ಮೈಸೂರಿನಲ್ಲಿ ಕುರಿಗಾಹಿ ಹತ್ಯೆ ಮಾಡಿದ್ದ ನರಭಕ್ಷಕ ಹುಲಿ ಸೆರೆ
ಮೈಸೂರು, ಮೇ 27: ಕುರಿಗಾಹಿಯನ್ನು ಹುಲಿಯೊಂದು ತಿಂದು ಪರಾರಿಯಾಗಿತ್ತು. ಮೃತ ದೇಹದ ಅವಶೇಷಗಳು ಪತ್ತೆ ಆದ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ನರಭಕ್ಷಕ ಹುಲಿಯನ್ನು ಸೆರೆ ಹಿಡಿದಿರುವ ಘಟನೆ ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನಲ್ಲಿ ನಡೆದಿದೆ.
ಹುಣಸೂರಿನ ನಾಗರಹೊಳೆ ರಾಷ್ಟೀಯ ಉದ್ಯಾನದಂಚಿನ ನೇರಳಕುಪ್ಪೆ ಬಿ ಹಾಡಿಯ ಕುರಿಗಾಹಿ ಜಗದೀಶ್ ಸೋಮವಾರ ಬೆಳಿಗ್ಗೆ ಕುರಿ ಮೇಯಿಸಲು ಕಾಡಿಗೆ ತೆರಳಿದ್ದನು. ಸಂಜೆಯಾದರೂ ಈತ ಮನೆಗೆ ಮರಳಿರಲಿಲ್ಲ, ಬದಲಿಗೆ ಕುರಿಗಳು ಮಾತ್ರ ಹಿಂತಿರುಗಿ ಬಂದಿದ್ದವು. ನಂತರ ಅರಣ್ಯ ಇಲಾಖೆಯವರು ಆನೆಯ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಿದಾಗ ಜಗದೀಶ್ ದೇಹದ ಭಾಗಗಳು ಪತ್ತೆಯಾಗಿದ್ದವು.
ಕೂಡಲೇ ನರಭಕ್ಷಕ ಹುಲಿ ಸೆರೆಗೆ ನಿರ್ಧರಿಸಿದ ಅಧಿಕಾರಿಗಳು, ನಿನ್ನೆಯೇ ಎರಡು ಬೋನುಗಳನ್ನು ಅರಣ್ಯದಲ್ಲಿಟ್ಟು ಹುಲಿಯನ್ನು ಸೆರೆ ಹಿಡಿದಿದ್ದಾರೆ. ಇಂದು ಬೆಳಿಗ್ಗೆ ಹುಲಿಯನ್ನು ಬನ್ನೇರುಘಟ್ಟ ಬಯಾಲಾಜಿಕಲ್ ಪಾರ್ಕಿಗೆ ಬಿಡಲಾಗಿದೆ.

ಸ್ಥಳಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿಸಿಎಫ್ ಮಹೇಶ್ ಕುಮಾರ್. ಶಾಸಕ ಎಚ್.ಪಿ ಮಂಜುನಾಥ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನೊಂದ ಕುಟುಂಬದ ಒಬ್ಬರಿಗೆ ಅರಣ್ಯ ಇಲಾಖೆ ವತಿಯಿಂದ ದಿನಗೂಲಿ ನೌಕರಿ ನೀಡುವುದಾಗಿ ಡಿಸಿಎಫ್ ಮಹೇಶ್ ಕುಮಾರ್ ಭರವಸೆ ನೀಡಿದರು.












Click it and Unblock the Notifications