ಮೈಸೂರಿಗೆ ಪ್ರವಾಸಿಗರನ್ನು ಸೆಳೆಯಲು ಸ್ವಾಗತ ಕಮಾನು ನಿರ್ಮಾಣಕ್ಕೆ ಚಿಂತನೆ
ಮೈಸೂರು, ಜುಲೈ 2: ಸಾಂಸ್ಕೃತಿಕ ನಗರಿ ಮೈಸೂರಿಗೆ ದಿನನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ. ಈಗ ಪ್ರವಾಸಿಗರನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ. ನಗರಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ಪ್ರಮುಖ ಮುಖ್ಯ ರಸ್ತೆಗಳಲ್ಲಿ ಸುಂದರ ಸ್ವಾಗತ ಕಮಾನುಗಳನ್ನು ಅಳವಡಿಸಲು ಮೈಸೂರು ಮಹಾನಗರ ಪಾಲಿಕೆ ಯೋಜನೆ ರೂಪಿಸುತ್ತಿದೆ.
ನಗರದ ಪ್ರಮುಖ ರಸ್ತೆಯಾದ ಮೈಸೂರು-ಬೆಂಗಳೂರು ಹೆದ್ದಾರಿ ಬಳಿಯ ಕೆ.ಆರ್.ಮಿಲ್ ಸಮೀಪ, ಹುಣಸೂರು ರಸ್ತೆಯ ಹೂಟಗಳ್ಳಿ ಬಳಿ, ನಂಜನಗೂಡು ರಸ್ತೆಯ ರಿಂಗ್ ರೋಡ್ ಜಂಕ್ಷನ್ ಸಮೀಪ ಹಾಗೂ ಬನ್ನೂರು ರಸ್ತೆಯ ದೇವೇಗೌಡ ಸರ್ಕಲ್ ಸಮೀಪ ದೊಡ್ಡ ಸ್ವಾಗತ ಕಮಾನುಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ.
ಕಮಾನಿನ ಮೂಲಕ ಮೈಸೂರು ನಗರಕ್ಕೆ ಬರುವ ಪ್ರವಾಸಿಗರಿಗೆ ಸ್ವಾಗತ ಕೋರುವ ಹಾಗೂ ಪ್ರಮುಖ ಪ್ರವಾಸಿ ತಾಣಗಳ ಹೆಸರು ಮತ್ತು ಮಾರ್ಗಸೂಚಿಯನ್ನು ಬಿಂಬಿಸುವ ಯೋಜನೆ ಇದಾಗಿದೆ. ಕಮಾನಿಗೆ ಪಾರಂಪರಿಕ ಸ್ಪರ್ಶವನ್ನೂ ನೀಡುವ ಆಲೋಚನೆಯಿದ್ದು, ಈ ವಿಚಾರವನ್ನು ಅಂತಿಮಗೊಳಿಸಲು ಪಾರಂಪರಿಕ ಇಲಾಖೆಯ ಅಭಿಪ್ರಾಯ ಮತ್ತು ಸಲಹೆಯನ್ನು ಕೋರಿ ನೀಲಿನಕ್ಷೆಯ ವಿನ್ಯಾಸವನ್ನು ಸಲ್ಲಿಸಿ ಒಪ್ಪಿಗೆಗಾಗಿ ಕಾಯುತ್ತಿದೆ.

ಸ್ವಾಗತ ಕಮಾನಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ಇರಲಿದ್ದು, ಪಾರಂಪರಿಕತೆಯೊಂದಿಗೆ ಅತ್ಯಂತ ಆಕರ್ಷಕವಾಗಿ ಸ್ವಾಗತ ಕಮಾನುಗಳ ವಿನ್ಯಾಸ ಸಿದ್ಧಗೊಳಿಸಲಾಗಿದೆ. ಪಾರಂಪರಿಕ ಇಲಾಖೆಯ ಒಪ್ಪಿಗೆ ನಂತರ ರಸ್ತೆಗಳಿಗೆ ಕಮಾನು ಅಳವಡಿಸಲಾಗುವುದು ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಮೈಸೂರು ಸ್ವಚ್ಛತೆಗೆ ಸ್ವತಃ ಕಸ ತೆಗೆದ ಜಿಲ್ಲಾಧಿಕಾರಿ
ಪಾರಂಪರಿಕ ಸ್ಪರ್ಶದ ಒಂದು ಸ್ವಾಗತ ಕಮಾನಿಗೆ ಅಂದಾಜು 15 ಲಕ್ಷ ರೂ.ನಂತೆ 60 ಲಕ್ಷ ರೂಪಾಯಿಗಳನ್ನು ಮೈಸೂರು ನಗರ ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮೀಸಲಿಡಲಾಗಿದೆ. 4 ಕಮಾನುಗಳನ್ನು ಅಳವಡಿಸಿ ಪೂರಕ ಪ್ರತಿಕ್ರಿಯೆ ಬಂದಲ್ಲಿ, 2ನೇ ಹಂತದಲ್ಲಿ ಕೆಆರ್ ಎಸ್ ರಸ್ತೆ, ಬೋಗಾದಿ ರಸ್ತೆ, ಎಚ್.ಡಿ.ಕೋಟೆ ರಸ್ತೆ ಮತ್ತು ತಿ.ನರಸೀಪುರ ರಸ್ತೆಗಳಲ್ಲೂ ಅಳವಡಿಸಲು ಪಾಲಿಕೆಯು ನಿರ್ಧರಿಸಿದೆ.












Click it and Unblock the Notifications