ಜಂಬೂ ಸವಾರಿ ಮೆರವಣಿಗೆ: ಸ್ವಲ್ಪದರಲ್ಲೇ ನಾಡಿಗೆ ತಪ್ಪಿದ ಭಾರೀ ಕಂಟಕ
ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ವಿಜಯದಶಮಿಯ ದಿನದಂದು ತೆರೆಬಿದ್ದಿದೆ. ಸುಮಾರು ನಾಲ್ಕೂವರೆ ಕಿಲೋಮೀಟರ್ ದೂರದವರೆಗೆ ನಡೆದ ಜಂಬೂಸವಾರಿ ಮೆರವಣಿಗೆಯನ್ನು ಲಕ್ಷಲಕ್ಷ ಜನ ಕಣ್ತುಂಬಿಸಿಕೊಂಡರು.
750 ಕೆಜಿ ತೂಕದ ಚಿನ್ನದ ಅಂಬಾರಿಯ ಮೇಲೆ ನಾಡದೇವತೆ ಚಾಮುಂಡೇಶ್ವರಿಯ ಮೂರ್ತಿಯನ್ನು ಹೊತ್ತು ಅರ್ಜುನ ಆನೆ ರಾಜಗಾಂಭೀರ್ಯವಾಗಿ ಮೆರವಣಿಗೆಯುದ್ದಕ್ಕೂ ಸಾಗಿದಾಗ, ಭಕ್ತರ/ನೋಡುಗರ ಜಯಘೋಷ ಮುಗಿಲುಮುಟ್ಟಿತ್ತು.
ಕಳೆದ ಬಾರಿಯಂತೆ ಈ ಬಾರಿಯೂ ಅರ್ಜುನ ಅಂಬಾರಿಯನ್ನು ಹೊತ್ತಿದ್ದ. ಆದರೆ, ಕಳೆದ ಬಾರಿಯಷ್ಟು ಸೂಕ್ತ ಮುಂಜಾಗ್ರತಾ ಕ್ರಮವನ್ನು ಜಿಲ್ಲಾಡಳಿತ ತೆಗೆದುಕೊಂಡಿರಲಿಲ್ಲವೇ ಎನ್ನುವ ಪ್ರಶ್ನೆ ಈಗ ಉದ್ಭವಿಸಲಾರಂಭಿಸಿದೆ.
ಸಾಮಾನ್ಯವಾಗಿ, ಬಹಳ ಬಂದೋಬಸ್ತ್ ಆಗಿ ಅಂಬಾರಿಯನ್ನು ಆನೆಯ ಮೇಲೆ ಕೂರಿಸುತ್ತಾರೆ. ಆದರೆ, ಈ ಬಾರಿ ಮೆರವಣಿಗೆಯುದ್ದಕ್ಕೂ ಅಂಬಾರಿ ಒಂದು ಕಡೆ ವಾಲಿಕೊಂಡು ಸಾಗುತ್ತಿತ್ತು. ಈ ಬಗ್ಗೆ ಮೈಸೂರು ರಾಜಮಾತೆ, ಜಿಲ್ಲಾಡಳಿತವನ್ನು ಎಚ್ಚರಿಸಿದ್ದರು ಕೂಡಾ..

ಚಾಮುಂಡೇಶ್ವರಿಯನ್ನು ಹೊತ್ತ ಅಂಬಾರಿ ವಾಲಿತ್ತು
ಅಂಬಾರಿಯನ್ನು ಆನೆಯ ಮೇಲೆ ಕಟ್ಟಲು ವೃತ್ತಿಪರ ಕೆಲಸಗಾರರನ್ನೇ ಬಳಸಲಾಗುತ್ತದೆ. ಆದರೆ, ಈ ಬಾರಿ ಅಂಬಾರಿ ಮೆರವಣಿಗೆಯುದ್ದಕ್ಕೂ (ಸುಮಾರು ನಾಲ್ಕು ಕಿ.ಮೀ) ವಾಲಿಕೊಂಡು ಸಾಗಿತ್ತು ಎನ್ನುವುದು ಗಮನಿಸಬೇಕಾದ ವಿಚಾರ. ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡುವ ವೇಳೆಯೂ, ಚಾಮುಂಡೇಶ್ವರಿಯನ್ನು ಹೊತ್ತ ಅಂಬಾರಿ ವಾಲಿಕೊಂಡಿತ್ತು.

ರಾಜಮಾತೆ ಪ್ರಮೋದಾ ದೇವಿ
ಅಂಬಾರಿ ಒಂದು ಕಡೆ ವಾಲಿದೆ ಎಂದು ರಾಜಮಾತೆ ಪ್ರಮೋದಾ ದೇವಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಸಿದ್ದರು. ಅಂಬಾರಿ ಕಟ್ಟುವ ಆರಂಭದಲ್ಲೇ ಎಡಕ್ಕೆ ವಾಲಿಕೊಂಡಿದೆ ಎಂದು ರಾಜಮಾತೆ ಹೇಳಿದ್ದರು. ಆದರೆ, ಆ ವೇಳೆಗೆ ಅಂಬಾರಿ ಕಟ್ಟುವ ಕೆಲಸ ಪೂರ್ಣಗೊಂಡಿದ್ದರಿಂದ, ಹಾಗೆಯೇ ಮೆರವಣಿಗೆಯಲ್ಲಿ ಹಗ್ಗದ ಸಹಾಯದಿಂದ ಸಾಗಲಾಯಿತು. (ಚಿತ್ರಕೃಪೆ: ನಮ್ಮ ಮೈಸೂರು ಟ್ವಿಟ್ಟರ್)

ಹಗ್ಗದಲ್ಲಿ ಬ್ಯಾಲನ್ಸ್ ಮಾಡಿಕೊಂಡು ಸಾಗಲಾಯಿತು
ಮೆರವಣಿಗೆಯುದ್ದಕ್ಕೂ ಅಂಬಾರಿಯನ್ನು ಹಗ್ಗದಲ್ಲಿ ಬ್ಯಾಲನ್ಸ್ ಮಾಡಿಕೊಂಡೇ ಸಾಗಲಾಯಿತು. ಅಂಬಾರಿ ವಾಲಿಕೊಂಡಿರುವುದು ಅತ್ಯಂತ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಆದರೆ, ನಿಗದಿತ ಸಮಯದಲ್ಲಿ ಮುಖ್ಯಮಂತ್ರಿಗಳಿಂದ ಪುಷ್ಪಾರ್ಚನೆ ಆಗಬೇಕಾಗಿದ್ದರಿಂದ, ಹಗ್ಗದ ಸಪೋರ್ಟಿನಿಂದ ಅಂಬಾರಿಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಯಿತು.

ಜಂಬೂ ಸವಾರಿ ಮೆರವಣಿಗೆ
ಜಂಬೂ ಸವಾರಿ ಮೆರವಣಿಗೆ ಕೆ ಆರ್ ಸರ್ಕಲ್ ಬಳಿ ಬರುವಾಗ, ಅಂಬಾರಿ ಹೊತ್ತ ಅರ್ಜುನನ ಪಕ್ಕದಲ್ಲಿ ಬರುತ್ತಿದ್ದ ಆನೆಯಲ್ಲಿ ಕೂತಿದ್ದ ಮಾವುತ, ಅಂಬಾರಿ ಸಪೋರ್ಟಿಗೆ ಕಟ್ಟಿದ್ದ ಹಗ್ಗವನ್ನು ಬಿಗಿಯಾಗಿ ಹಿಡಿದು ಬನ್ನಿಮಂಟಪದವರೆಗೂ ಯಶಸ್ವಿಯಾಗಿ ಬರಲು ಸಹಕರಿಸಿದ್ದ. ಇದರಿಂದ ಅಂಬಾರಿ ಇನ್ನಷ್ಟು ವಾಲಲಿಲ್ಲ.

ಅಂಬಾರಿ ಎಡಕ್ಕೆ ವಾಲಿದ್ದು ನಾಡಿಗೆ ಕಂಟಕವೋ?
ಅಂಬಾರಿ ಎಡಕ್ಕೆ ವಾಲಿದ್ದು ನಾಡಿಗೆ ಕಂಟಕವೋ ಎನ್ನುವ ಚರ್ಚೆ ಆರಂಭವಾಗಿದೆ. ಹಗ್ಗದ ಸಹಾಯದಿಂದ ಅಂಬಾರಿಯನ್ನು ಮೆರವಣಿಗೆಯಲ್ಲಿ ಅರ್ಜುನ ಹೊತ್ತು ತಂದಿದ್ದದ್ದು ದೊಡ್ಡ ರಿಸ್ಕ್ ಎಂದು ಹೇಳಲಾಗುತ್ತಿದೆ. ಯಾವುದೇ ತೊಂದರೆಯಿಲ್ಲದೇ, ಜಂಬೂ ಸವಾರಿ ಮೆರವಣಿಗೆ ಮುಗಿದಿದ್ದರಿಂದ, ಭಾರೀ ಗಂಢಾಂತರವೊಂದು ತಪ್ಪಿದಂತಾಗಿದೆ.












Click it and Unblock the Notifications