ರಾಜೀನಾಮೆ ವದಂತಿ ಶುದ್ಧ ಸುಳ್ಳು ಎಂದ ಸಂಸದ ಶ್ರೀನಿವಾಸ್ ಪ್ರಸಾದ್
Recommended Video
ಮೈಸೂರು, ಸೆಪ್ಟೆಂಬರ್ 9: "ನನಗೆ ವರ್ಗಾವಣೆ ವಿಚಾರದಲ್ಲಿ ಅಸಮಾಧಾನ, ಗೊಂದಲ ಇರುವುದು ನಿಜ. ಆದರೆ, ನಾನು ರಾಜೀನಾಮೆ ನೀಡುವ ವಿಚಾರ ಶುದ್ಧ ಸುಳ್ಳು" ಎಂದು ಸ್ಪಷ್ಟನೆ ನೀಡಿದ್ದಾರೆ ಸಂಸದ ವಿ.ಶ್ರೀನಿವಾಸಪ್ರಸಾದ್.
ಡಿಕೆಶಿ ಬಂಧನ: ದ್ವೇಷ ಮರೆತು ಮತ್ತೆ ಒಂದಾದ ಜೆಡಿಎಸ್ ಕಾಂಗ್ರೆಸ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜಕೀಯದಲ್ಲಿ ವೈಯಕ್ತಿಕವಾಗಿ ನನಗೆ ಏನೂ ಆಗಬೇಕಿಲ್ಲ. ಆದರೆ, ವರ್ಗಾವಣೆ ಹಾಗೂ ಇತರ ವಿಚಾರಗಳಲ್ಲಿ ಜನಪ್ರತಿನಿಧಿಗಳು ಶಿಫಾರಸು ಮಾಡುವುದು ಸಹಜ. ಅದು ಬೆಳಿಗ್ಗೆ ಹಾಸಿಗೆಯಿಂದ ಎದ್ದ ಸಮಯದಿಂದಲೇ ಆರಂಭವಾಗುತ್ತದೆ. ವರ್ಗಾವಣೆ ಶಿಫಾರಸು ಪತ್ರ ಕೋರಿ ಜನರು ಬರುತ್ತಿರುತ್ತಾರೆ. ಪತ್ರ ಕೊಡದಿದ್ದರೆ ಬೇಸರ ಮಾಡಿಕೊಳ್ಳುತ್ತಾರೆ. ಹೀಗಾಗಿ, ಅವರಿಗೆ ಸ್ಪಂದಿಸಬೇಕಾಗುತ್ತದೆ. ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ಹಾಗೂ ಇತರ ಸಮಸ್ಯೆಗಳಿದ್ದರೆ ಪರಿಹರಿಸಿಕೊಳ್ಳಬೇಕು. ಎಲ್ಲವೂ ಪಾರದರ್ಶಕವಾಗಿ ನಡೆಯಬೇಕು. ಅಧಿಕಾರಿಯೊಬ್ಬರ ವರ್ಗಾವಣೆ ವಿಚಾರದಲ್ಲಿ ಈಗ ರಾಜೀನಾಮೆ ವದಂತಿ ಹಬ್ಬಿಸಲಾಗಿದೆ. ಇದು ಶುದ್ಧ ಸುಳ್ಳು" ಎಂದರು.
'ನಾನು ರಾಜಕಾರಣದಲ್ಲಿ ಹಿರಿಯ ಮುಖಂಡ. ಯಾವಾಗ ಏನು ಮಾಡಬೇಕೆಂಬುದು ಗೊತ್ತಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರು ಕೆಲಸ ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಇದೇ ಮೊದಲು, ಇದೇ ಕೊನೆ ಆಗಬಾರದು" ಎಂದು ಹೇಳಿದರು.