ಮೈಸೂರು ಬಂದ್ ವೈಫಲ್ಯಕ್ಕೆ ಪೊಲೀಸರೇ ಕಾರಣ ಎಂದ ಪ್ರತಿಭಟನಕಾರರು!
ಮೈಸೂರು, ನವೆಂಬರ್ 22: ಎಂಎಲ್ ಸಿ ಗೋ ಮಧುಸೂದನ್ ಅವರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಮೈಸೂರಿನಲ್ಲಿ ನ.22 ರಂದು ಕರೆ ನೀಡಿರುವ ಬಂದ್, ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ. ಬೆಳಗ್ಗಿನ ಚಿತ್ರ ಪ್ರದರ್ಶನಗಳು ರದ್ದಾಗಿರುವುದನ್ನು ಬಿಟ್ಟರೆ ಶಾಲೆ-ಕಾಲೇಜುಗಳು, ಹೊಟೇಲ್ ಗಳು ಎಂದಿನಂತೇ ಕಾರ್ಯನಿರ್ವಹಿಸುತ್ತಿವೆ.
ಅನುಮತಿ ನೀಡದಿದ್ದರೂ ಬಲವಂತವಾಗಿ ದೇವರಾಜ ಅರಸು ರಸ್ತೆ ಅಂಗಡಿಗಳನ್ನು ಮುಚ್ಚಿಸಲು ಪ್ರತಿಭಟನಕಾರರು ಮುಂದಾದರು. 'ಅನುಮತಿ ಇಲ್ಲದಿದ್ದರೂ ಯಾಕೆ ಅಂಗಡಿಗಳನ್ನು ಮುಚ್ಚುತ್ತಿದ್ದಿರಿ' ಎಂದು ಪ್ರಶ್ನಿಸಿದ್ದಕ್ಕೆ ಮಹಾನಗರ ಪಾಲಿಕೆ ಸದಸ್ಯ ಪ್ರಶಾಂತ್ ಗೌಡ ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸ್ ಮಧ್ಯಸ್ಥಿಕೆಯಲ್ಲಿ ಪರಿಸ್ಥಿತಿ ತಣ್ಣಗಾಯಿತು.

'ನಮ್ಮ ಪ್ರತಿಭಟನೆ ವಿಫಲವಾಗಲು ಪೊಲೀಸ್ ಇಲಾಖೆ ಕಾರಣ. ಪೊಲೀಸರು ಇರುವುದು ದೇಶದ್ರೋಹಿಗಳನ್ನ ಬಂಧಿಸುವುದಕ್ಕೆ. ಆದ್ರೆ ಪೊಲೀಸರು ದೇಶಪ್ರೇಮಿಗಳಾದ ನಮ್ಮನ್ನ ಬಂಧಿಸುತ್ತಿದ್ದಾರೆ. ಪೊಲೀಸರು ಬಂದ್ ಗೆ ಕೆರೆ ನೀಡಲು ನಿರಾಕರಣೆ ಮಾಡಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಗೋ.ಮಧುಸೂದನ್ ಅನ್ನು ಇನ್ನೂ ಮೂರು ದಿನದಲ್ಲಿ ಬಂಧಿಸದಿದ್ದರೆ ರಾಜ್ಯ ವ್ಯಾಪ್ತಿ ಪ್ರತಿಭಟನೆ ಮಾಡಬೇಕಾಗುತ್ತದೆ' ಎಂದು ಈ ಸಂದರ್ಭದಲ್ಲಿ ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶ ಶಿವಯೋಗಿ ಸ್ವಾಮೀಜಿ ಹೇಳಿಕೆ ನೀಡಿದರು.

ಗೋ.ಮಧುಸೂದನ್ ಖಾಸಗಿ ಸುದ್ದಿವಾಹಿನಿಯ ಚರ್ಚೆಯಲ್ಲಿ ಮಾತನಾಡುತ್ತಾ, ಅಂಬೇಡ್ಕರ್ ಬರೆದಿರುವ ಸಂವಿಧಾನ ನಾವು ಒಪ್ಪುವುದಿಲ್ಲ, ಅದೊಂದು ಸುಳ್ಳಿನ ಕಂತೆ ಎಂದು ಹೇಳಿ ರಾಷ್ಟ್ರೀಯ ಏಕತೆಗೆ ಧಕ್ಕೆ ತಂದಿದ್ದಾರೆ ಎಂಬುದು ಪ್ರತಿಭಟನಾಕಾರರ ವಾದ.

ಎಸ್ಡಿಪಿಐ, ಸಿಪಿಐಎಂ, ಮೈಸೂರು ವಿವಿ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ದಲಿತ ಸಂಘಟನೆಗಳು ಈ ಬಂದ್ ಗೆ ಕರೆನೀಡಿವೆ.












Click it and Unblock the Notifications