ಅಕ್ರಮ ಹಾಲು ಮಾರಾಟಕ್ಕೆ ತಡೆ: ಮೈಮುಲ್ ಎಂಡಿಗೆ ಕೊಲೆ ಬೆದರಿಕೆ
ಮೈಸೂರು, ಏಪ್ರಿಲ್ 20: ಮೈಸೂರಿನ ನಂದಿನಿ ಹಾಲು ವಿತರಕನೊಬ್ಬ, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಅವರನ್ನು ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಕುರಿತು ಆಲನಹಳ್ಳಿ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಂದಿನಿ ಹಾಲು ವಿತರಕರಾದ ಕಮಲಮ್ಮ ಪುತ್ರ ದಿನೇಶ್ ಎಂಬಾತನು, ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರದಿಂದ ಬಡವರಿಗೆ ಉಚಿತವಾಗಿ ನೀಡಲಾಗುತ್ತಿದ್ದ, ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೇಟ್ ಗಳನ್ನು ಬಡವರಿಗೆ ನೀಡದೇ ಅಕ್ರಮವಾಗಿ ಮಾರಾಟ ಮಾಡುತ್ತಿದ್ದನು.
ಮೈಸೂರಿನ ಮಂಡಿ ಮಾರುಕಟ್ಟೆ ಬಳಿಯ ಹಾಲಿನ ಮಾರಾಟ ಕೇಂದ್ರದಲ್ಲಿ ಆರೋಪಿ ದಿನೇಶ್, ಬಾಲಕೃಷ್ಣ ಎಂಬಾತನ ಜತೆಗೂಡಿ ಹಣಕ್ಕಾಗಿ ಇದನ್ನು ಮಾರಾಟ ಮಾಡುತ್ತಿದ್ದರು. ಇಲ್ಲಿಗೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ 8 ನಂದಿನಿ ಪ್ಯಾಕೇಟ್ ಗಳನ್ನು ಜಪ್ತಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಕಮಲಮ್ಮ ಅವರಿಗೆ ಮೈಮುಲ್ ಹಾಲು, ಹಾಲಿನ ಉತ್ಪನ್ನಗಳ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಆಕ್ರೋಶಗೊಂಡ ದಿನೇಶ್, ಮೈಮುಲ್ ಕಛೇರಿಗೆ ಬಂದು ತಮ್ಮೊಂದಿಗೆ ಅನುಚಿತವಾಗಿ ವರ್ತನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕ ಅಶೋಕ್ ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications