ನಿಗಮ ಮಂಡಳಿ, ಕಾಂಗ್ರೆಸ್ ನಾಯಕನ ಆತ್ಮಹತ್ಯೆ ಯತ್ನ
ಮೈಸೂರು, ನ.22 : ನಿಗಮ-ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷ ಪಟ್ಟಿಯಲ್ಲಿ ಸ್ಥಾನ ದೊರೆಯದ ಕಾರಣ ಮೈಸೂರಿನ ಕಾಂಗ್ರೆಸ್ ನಾಯಕರೊಬ್ಬರು ಪುತ್ರನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರಿಗೂ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿಗಮ-ಮಂಡಳಿಗಳ ಪಟ್ಟಿ ಸಿದ್ಧವಾಗಿದ್ದು, ಎರಡು ದಿನದಲ್ಲಿ ಪ್ರಕಟಗೊಳ್ಳಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗ ಹಾಗೂ ಹಿರಿಯ ಕಾಂಗ್ರೆಸ್ ನಾಯಕರಾದ ಮೈಸೂರಿನ ಇಟ್ಟಿಗೆಗೂಡು ಪ್ರದೇಶದ ನಿವಾಸಿ ಪ್ರಭಾಕರ್ (68) ಮತ್ತು ಅವರ ಪುತ್ರ ಪ್ರತಾಪ್ (35) ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. [ನಿಗಮ ಮಂಡಳಿ ಆಯ್ಕೆ : 18 ತಿಂಗಳ ಸೂತ್ರ]

ಸುಮಾರು 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಿರುವ ಪ್ರಭಾಕರ್ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮತ್ತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರು ಮತ್ತು ತಮ್ಮ ಪುತ್ರ ಪ್ರತಾಪ್ಗೆ ನಿಗಮ-ಮಂಡಳಿಯಲ್ಲಿ ಸ್ಥಾನ ಸಿಗುತ್ತದೆ ಎಂಬ ಭರವಸೆ ಹೊಂದಿದ್ದರು.
ನವದೆಹಲಿಯಲ್ಲಿ ಶುಕ್ರವಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಪಟ್ಟಿ ಅಂತಿಮಗೊಂಡಿದೆ. ಆದರೆ, ಅದರಲ್ಲಿ ಪ್ರಭಾಕರ್ ಅವರ ಪುತ್ರ ಪ್ರತಾಪ್ ಹೆಸರಿಲ್ಲ ಎಂಬುದನ್ನು ತಿಳಿದುಕೊಂಡ ಇಬ್ಬರು ಶುಕ್ರವಾರ ರಾತ್ರಿ ಊಟದ ನಂತರ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಶನಿವಾರ ಬೆಳಗ್ಗೆ ಎಷ್ಟು ಹೊತ್ತಾದರೂ ತಂದೆ-ಮಗ ಎಚ್ಚರಗೊಳ್ಳದಿರುವುದನ್ನು ಕಂಡ ಮನೆಯವರು ಹೋಗಿ ನೋಡಿದಾಗ ಇಬ್ಬರು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾರೆ. ನಜರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರದಿಂದ ಉಂಟಾಗಿದ್ದ ನಿಗಮ-ಮಂಡಳಿ ನೇಮಕಾತಿಯ ಹಗ್ಗ ಜಗ್ಗಾಟ ಶುಕ್ರವಾರ ಅಂತ್ಯಗೊಂಡಿದೆ. 95 ಪ್ರಮುಖ ನಿಗಮ-ಮಂಡಳಿಗಳ ಪಟ್ಟಿಯನ್ನು ರಾಜ್ಯದ ನಾಯಕರು ಹೈಕಮಾಂಡ್ಗೆ ಒಪ್ಪಿಸಿದ್ದಾರೆ. ಈ ಪಟ್ಟಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಹಿಯಾದ ನಂತರ ಬಿಡುಗಡೆಯಾಗಲಿದೆ.
ಈ ಬಾರಿ ನೇಮಕವಾಗುವ 95 ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಕಾರ್ಯಾವಧಿ 18 ತಿಂಗಳು ಮಾತ್ರ ಇರಲಿದೆ. ಹುದ್ದೆಗಳಿಗೆ ಆಕಾಂಕ್ಷಿಗಳು ಹೆಚ್ಚಿರುವ ಕಾರಣ ಬಾಕಿ ಉಳಿದ ಅವಧಿಗೆ ಉಳಿದ ನಾಯಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕೆ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ಉಂಟಾಗುವ ಸಾಧ್ಯತೆ ಇದ್ದು, ಪಟ್ಟಿ ಬಿಡುಗಡೆಗೊಂಡ ನಂತರ ನಾಯಕರ ಅಸಮಾಧಾನ ಸ್ಫೋಟಗೊಳ್ಳಲಿದೆ.












Click it and Unblock the Notifications