ಮೈಸೂರು: ಮೇಯರ್ ಚುನಾವಣೆ ಕ್ಲೈಮ್ಯಾಕ್ಸ್; 3 ಪಕ್ಷಗಳ ಬಲಾಬಲ ಹೀಗಿದೆ
ಮೈಸೂರು, ಸೆಪ್ಟೆಂಬರ್ 5: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಸಾಂಸ್ಕೃತಿಕ ನಗರಿಯ ಮೇಯರ್ ಸ್ಥಾನ ಪಡೆಯುವ ನಿಟ್ಟಿನಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಾಯಕರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದು, ಕಡೇ ಹಂತದ ಕಸರತ್ತು ನಡೆಸಿದರು. ಮೇಯರ್ ಪಟ್ಟ ಪಡೆಯುವ ಮೂಲಕ ಯಾರಿಗೆ ಶುಭ ಮಂಗಳವಾರ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕಳೆದ ಅವಧಿಯಲ್ಲಿ ಜೆಡಿಎಸ್ನ 'ವೌನ ಒಪ್ಪಂದ' ದಿಂದಾಗಿ ಮೊದಲ ಬಾರಿಗೆ ಪಾಲಿಕೆಯಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಭವಿಷ್ಯದ ಚಿಂತನೆಯಲ್ಲಿದೆ. ಕಳೆದ ಅವಧಿಯ ಚುನಾವಣೆಯಲ್ಲಿ ಮೇಯರ್ ಸ್ಥಾನ ಬಿಟ್ಟುಕೊಡದ ಕಾಂಗ್ರೆಸ್ಗೆ ಪಾಠ ಕಲಿಸಲು ಜೆಡಿಎಸ್ ಸ್ಪರ್ಧೆಯಿಂದ ಹಿಂದೆ ಸರಿದ ಪರಿಣಾಮ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಅಧಿಕಾರ ಪಡೆದಿತ್ತು. ಈ ಹಿನ್ನೆಲೆಯಲ್ಲಿ ತನಗೆ ಪ್ರಸಕ್ತ ಅವಧಿಯಲ್ಲಿ ಮೇಯರ್ ಸ್ಥಾನ ಬಿಟ್ಟುಕೊಡಬೇಕು ಎನ್ನುವುದು ಜೆಡಿಎಸ್ ವಾದ.
ಮೈಸೂರು ಮಹಾನಗರ ಪಾಲಿಕೆಗೆ ಮುಂದಿನ ಸಾರಥಿ ಯಾರು?
ಆದರೆ, ರಾಜ್ಯದಲ್ಲಿ ತನಗೆ ಅಧಿಕಾರ ಇರುವುದರಿಂದ ಅಭಿವೃದ್ಧಿಗಾಗಿ ಬಿಜೆಪಿಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ಕಮಲ ಪಡೆಯ ಪ್ರತಿವಾದ. ಇದರ ನಡುವೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆಯೂ ಕೊಡು ಕೊಳ್ಳುವ ಮಾತುಕತೆ ನಡೆದಿದ್ದು, ಆದರೆ, ಯಾರ ತಟ್ಟೆಗೆ ಯಾವ ಪಟ್ಟ ಎನ್ನುವುದು ನಿರ್ಧಾರವಾಗಿಲ್ಲ. ಮೂರು ಪಕ್ಷಗಳಲ್ಲಿ ಸದ್ಯಕ್ಕಂತೂ ಯಾವುದೇ ಹೊಂದಾಣಿಕೆ ಕಂಡು ಬರುತ್ತಿಲ್ಲ. ಮೇಲುನೋಟಕ್ಕೆ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಹೇಳಿಕೊಳ್ಳುತ್ತಿದ್ದರೂ, ಮೂರೂ ಪಕ್ಷಗಳು ತಂತ್ರಗಾರಿಕೆ ರೂಪಿಸುತ್ತಿವೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನಗರದಲ್ಲೇ ಬೀಡುಬಿಟ್ಟಿದ್ದಾರೆ. ತಮಗೆ ಮೇಯರ್ ಪಟ್ಟ ಬಿಟ್ಟುಕೊಡುವಂತೆ ಹಾಗೂ ಉಪಮೇಯರ್ ಸ್ಥಾನ ಪಡೆದುಕೊಳ್ಳುವಂತೆ ಜೆಡಿಎಸ್ ಅನ್ನು ಕೋರಿದ್ದಾರೆ. ಆದರೆ, ತಮಗೆ ಮೇಯರ್ ಪಟ್ಟ ಬಿಟ್ಟುಕೊಡಿ ಎಂದು ಜೆಡಿಎಸ್ ಪಟ್ಟು ಹಿಡಿದಿದೆ. ಬಿಜೆಪಿಗೆ ಅಧಿಕಾರ ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಕೊನೇ ಕ್ಷಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಪ್ಪಂದ ಮಾಡಿಕೊಂಡರೂ ಅಚ್ಚರಿ ಇಲ್ಲ. ಇವೆರಡೂ ತಮ್ಮ ಹಠ ಬಿಡದಿದ್ದಲ್ಲಿ ಅದರ ಲಾಭ ಬಿಜೆಪಿಗೆ ಆಗಲಿದ್ದು, ಎರಡನೇ ಬಾರಿ ಅಧಿಕಾರ ನಡೆಸಬಹುದು. ಆದರೂ, ಚುನಾವಣೆಗೆ ಕೊನೇ ಕ್ಷಣದವರೆಗೂ ಕ್ಲೈಮ್ಯಾಕ್ಸ್ ಏನು ಎನ್ನುವುದು ಬಹಿರಂಗವಾಗದು.
ಬೆಳಗ್ಗೆ 8ರಿಂದ 10ರವರೆಗೆ ನಾಮಪತ್ರ ಸಲ್ಲಿಕೆ
ಸೆಪ್ಟೆಂಬರ್ 6ರಂದು ಮೈಸೂರಿನ ಮಹಾನಗರ ಪಾಲಿಕೆಯಲ್ಲಿ ಪ್ರಾದೇಶಿಕ ಆಯುಕ್ತರ ಸಮ್ಮುಖದಲ್ಲಿ ನಡೆಯುವ ಕೌನ್ಸಿಲ್ ಸಭೆಯಲ್ಲಿ ತೀವ್ರ ನಿರೀಕ್ಷೆಯ ಮೈಸೂರು ಮೇಯರ್, ಉಪ ಮೇಯರ್ ಚುನಾವಣೆ ನಡೆಯಲಿದೆ. ಬೆಳಗ್ಗೆ 8 ರಿಂದ 10 ರವರೆಗೆ ನಾಮಪತ್ರ ಸಲ್ಲಿಕೆಯಾಗಲಿದೆ. ಮಧ್ಯಾಹ್ನ 12ಕ್ಕೆ ಪ್ರಾದೇಶಿಕ ಆಯುಕ್ತರು ಚುನಾವಣೆ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.
ಪಕ್ಷಗಳ ಬಲಾಬಲ
ಕಾಂಗ್ರೆಸ್ ಪಾಲಿಕೆ ಸದಸ್ಯರ ಸಂಖ್ಯೆ 20, ಇಬ್ಬರು ಪಕ್ಷೇತರರು, ಒಬ್ಬರು ಶಾಸಕರು ಹಾಗೂ ಮೂವರು ವಿಧಾನಪರಿಷತ್ ಸದಸ್ಯರ ಮತ ಸೇರಿ 26 ಸದಸ್ಯರ ಬಲ ಹೊಂದಿದೆ. ಬಿಜೆಪಿಯಲ್ಲಿ 22 ಸದಸ್ಯರು, ಒಬ್ಬರು ಪಕ್ಷೇತರ, ಒಬ್ಬ ಸಂಸದ, ಇಬ್ಬರು ಶಾಸಕರು ಹಾಗೂ ಒಬ್ಬರು ಪರಿಷತ್ ಸದಸ್ಯರು ಸೇರಿ 27 ಸದಸ್ಯರ ಬಲ. ಜೆಡಿಎಸ್ನಲ್ಲಿ 16 ಸದಸ್ಯರು, ಪಕ್ಷೇತರರು ಇಬ್ಬರು, ಒಬ್ಬರು ಶಾಸಕರು, ಪರಿಷತ್ನ ಇಬ್ಬರು ಸದಸ್ಯರು ಸೇರಿ 21 ಸದಸ್ಯ ಬಲ ಹೊಂದಿದೆ.
ಮೊದಲ ಬಾರಿಗೆ ಕೆಲವರಿಂದ ಮತ
ಮೇಯರ್ ಚುನಾವಣೆ ಮತದಾರರ ಪಟ್ಟಿಗೆ ಮಂಡ್ಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ಆಯ್ಕೆಯಾಗಿರುವ ಕಾಂಗ್ರೆಸ್ನ ದಿನೇಶ್ ಗೂಳಿಗೌಡ, ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದಿರುವ ಮಧು ಜಿ.ಮಾದೇಗೌಡ, ಮಾಜಿ ಮೇಯರ್, ಜೆಡಿಎಸ್ನ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾದ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಜಯಗಳಿಸಿದ ರಜನಿ ಅಣ್ಣಯ್ಯ, ಸಾಹಿತ್ಯ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಎ.ಎಚ್.ವಿಶ್ವನಾಥ್, ಪರಿಷತ್ ಸದಸ್ಯರಾದ ಜೆಡಿಎಸ್ನ ಸಿ.ಎನ್.ಮಂಜೇಗೌಡ, ಕಾಂಗ್ರೆಸ್ನ ಡಾ.ಡಿ.ತಿಮ್ಮಯ್ಯ ಹೆಸರು ಪಟ್ಟಿಯಲ್ಲಿದ್ದು, ಮೊದಲ ಬಾರಿಗೆ ಮತ ಹಾಕಲಿದ್ದಾರೆ.
ಮೇಯರ್ ಆಕಾಂಕ್ಷಿಗಳ ಪಟ್ಟಿ
ಬಿಜೆಪಿ
:
ಶಿವಕುಮಾರ್,
ಬಿ.ವಿ.
ಮಂಜುನಾಥ್,
ಮ.ವಿ.
ರಾಮಪ್ರಸಾದ್,
ಸುಬ್ಬಯ್ಯಘಿ.
ಕಾಂಗ್ರೆಸ್
:
ಶಾಂತಕುಮಾರಿ,
ಗೋಪಿ,
ಆರ್
ಹುಸೇನ್,
ಅಯೂಬ್ಖಾನ್,
ಜೆಡಿಎಸ್
:
ಎಸ್ಬಿಎಂ
ಮಂಜು,
ಕೆ.ವಿ.
ಶ್ರೀಧರ್,
ಎಂ.ಡಿ.
ನಾಗರಾಜ್,
ಭಾಗ್ಯ
ಮಾದೇಶ್,
ಪ್ರೇಮಾ
ಶಂಕರೇಗೌಡ,
ಅಶ್ವಿನಿ
ಅನಂತು.