ಕೊರೊನಾ ಸೋಂಕು ಚಿಕಿತ್ಸೆಗೆ ಅಡ್ಡಿಪಡಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಪ್ರತಾಪ್ ಸಿಂಹ
ಮೈಸೂರು, ಜುಲೈ 20: ಕೋವಿಡ್-19 ಸೋಂಕಿಗೆ ಚಿಕಿತ್ಸೆ ನೀಡುವುದಕ್ಕೆ ಯಾರೇ ಅಡ್ಡಿಪಡಿಸಿದರೂ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದರು.
ನಗರದ ಎನ್.ಆರ್ ಕ್ಷೇತ್ರದ ವ್ಯಾಪ್ತಿಯ ಸೇಂಟ್ ಜೋಸೆಫ್ ಆಸ್ಪತ್ರೆಯಲ್ಲಿ ಆರಂಭಿಸಿರುವ ಕೋವಿಡ್-19 ಫೀವರ್ ಕ್ಲಿನಿಕ್ ಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪೋಲಿಯೋ ಲಸಿಕೆ ಹಾಕುವ ವೇಳೆಯೂ ಹಲವು ಇಂತಹ ಅಪಪ್ರಚಾರ ಮಾಡಲಾಗಿತ್ತು. ಹೀಗಾಗಿ ಕೋವಿಡ್-19ಗೆ ಚಿಕಿತ್ಸೆ ಬಗ್ಗೆ ಇಂತಹ ಅಪಪ್ರಚಾರ ಮಾಡುವುದನ್ನು ಬಿಡಬೇಕು ಎಂದರು.
ಕೋವಿಡ್-19 ವೈರಸ್ ನಿಂದ ಸಮಸ್ಯೆಗೆ ಸಿಲುಕಿದರೆ ಕೇವಲ ಒಬ್ಬ ವ್ಯಕ್ತಿ ಮಾತ್ರವಲ್ಲದೇ ನೆರೆಹೊರೆಯವರು ಸಹ ಸಮಸ್ಯೆಗೆ ಸಿಲುಕುತ್ತಾರೆ. ಆದ್ದರಿಂದ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಯಾರೇ ಅಡ್ಡಪಡಿಸಿದರೂ, ಪೊಲೀಸರ ನೆರವಿನೊಂದಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೊರೊನಾ ಸೋಂಕು ಹರಡುವಿಕೆ ಹೆಚ್ಚುತ್ತಿರುವ ಕಾರಣಕ್ಕಾಗಿ ಲಾಕ್ ಡೌನ್ ವಿಸ್ತರಣೆ ಮಾಡುವುದರಿಂದ ಯಾವುದೇ ಲಾಭವಿಲ್ಲ. ಮೈಸೂರಿನಲ್ಲೇ ಕೊರೊನಾ ನಿಯಂತ್ರಣಕ್ಕಾಗಿ ದೊಡ್ಡಮಟ್ಟದಲ್ಲಿ ತಯಾರಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಲಾಕ್ಡೌನ್ ಮಾಡುವ ಅಗತ್ಯವಿಲ್ಲ. ಆದರೆ ಜನರು ಎಚ್ಚರಿಕೆಯಿಂದಿರಬೇಕು ಮತ್ತು ಅವರು ನಮ್ಮೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮೈಸೂರಿನ ಎನ್.ಆರ್ ಕ್ಷೇತ್ರದಲ್ಲಿ ಮಾತ್ರ ಕೋವಿಡ್-19 ಸಾಂದ್ರತೆ ಹೆಚ್ಚಿದ್ದು, ಇದಕ್ಕೆ ಚಿಕಿತ್ಸೆ ನೀಡಲು ಜನರು ಕಟ್ಟುನಿಟ್ಟಾಗಿ ಸಹಕರಿಸಬೇಕಿದೆ ಎಂದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಸರ್ಕಾರದ ವತಿಯಿಂದಲೇ ಚಿಕಿತ್ಸೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.












Click it and Unblock the Notifications