ಈ ಕಾಮಗಾರಿ ಮುಗಿದರೆ ಮೈಸೂರು-ಬೆಂಗಳೂರು ಪ್ರಯಾಣ 90 ನಿಮಿಷ!
ಮೈಸೂರು, ಡಿಸೆಂಬರ್ 22; ಅಂದುಕೊಂಡಂತೆ ಕಾಮಗಾರಿ ಮುಗಿದರೆ ಮುಂದಿನ ದಸರಾ ವೇಳೆಗೆ ನೀವು ಮೈಸೂರಿನಿಂದ ಬೆಂಗಳೂರಿಗೆ ಕೇವಲ 90 ನಿಮಿಷದಲ್ಲಿ ಪ್ರಯಾಣ ಬೆಳೆಸಬಹುದು. ಟ್ರಾಫಿಕ್ ಜಂಜಾಟ ಇರುವುದಿಲ್ಲ. ಎಲ್ಲೂ ಅಡಚಣೆ ಇಲ್ಲದೆ ಸರಾಗವಾಗಿ ಬೆಂಗಳೂರು ತಲುಪಬಹುದು.
ಪ್ರಸ್ತುತ ಮೈಸೂರು-ಬೆಂಗಳೂರು ನಡುವಿನ ಅಂತರ 143 ಕಿ. ಮೀ. ಕಾಮಗಾರಿ ಮುಗಿದ ಬಳಿಕ ಇದು 118 ಕಿ. ಮೀ. ಗೆ ಇಳಿಯಲಿದೆ. ಮೈಸೂರು-ಬೆಂಗಳೂರು ದಶ ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು, ಮುಂದಿನ ದಸರಾ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ಈಗಾಗಲೇ ತಿಳಿಸಿದ್ದಾರೆ.
ರಾಜ್ಯ ರಾಜಾಧಾನಿ ಬೆಂಗಳೂರು ನಂತರ ಮೈಸೂರು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ. ಈ ನಿಟ್ಟಿನಲ್ಲಿ ಮೈಸೂರು-ಬೆಂಗಳೂರು ದಶಪಥ ಕಾಮಗಾರಿ ಮುಗಿದರೆ ಉಭಯ ನಗರಗಳ ಸಂಪರ್ಕ ಸರಾಗವಾಗಲಿದ್ದು, ಮೈಸೂರು ಮತ್ತಷ್ಟು ಪ್ರಗತಿ ಸಾಧಿಸಲು ಅನುಕೂಲವಾಗಲಿದೆ.
''ಸದ್ಯ ಮೈಸೂರಿನಿಂದ ಬೆಂಗಳೂರಿಗೆ ಹೋಗಲು ಕನಿಷ್ಠ 3 ಗಂಟೆ ಸಮಯ ಹಿಡಿಯುತ್ತದೆ. ದಶಪಥ ರಸ್ತೆ ಪ್ರಯಾಣದಲ್ಲಿ ಇದು 90 ನಿಮಿಷಕ್ಕೆ ಕಡಿತಗೊಳ್ಳಲಿದೆ. ಯಾವುದೇ ಅಡಚಣೆಯಿಲ್ಲದೇ ಕ್ಷಿಪ್ರಗತಿಯಲ್ಲಿ ಸಾಗ ಬಹುದಾಗಿರುವುದರಿಂದ ಈ ಯೋಜನೆ ಸಾರ್ವಜನಿಕರಿಗೆ ವರದಾನವಾಗಲಿದೆ'' ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಎರಡು ಹಂತಗಳಲ್ಲಿ ಕಾಮಗಾರಿ
ಪ್ರಸ್ತುತ ರಸ್ತೆ ಕಾಮಗಾರಿ ಶೇ 80ರಷ್ಟು ಮುಕ್ತಾಯವಾಗಿದೆ. ಬೆಂಗಳೂರು ಹೊರವಲಯದ ನೈಸ್ ಜಂಕ್ಷನ್ ಬಳಿಯ ಪಂಚಮುಖಿ ದೇವಸ್ಥಾನದಿಂದ ಆರಂಭವಾಗುವ ರಸ್ತೆ ಮೈಸೂರಿನ ಕೊಲಂಬಿಯಾ ಏಷ್ಯಾ ಜಂಕ್ಷನ್ನಲ್ಲಿ ಮುಕ್ತಾಯಗೊಳ್ಳಲಿದೆ. ಬೆಂಗಳೂರು- ಮೈಸೂರು ಹೆದ್ದಾರಿ ಹಳೆಯ ನಾಲ್ಕು ಪಥದ ರಸ್ತೆ ಸುಮಾರು 25 ರಿಂದ 30 ಮೀಟರ್ ಅಗಲ ಇದ್ದು, ಇದನ್ನು 60 ಮೀಟರ್ಗೆ ಹಾಗೂ ಎಲಿವೇಟೆಡ್ ಕಾರಿಡಾರ್ ಬಳಿ 45 ಮೀಟರ್ಗೆ ವಿಸ್ತರಣೆ ಮಾಡಲಾಗುತ್ತಿದೆ. ಎರಡು ವಿಧದಲ್ಲಿ ಕಾಮಗಾರಿ ನಡೆಯುತ್ತಿದ್ದು, ಬೆಂಗಳೂರು -ನಿಡಘಟ್ಟ ಹಾಗೂ ನಿಡಘಟ್ಟ-ಮೈಸೂರು ಎಂದು ಎರಡು ಹಂತಗಳನ್ನು ಮಾಡಲಾಗಿದೆ.

ಕಾಮಗಾರಿ ವಿಶೇಷತೆ ಏನು?
ಈ ನಿರ್ಮಾಣವಾಗುತ್ತಿರುವ ರಸ್ತೆಯಲ್ಲಿ ಜಾನುವಾರು, ನಾಯಿಗಳಿಂದ ಅಪಘಾತ ತಪ್ಪಿಸಲು 6 ಅಡಿ ಎತ್ತರದ ಫೆಂಕ್ಸಿಗ್ ಹಾಕಲಾಗಿದೆ. ರಾಮನಗರದ ಬಳಿ ಬೃಹದಾಕಾರದ ಬಂಡೆ ಒಡೆದು ರಸ್ತೆ ಕಾಮಗಾರಿ ಮಾಡಲಾಗಿದೆ. ಹೆದ್ದಾರಿಯುದ್ದಕ್ಕೂ 15 ಅಡಿ ಅಗಲದ ಮೀಡಿಯನ್ ಇದೆ. ಹಾಗಾಗಿ ರಸ್ತೆ ಸೌಂದರ್ಯ ಹೆಚ್ಚಿಸಲು ಹೂವುಗಳನ್ನು ನೆಡಲಾಗಿದೆ. ಮದ್ದೂರಿನ ಬಳಿ 3.8 ಕಿ. ಮೀ. ಫ್ಲೈ ಓವರ್ ಮಾಡಲಾಗಿದೆ. ಕೊಲಂಬಿಯಾ ಏಷಿಯಾ ಬಳಿಯೂ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ. ಶ್ರೀರಂಗಪಟ್ಟಣದ ಬಳಿ ಬೃಹತ್ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. 118 ಕಿ. ಮೀ. ಉದ್ದಕ್ಕೆ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

9 ಬೃಹತ್ ಸೇತುವೆಗಳು
ಮೈಸೂರು-ಬೆಂಗಳೂರು ಮಾರ್ಗದಲ್ಲಿ 9 ಬೃಹತ್ ಸೇತುವೆಗಳು, 44 ಸಣ್ಣ ಸೇತುವೆಗಳು, 8.7 ಕಿ.ಮೀ. ಉದ್ದದ ಎಲಿ ವೇಟೆಡ್ ಹೈವೇ, 4 ರೈಲು ಮೇಲ್ಸೇತುವೆ, 28 ವೆಹಿಕುಲರ್ ಅಂಡರ್ಪಾಸ್, 8 ವೆಹಿ ಕುರ್ಲ ಓವರ್ಪಾಸ್, 13 ಲೈಟ್ ವೆಹಿ ಕುಲರ್ ಅಂಡರ್ಪಾಸ್, 13 ಪಾದಚಾರಿಗಳ ಅಂಡರ್ಪಾಸ್, 1 ರೆಸ್ಟ್ ಏರಿಯಾ, 3 ಟೋಲ್ ಪ್ಲಾಜಾಗಳನ್ನು ನಿರ್ಮಿಸಲಾಗುತ್ತಿದೆ. ವಾಹನ ಸವಾರರು ಈ ರಸ್ತೆಯಲ್ಲಿ ಸಾಗುವಾಗ ಟೋಲ್ ಕಟ್ಟಬೇಕು.
Recommended Video

ಆಕ್ಸಸ್ ಕಂಟ್ರೋಲ್ಡ್ ಎಕ್ಸ್ಪ್ರೆಸ್ ವೇ
ಮೈಸೂರು-ಬೆಂಗಳೂರು ರಸ್ತೆ ಕಾಮಗಾರಿ ಮುಗಿದರೆ ಇದು ಕರ್ನಾಟಕದ ಮೊದಲ ಆಕ್ಸಸ್ ಕಂಟ್ರೋಲ್ಡ್ ಹೈವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಂದರೆ ಮೈಸೂರಿನಿಂದ ಬೆಂಗಳೂರಿನವರೆಗೆ ರಸ್ತೆಯ ಎರಡು ಭಾಗದಲ್ಲೂ 6 ಅಡಿ ಫೆನ್ಸಿಂಗ್ ಹಾಕಲಾಗಿರುತ್ತದೆ. ಎಲ್ಲೆಂದರಲ್ಲಿ ನುಗ್ಗುವಂತಿಲ್ಲ. ಸರ್ವಿಸ್ ರಸ್ತೆಗೆ ಯಾವುದೇ ಎಂಟ್ರಿ ಇರುವುದಿಲ್ಲ. ತುಮಕೂರು ಹೈವೇಯಲ್ಲಿ ಬೇಲಿ ಕಾಣುವುದಿಲ್ಲ. 6 ಪಥ ಎಕ್ಸ್ಪ್ರೆಸ್ ಲೈನ್. ಉಳಿದ 4 ಲೈನ್ ಸರ್ವಿಸ್ ರಸ್ತೆ ಆಗಿರುತ್ತದೆ.












Click it and Unblock the Notifications