲ.
ಇನ್ನು ಜಂಬೂಸವಾರಿ ಮತ್ತು ಹಿಂದಿನ ದಿನ ಅಂಬಾರಿ ಹೊರುವ ಆನೆಗೆ ವಿಶೇಷ ಆಹಾರ ನೀಡಲಾಗುತ್ತದೆ. ಅದಕ್ಕೆ ಸ್ಪೆಷಲ್ ಕುಸುರೆ ಎಂದೇ ಹೆಸರು. ಅವಲಕ್ಕಿ, ಗ್ಲುಕೋಸ್, ಬೆಣ್ಣೆ, ಬೆಲ್ಲ, ತೆಂಗಿನಕಾಯಿ ಎಲ್ಲವನ್ನ ಹಸಿ ಹುಲ್ಲಿನಲ್ಲಿ ಸುತ್ತಿ ಕುಸುರೆ ಮಾಡಿ ತಿನ್ನಿಸಲಾಗುತ್ತದೆ. ಜತೆಗೆ ಹಸಿ ಹುಲ್ಲನ್ನು ಕೂಡ ನೀಡಲಾಗುತ್ತದೆ. ಇದು ನೀರಡಿಕೆಯನ್ನು ತಪ್ಪಿಸುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅರಮನೆಯ ಆವರಣಕ್ಕೆ ಪ್ರವೇಶ ಮಾಡಿದ ದಿನದಿಂದ ಅರಣ್ಯಕ್ಕೆ ತೆರಳುವ ತನಕ ಪ್ರತಿದಿನವೂ ಗಜಪಡೆಗೆ ಭಕ್ಷ್ಯ ಭೋಜನ ನಡೆಯುತ್ತಲೇ ಇರುತ್ತದೆ.

ಆನೆಗಳ ಆಹಾರಕ್ಕೆ ಹೆಚ್ಚಿನ ಖರ್ಚು
ಸಾಮಾನ್ಯವಾಗಿ ಜಂಬೂಸವಾರಿಯಲ್ಲಿ ಖರ್ಚಾಗುವ ಹಣದ ಪೈಕಿ ಆನೆಗಳ ಆಹಾರಕ್ಕೆ ಹೆಚ್ಚಿನ ಖರ್ಚಾಗುತ್ತದೆ. ಏಕೆಂದರೆ ಅವುಗಳಿಗೆ ಕೊಡುವ ಆಹಾರದ ಮೇಲೆ ಅವುಗಳ ಶಕ್ತಿ ಸಾಮರ್ಥ್ಯ ಅವಲಂಬಿತವಾಗುತ್ತದೆ. ಉತ್ತಮ ಆಹಾರ ನೀಡಿ ಶಕ್ತಿ, ಸಾಮರ್ಥ್ಯವನ್ನು ಹಿಗ್ಗಿಸಲಾಗುತ್ತದೆ. ಜತೆಗೆ ಅವುಗಳಿಗೆ ವಿಶೇಷ ಆಹಾರ ನೀಡಿ ಉಪಚಾರ ಮಾಡಿದರೆ ಮಾತ್ರ ಜಂಬೂ ಸವಾರಿಯಲ್ಲಿ ಆನೆಗಳು ರಾಜಗಾಂಭೀರ್ಯದಲ್ಲಿ ನಡೆಯಲು ಸಾಧ್ಯ. ಹೀಗಾಗಿ ಆನೆಗಳ ಶಕ್ತಿ ಮತ್ತು ಗಾತ್ರಕ್ಕೆ ಅನುಸಾರವಾಗಿ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಆಹಾರ ಕೊಡಲಾಗುತ್ತದೆ. ಬೆಳಿಗ್ಗೆ ತಾಲೀಮು ನಡೆಸುವ ಮುನ್ನ ಕುಸುರೆ ಎಂದು ಕರೆಯುವ ಹೆಸರು ಕಾಳು, ಹುರುಳಿ ಕಾಳು, ಗೋಧಿ, ಕುಸುಲಕ್ಕಿ ಇವೆಲ್ಲವನ್ನು ಬೇಯಿಸಿ ಉಂಡೆ ಮಾಡಿ ಕೊಡಲಾಗುತ್ತದೆ.

ಗಜಪಡೆಗೆ ಹಸಿರುಸೊಪ್ಪೇ ಚುರುಮುರಿ
ತರಕಾರಿಗಳನ್ನ ಅರ್ಧ ಕೆಜಿ ಬೆಣ್ಣೆಯಲ್ಲಿ ಬೇಯಿಸಿ ಕೊಡಲಾಗುತ್ತದೆ. ಇದೆಲ್ಲ ಮುಗಿದ ನಂತರ ಮಧ್ಯಾಹ್ನದಿಂದ ಸಂಜೆಯವರೆಗೆ ಚುರುಮುರಿಯಂತೆ ಹಸಿರು ಸೊಪ್ಪು ತಿನ್ನುತ್ತಿರುತ್ತವೆ. ಸಂಜೆ ಭತ್ತದ ಹುಲ್ಲಿನಲ್ಲಿ ಕುಸುರೆಯ ಸುತ್ತಿ ಭತ್ತವನ್ನ ಬೇಯಿಸಿ ಹಾಕಿ, ಬೆಲ್ಲ ಹಿಂಡಿ, ತೆಂಗಿನ ಕಾಯಿ, ಈರುಳ್ಳಿ, ಬೇಯಿಸಿ ಒಟ್ಟಿಗೆ ಕೊಡಲಾಗುತ್ತದೆ. ಕನಿಷ್ಠ ಪ್ರತಿ ಆನೆಗೆ 12 ಕೆಜಿ ಭತ್ತ, 250 ಗ್ರಾಂ ಬೆಲ್ಲ, 2 ತೆಂಗಿನ ಕಾಯಿ, ಅರ್ಧ ಕೆ.ಜಿ ಬೆಣ್ಣೆ ಕೊಡಲಾಗುತ್ತದೆ. ಒಂದು ಆನೆ ಪ್ರತಿ ದಿನ ಮುನ್ನೂರರಿಂದ ಐನೂರು ಕೆಜಿಯಷ್ಟು ಹಸಿರು ಸೊಪ್ಪನ್ನು ತಿನ್ನುತ್ತದೆ. ಕಾಡಿನಿಂದ ಬಂದ ಆನೆಗಳು ಒಂದೇ ಬಾರಿಗೆ ಇದೆಲ್ಲವನ್ನು ತಿನ್ನಲಾರವು ಹೀಗಾಗಿ ಇವುಗಳಿಗೆ ಹುಳದ ಔಷಧಿ ಕೊಟ್ಟು ಹೊಟ್ಟೆಯನ್ನ ಸ್ವಚ್ಛಗೊಳಿಸಲಾಗುತ್ತದೆ. ಬಳಿಕ ಆನೆಗಳಿಗೆ ಚೆನ್ನಾಗಿ ಹೊಟ್ಟೆ ಹಸಿದು ಆಹಾರಗಳನ್ನು ಸೇವಿಸಲು ಆರಂಭಿಸುತ್ತವೆ.












Click it and Unblock the Notifications