ಗಂಡನ ಚುಚ್ಚುಮಾತು ಸಹಿಸಲಾಗದೇ ನಾಲೆಗೆ ಹಾರಿದ ಅಮ್ಮ ಮಗಳು
ಪಿರಿಯಾಪಟ್ಟಣ, ನವೆಂಬರ್ 16: ಕೌಟುಂಬಿಕ ಕಲಹದಿಂದ ನೊಂದು ತಾಯಿ, ಮಗಳು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಕೆಳಗನಹಳ್ಳಿ ದೊಡ್ಡಕೊಪ್ಪಲು ಗ್ರಾಮದ ಸಣ್ಣೇಗೌಡರ ಪತ್ನಿ ಲಕ್ಷ್ಮೀ (40), ಮಗಳು ಸುನಿತಾ (16) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು. ಲಕ್ಷ್ಮಿ, ಸಣ್ಣೇಗೌಡ ದಂಪತಿ ನಡುವೆ ನ.13ರ ರಾತ್ರಿ ಜಗಳ ನಡೆದಿತ್ತು. ಇದರಿಂದ ಬೇಸತ್ತ ಲಕ್ಷ್ಮಿ ಮತ್ತು ಮಗಳು ನ.14ರಂದು ಬೆಳಿಗ್ಗೆ ಅತ್ತಿಗೋಡು ಗ್ರಾಮದ ಬಳಿಯಿರುವ ಹಾರಂಗಿ ಬಲದಂಡೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಮನೆಯಲ್ಲಿ ಇವರಿಬ್ಬರು ಕಾಣದಿದ್ದಾಗ ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭ ನಾಲೆಯ ದಡದಲ್ಲಿ ಪರ್ಸ್, ಬ್ಯಾಗ್, ಚಪ್ಪಲಿ ಕಂಡು ಬಂದಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. ಅಗ್ನಿಶಾಮಕ ದಳದವರು ಲಕ್ಷ್ಮಿ ಶವವನ್ನು ಹೊರತೆಗೆದಿದ್ದು, ಮಗಳ ಶವಕ್ಕಾಗಿ ಶೋಧ ಮುಂದುವರೆದಿದೆ.

ಸಣ್ಣೇಗೌಡನಿಗೆ 17 ವರ್ಷದ ಹಿಂದೆ ಲಕ್ಷ್ಮಿಯವರನ್ನು ಎರಡನೇ ಮದುವೆ ಮಾಡಿಕೊಡಲಾಗಿತ್ತು. ಸಣ್ಣೇಗೌಡನ ಮೊದಲ ಹೆಂಡತಿಗೆ ಸ್ವಾಮಿ ಎಂಬ ಮಗನಿದ್ದು ಆಗಾಗ್ಗೆ ಆಸ್ತಿ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಸಣ್ಣೇಗೌಡ ಪತ್ನಿ ಲಕ್ಷ್ಮಿ ಮತ್ತು ಮಗಳು ಸುನಿತಾಗೆ ಕಿರುಕುಳ ನೀಡುತ್ತಿದ್ದನಲ್ಲದೆ, ನೀವು ನದಿಗೆ ಹಾರಿ ಸತ್ತರೆ ನನ್ನ ಮಗನಿಗೆ ಆಸ್ತಿ ಉಳಿಯುತ್ತದೆ ಎಂದು ಆತ್ಮಹತ್ಯೆಗೆ ಪ್ರೇರಣೆ ನೀಡುವ ರೀತಿ ಬೈದು ಚುಚ್ಚು ಮಾತುಗಳನ್ನಾಡುತ್ತಿದ್ದನು. ಗಂಡ ಸಣ್ಣೇಗೌಡ, ಮಗ ಸ್ವಾಮಿ ಮತ್ತು ನಾದಿನಿ ಸೇರಿ ಕಿರುಕುಳ ನೀಡಿದ್ದರಿಂದ ನನ್ನ ತಂಗಿ ಲಕ್ಷ್ಮಿ ಮತ್ತು ಮಗಳು ಸುನಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತಳ ಅಣ್ಣ ಸ್ವಾಮೀಗೌಡ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications