ಬೈಕ್ ಕಳ್ಳರ ಮಟ್ಟ ಹಾಕುತ್ತಿರುವ ಮೈಸೂರು ಪೊಲೀಸರು
ಮೈಸೂರು, ಜೂನ್ 6: ಮೈಸೂರು ನಗರದಲ್ಲಿ ದ್ವಿಚಕ್ರ ವಾಹನ ಕಳ್ಳರನ್ನು ಪತ್ತೆ ಮಾಡಿ ಬಂಧಿಸುತ್ತಿರುವ ಪೊಲೀಸರು, ವಾಹನಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಜೈಲಿಗೆ ಅಟ್ಟುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ದ್ವಿಚಕ್ರ ವಾಹನ ಕಳ್ಳರ ಅಟ್ಟಹಾಸ ಜೋರಾಗಿತ್ತು. ಸಾರ್ವಜನಿಕ ವಾಹನ ನಿಲ್ದಾಣ, ಮನೆ ಮುಂದೆ, ರಸ್ತೆಗಳಲ್ಲಿ ಹೀಗೆ ಎಲ್ಲೆಂದರಲ್ಲಿ ನಿಲ್ಲಿಸಿದ ವಾಹನಗಳನ್ನು ಕಳವು ಮಾಡುವ ಪ್ರಕರಣಗಳು ಹೆಚ್ಚಾಗಿದ್ದವು. ಇದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸಿದ್ದರೆ, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.
ಕೆಲವೊಮ್ಮೆ ತಮ್ಮ ಮನೆ ಮುಂದೆ ನಿಲ್ಲಿಸಿದ ವಾಹನಗಳು ಬೆಳಗಾಗುವುದರೊಳಗೆ ಮಂಗಮಾಯವಾಗುತ್ತಿದ್ದವು. ಕೆಲವು ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ತಮ್ಮ ಆಟಾಟೋಪ ಮೆರೆಯುತ್ತಿದ್ದ ಬೈಕ್ ಕಳ್ಳರು ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದರು. ನಗರದಲ್ಲಿ ದ್ವಿಚಕ್ರ ವಾಹನಗಳ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಆಪರೇಷನ್ ಫಾಸ್ಟ್ಟ್ರಾಕ್ ಮೂಲಕ ಕಳ್ಳರ ಪತ್ತೆಗೆ ಟೊಂಕ ಕಟ್ಟಿ ನಿಂತರು. ಸಂಶಯಾಸ್ಪದವಾಗಿ ಓಡಾಡುವ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸತೊಡಗಿದರು. ಹೀಗಾಗಿ ಒಬ್ಬರ ಮೇಲೊಬ್ಬರಂತೆ ಬೈಕ್ ಕಳ್ಳರು ಸಿಕ್ಕಿ ಬೀಳತೊಡಗಿದರು.

ಈ ನಡುವೆ ಕರ್ತವ್ಯದಲ್ಲಿದ್ದ ಅಶೋಕಪುರಂ ಪೊಲೀಸರು ಶ್ರೀರಾಂಪುರ 2ನೇ ಹಂತದ ಹುಣಸೆ ಮರದ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಹೋಂಡಾ ಆಕ್ಟಿವಾದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಬರುತ್ತಿರುವುದು ಕಾಣಿಸಿತ್ತು. ಹೀಗಾಗಿ ಆತನನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಆತ ಹುಣಸೂರು ತಾಲೂಕಿನ ನೆಲ್ಲೂರು ಪಾಲ ತಾಲೂಕಿನ ಬೆಟ್ಟನಾಯಕ್ ಎಂಬುವರ ಪುತ್ರ ಪ್ರಸನ್ನ ಅಲಿಯಾಸ್ ಕುಳ್ಳ (24) ಎಂಬುದು ಗೊತ್ತಾಯಿತು. ಅಲ್ಲದೆ, ಇನ್ನಷ್ಟು ತನಿಖೆ ನಡೆಸಿದಾಗ ಅಶೋಕಪುರಂ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳು ಮತ್ತು ಮೊಬೈಲ್ ಫೋನ್ಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿಯಿಂದ ಒಟ್ಟು 1,18,000 ರೂ.ಮೌಲ್ಯದ ಹೋಂಡಾ ಆಕ್ಟಿವಾ, ಸುಜುಕಿ ಸ್ವಿಷ್ 125, ಒಂದು ಮೋಟೋ ಜಿ ಮೊಬೈಲ್, ಒಂದು ಹಾನರ್ ಮೊಬೈಲ್, ಒಂದು ಸ್ಯಾಮ್ ಸಂಗ್ ಮೊಬೈಲ್ನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ನಗರದ ಡಿಸಿಪಿ ಮುತ್ತುರಾಜು ಅವರ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಎಸಿಪಿ ಗೋಪಾಲಕೃಷ್ಣ ಟಿ. ನಾಯಕ್ ಅವರ ನೇತೃತ್ವದಲ್ಲಿ ಅಶೋಕಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ, ಸಿಬ್ಬಂದಿ ಮಹದೇವಯ್ಯ, ಆನಂದ್, ರಾಘವೇಂದ್ರ, ಗಿರೀಶ್, ಶಿವಪ್ರಕಾಶ್, ರಾಜು ಮತ್ತು ಜಗದೀಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications