ಅಧಿಕಾರ ವಹಿಸಿಕೊಂಡ 5 ದಿನದಲ್ಲೇ ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ
ಮೈಸೂರು, ಏಪ್ರಿಲ್ 30 : ದಿಢೀರ್ ಬೆಳವಣಿಗೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಳಾಗಿದ್ದ ದರ್ಪಣ್ ಜೈನ್ ವರ್ಗಾವಣೆಗೊಂಡಿದ್ದು, ನೂತನ ಜಿಲ್ಲಾಧಿಕಾರಿಗಳಾಗಿ ರಾಯಚೂರು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿದ್ದ ಅಭಿರಾಮ್ ಜಿ.ಶಂಕರ್ ಅವರನ್ನು ನೇಮಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ಜಿಲ್ಲಾಧಿಕಾರಿಗಳ ಸರಣಿ ವರ್ಗಾವಣೆಯಾಗಿದೆ. ಈಗ ಬರುತ್ತಿರುವವರು ನಾಲ್ಕನೇ ಜಿಲ್ಲಾಧಿಕಾರಿಯಾಗಿದ್ದಾರೆ. ರಾಜ್ಯ ವಿಧಾನಸಭೆಗೆ ಚುನಾವಣಾ ದಿನಾಂಕ ಘೋಷಣೆಯಾದ ನಂತರ 3ನೇ ಜಿಲ್ಲಾಧಿಕಾರಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಚುನಾವಣಾ ದಿನಾಂಕ ಘೋಷಣೆಗೆ 15 ದಿನಗಳಿಗೂ ಮುನ್ನ ಡಿ.ರಂದೀಪ್ ಅವರ ವರ್ಗಾವಣೆಯಾಗಿತ್ತು.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿ ದರ್ಪಣ್ ಜೈನ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ. ನಗರದಲ್ಲಿ ಶನಿವಾರವಷ್ಟೇ ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಉಮೇಶ್ ಸಿನ್ಹಾ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಚುನಾವಣಾ ಆಯೋಗದ ಮಹಾ ನಿರ್ದೇಶಕ (ವೆಚ್ಚ) ದಿಲೀಪ್ ಶರ್ಮ ಅವರುಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದರು. ಅದರ ಬೆನ್ನಲ್ಲೇ ಜಿಲ್ಲಾಧಿಕಾರಿ ವರ್ಗಾವಣೆಯಾಗಿದೆ.

ಜಿಲ್ಲಾಧಿಕಾರಿಯಾಗಿದ್ದ ಡಿ.ರಂದೀಪ್ ಅವರನ್ನು ಮಾ.3ರಂದು ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು. ಇವರ ಸ್ಥಾನಕ್ಕೆ ವಿಜಯಪುರ ಜಿಲ್ಲಾಧಿಕಾರಿಯಾಗಿದ್ದ ಕೆ.ಬಿ.ಶಿವಕುಮಾರ್ ಅವರನ್ನು ವರ್ಗಾಯಿಸಲಾಗಿತ್ತು. ಹಾಗಿದ್ದೂ ರಂದೀಪ್ ಅವರು ಮಾ.12ರವರೆಗೂ ಮೈಸೂರಿನ ಹುದ್ದೆಯಲ್ಲೇ ಮುಂದುವರೆದಿದ್ದರು. ಬಳಿಕ ಶಿವಕುಮಾರ್ ಅವರು ಮಾ.13ರಂದು ಅಧಿಕಾರ ವಹಿಸಿಕೊಂಡಿದ್ದರು.
ಚುನಾವಣಾ ಆಯೋಗದ ನಿರ್ದೇ ಶನದಂತೆ ಶಿವಕುಮಾರ್ ಅವರನ್ನು ಏ.16ರಂದು ವರ್ಗಾವಣೆ ಮಾಡಲಾಯಿತು. ಅವರ ಜಾಗಕ್ಕೆ ಬೆಂಗಳೂರಿನಲ್ಲಿ ಕೈಗಾರಿಕಾ ಅಭಿವೃದ್ಧಿ ಇಲಾಖೆ ಆಯುಕ್ತ ರಾಗಿದ್ದ ದರ್ಪಣ್ ಜೈನ್ ಅವರನ್ನು ನೇಮಿಸಲಾಗಿತ್ತು.
ಮೈಸೂರಿಗೆ ಬಂದು ಅಧಿಕಾರ ವಹಿಸಿಕೊಂಡ 5 ದಿನಗಳಲ್ಲೇ ದರ್ಪಣ್ ಜೈನ್ ದಿಢೀರ್ ವರ್ಗ ವಾಗಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಮತದಾರರ ಪಟ್ಟಿಯಲ್ಲಿನ ದೋಷಕ್ಕೆ ಸಂಬಂಧಿಸಿ ದಂತೆ ಡಿ.ರಂದೀಪ್ ಅವರು ತನಿಖೆಗೆ ಆದೇಶ ನೀಡಿ ಮಾಜಿ ಸಚಿವ ಎಸ್.ಎ.ರಾಮದಾಸ್ ಅವರ ಆರೋಪಕ್ಕೆ ಪುಷ್ಟಿ ನೀಡಿದ ಹಿನ್ನೆಲೆಯಲ್ಲಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಹಾಗಾಗಿ ರಂದೀಪ್ ಅವರನ್ನು ವರ್ಗಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಜಿಲ್ಲಾಧಿಕಾರಿಗಳಾಗಿದ್ದ ಶಿವಕುಮಾರ್ ಮತ್ತು ದರ್ಪಣ್ ಜೈನ್ ಕೇಂದ್ರ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿರಬಹುದೆಂಬ ಮಾತುಗಳು ಅಧಿಕಾರಿಗಳ ವಲಯದಲ್ಲಿ ಕೇಳಿ ಬಂದಿವೆ.












Click it and Unblock the Notifications