ಮೈಸೂರಿನಲ್ಲಿ ಹೆಚ್ಚಿದೆ ವಾನರನ ಆರ್ಭಟ; ಪಾಲಿಕೆಗೆ ದೂರುಗಳ ಮಹಾಪೂರ
ಮೈಸೂರು, ಜುಲೈ 1: ಅರಮನೆ ನಗರಿ ಎಂಬ ಖ್ಯಾತಿ ಹೊಂದಿರುವ ಮೈಸೂರಿನಲ್ಲಿ ಇತ್ತೀಚಿಗೆ ವಾನರರ ಪುಂಡಾಟ ಹೆಚ್ಚಾಗಿದೆ. ಅವುಗಳ ಹಾವಳಿ ತಪ್ಪಿಸುವಂತೆ ಮೈಸೂರು ಮಹಾನಗರ ಪಾಲಿಕೆಗೆ ದೂರುಗಳ ಮಹಾಪೂರವೇ ಹರಿದುಬರುತ್ತಿದೆ.
ಕಷ್ಟಪಟ್ಟು ಬೆಳೆಸಿದ ತರಕಾರಿ ಗಿಡಗಳನ್ನು ಮಂಗಗಳು ತಿಂದು ಹಾಕುವುದಲ್ಲದೇ, ಗಿಡಗಳನ್ನೂ ಮುರಿದು ಹಾಕುತ್ತಿವೆ. ಮನೆಯ ತಾರಸಿಯಲ್ಲಿರುವ ನೀರಿನ ಪೈಪ್ ಮುರಿದು ಹಾಕಿ, ಕಿಟಕಿಗಳನ್ನು ಒಡೆದು ಹಾಕುತ್ತಿವೆ ಎಂಬ ದೂರುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
ಅಹ್ಮದಾಬಾದಿನಲ್ಲೊಬ್ಬ ಕೋತಿ ಪ್ರೇಮಿಯ ಮಾನವೀಯ ಸಂವೇದನೆಯ ಕತೆ
ಮೈಸೂರು ನಗರದ ಕೃಷ್ಣಮೂರ್ತಿಪುರಂ, ವಿದ್ಯಾರಣ್ಯಪುರಂ, ಬಸವೇಶ್ವರ ರಸ್ತೆ, ಶ್ರೀರಾಂಪುರಂ, ಸಿದ್ದಾರ್ಥ ಲೇಔಟ್, ನಜರಬಾದ್, ಯಾದವಗಿರಿ, ಚಾಮುಂಡಿಪುರಂ, ಬೋಗಾದಿ ಸೇರಿದಂತೆ ನಗರದ ಹೊರವಲಯದ ಬಡಾವಣೆಗಳಲ್ಲಿ ನಿತ್ಯವೂ ಮಂಗಗಳು ಕಾಣಿಸಿಕೊಳ್ಳುತ್ತವೆ. ಒಣ ಹಾಕಿದ ಬಟ್ಟೆಗಳನ್ನು ಹರಿಯುವುದು, ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಹಾರುತ್ತಾ, ಬಟ್ಟೆಗಳನ್ನು, ಚಪ್ಪಲಿ ಪಾತ್ರೆ ಪಗಡೆಗಳನ್ನು ಹೊತ್ತೊಯ್ಯುವುದು, ವಸ್ತುಗಳನ್ನು ಉರುಳಿಸುವುದು, ಆಹಾರ ಪದಾರ್ಥಗಳನ್ನು ಹಾಳುಗೆಡುವುತ್ತಾ ಉಪಟಳ ನೀಡುತ್ತಿವೆ. ಮೈಸೂರಿನಲ್ಲಿ ಮಾತ್ರವಲ್ಲ, ಚಾಮುಂಡಿಬೆಟ್ಟದಲ್ಲೂ ವಾನರ ಕಾಟ ಹೆಚ್ಚಿದೆ. ಕೆಂಪು ಮತ್ತು ಕಪ್ಪು ಮೂತಿಯ ಮಂಗಗಳು ಹೆಚ್ಚಾಗಿ ದಾಳಿ ಮಾಡುತ್ತಿವೆ.
ಇತ್ತೀಚಿನ ದಿನಗಳಲ್ಲಿ ಅರಣ್ಯ ವ್ಯಾಪ್ತಿ ಕಡಿಮೆಯಾಗುತ್ತಿರುವುದರಿಂದ ಮಂಗಗಳು ಆಶ್ರಯ ಅರಸಿ ನಗರದತ್ತ ಬರುತ್ತಿವೆ. ಅಲ್ಲದೇ, ಬರದಿಂದಾಗಿ ಆಹಾರ, ನೀರು ಲಭ್ಯವಾಗದ ಕಾರಣ ಅವು ನಗರ ಪ್ರದೇಶಗಳಿಗೆ ಬರುತ್ತಿವೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.
ಗ್ರಾಮದ 20 ಮಂದಿಗೆ ಕಚ್ಚಿದ ಒಂಟಿ ಮಂಗ, ಆತಂಕ
ಮಂಗಗಳನ್ನು ಹಿಡಿದು ಸ್ಥಳಾಂತರಿಸಲು ಅನುಮತಿ ನೀಡಿದರೂ ಅನೇಕ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಮಂಗಗಳನ್ನು ಹಿಡಿಯುವಾಗ ಹಾಗೂ ಅರಣ್ಯಕ್ಕೆ ಬಿಡುವಾಗ ಅರಣ್ಯ ಇಲಾಖೆಯ ಅಧಿಕಾರಿ ಕಡ್ಡಾಯವಾಗಿ ಇರಲೇಬೇಕು. ಮಂಗಗಳನ್ನು ಬೋನಿಟ್ಟು ಬಂಧಿಸುವಾಗ ಯಾವುದೇ ಮಂಗಕ್ಕೆ ಗಾಯವಾದರೆ ಅಥವಾ ಪ್ರಾಣಹಾನಿಯಾದರೆ ಪಾಲಿಕೆಯ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ. ಆದ್ದರಿಂದ ಪಾಲಿಕೆಯೂ ಮಂಗಗಳನ್ನು ಹಿಡಿದು ಸ್ಥಳಾಂತರಿಸಲು ಹಿಂದೇಟು ಹಾಕುತ್ತಿದೆ.
ಚಾಮುಂಡಿ ಬೆಟ್ಟದಲ್ಲೂ ಮಂಗಳ ಹಾವಳಿ ಹೆಚ್ಚಿದ್ದು, ಪ್ರವಾಸಿಗರೂ ಭಯ ಪಡುತ್ತಿದ್ದಾರೆ. ಅವುಗಳನ್ನು ಹಿಡಿಯುವಂತೆ ಮೈಸೂರು ಮಹಾನಗರ ಪಾಲಿಕೆಗೆ ದೂರುಗಳ ಮಹಾಪೂರವೇ ಹರಿದುಬರುತ್ತಿದೆ. ಸಾಮಾನ್ಯವಾಗಿ ಮಂಗಗಳನ್ನು ಹಿಡಿದು ಚಾಮುಂಡಿ ಬೆಟ್ಟ ಸೇರಿದಂತೆ ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತದೆ. ಆದ್ದರಿಂದ ಅವು ಮತ್ತೆ ನಗರದೊಳಕ್ಕೆ ಬರುತ್ತಿವೆ.
ಮಲೆನಾಡಾಯ್ತು, ಈಗ ಹಾಸನಕ್ಕೆ ಕಾಲಿಟ್ಟ ಮಂಗನ ಕಾಯಿಲೆ
ಮರ್ಕಟಗಳ ನಿಯಂತ್ರಣಕ್ಕೆ ಪಾಲಿಕೆಯಿಂದ ಶ್ಯೂರ್ ಶಾಟ್ ಗನ್ ಬಳಸಿ ಕಾರ್ಬನ್ ಡೈ ಆಕ್ಸೈಡ್ ಯುಕ್ತ ಗುಂಡನ್ನು ಹೊಡೆಯುತ್ತಿದ್ದೆವು. ಗುಂಡು ತಗುಲಿದರೆ ಅವುಗಳಿಗೆ ಪ್ರಾಣಾಪಾಯವಾಗಲಿ, ಗಾಯವಾಗಲಿ ಆಗುತ್ತಿರಲಿಲ್ಲ. ಶಬ್ದದೊಂದಿಗೆ, ದೇಹದ ಮೇಲೆ ಪೈಂಟ್ ಚಿಮ್ಮಿ, ಚಿಕ್ಕದಾಗಿ ಏಟಾಗುತ್ತಿತ್ತು. ಅದರಿಂದ ಹೆದರಿ ಅವು ಪಲಾಯನ ಮಾಡುತ್ತಿದ್ದವು. ಆದರೆ, ಮೂರ್ನಾಲ್ಕು ದಿನಗಳ ಬಳಿಕ ಅದೇ ಸ್ಥಳಕ್ಕೆ ಹಿಂದಿರುಗುತ್ತಿದ್ದವು. ಆದರೆ ಮಂಗಗಳಿಗೆ ಈಗ ಅಭ್ಯಾಸವಾಗಿರುವುದರಿಂದ ಶ್ಯೂರ್ ಶಾಟ್ ಗನ್ ಬಳಸಿದರೂ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.