ಮೈಸೂರಿನ ಹದಿನಾರು ಕೆರೆಗೆ ಮಂಗೋಲಿಯಾ ಅತಿಥಿಗಳ ಪಿಕ್ನಿಕ್!
ಮೈಸೂರಿನ ಹದಿನಾರು ಕೆರೆಗೆ ಮಂಗೋಲಿಯಾದಿಂದ ಪಕ್ಷಿಗಳು ವಲಸೆ ಬಂದಿವೆ. ಅಲ್ಲಿನ ಚಳಿಗಾಲ ತಡೆಯುವುದು ಕಷ್ಟ. ಆದ್ದರಿಂದಲೇ ಸೂಕ್ತ ವಾತಾವರಣ ಇರುವ ಕೆರೆಗಳ ಬಳಿ ಬಿಡಾರ ಹೂಡುತ್ತವೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಹಿಂತಿರುಗುತ್ತವೆ
ಮೈಸೂರು, ಫೆಬ್ರವರಿ 27: ಇದೇನಪ್ಪಾ ಹದಿನಾರು ಕೆರೆಗೂ ಮಂಗೋಲಿಯಾ ಅತಿಥಿಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ ಅಂತ ಅಚ್ಚರಿಪಡುತ್ತಿದ್ದೀರಾ?
ಮೈಸೂರು ಸೇರಿದಂತೆ ಸುತ್ತಮುತ್ತಲ ತಾಣಗಳೆಂದರೆ ವಿದೇಶಿಯರಿಗೆ ಅಚ್ಚುಮೆಚ್ಚು. ಹೀಗಾಗಿಯೇ ವಿದೇಶಿ ಅತಿಥಿಗಳು ಇಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಇದು ಮನುಷ್ಯರ ವಿಷಯವಾದರೆ, ಇನ್ನು ಪ್ರತಿ ವರ್ಷ ಸಾವಿರಾರು ಕಿ.ಮೀ. ದೂರದಿಂದ ಗಡಿರೇಖೆಯನ್ನು ದಾಟಿ ಬರುವ ಬಾನಾಡಿಗಳ ಕಥೆಯೇ ಮತ್ತೊಂದು ಬಗೆಯದಾಗಿದೆ.
ಮೊದಲೆಲ್ಲ ಕೇವಲ ರಂಗನತಿಟ್ಟು ಪಕ್ಷಿಧಾಮದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ವಿದೇಶದ ಬಾನಾಡಿಗಳು ಈಗ ತಮಗೆ ಸೂಕ್ತವಾದ ಸ್ಥಳದಲ್ಲಿ ಬೀಡು ಬಿಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿವೆ. ಸಾಮಾನ್ಯ ಜನರಿಗೆ ಇವು ಸಾವಿರಾರು ಕಿ.ಮೀ. ದೂರದಿಂದ ಗಡಿ ದಾಟಿ ಬಂದ ಪಕ್ಷಿಗಳು ಎಂಬುವುದು ಗೊತ್ತೇ ಆಗುವುದಿಲ್ಲ. ಪಕ್ಷಿ ತಜ್ಞರು ಮಾತ್ರ ಇವುಗಳನ್ನು ಗುರುತಿಸಿ ಇವು ಸ್ವದೇಶಿಯೋ, ವಿದೇಶಿಯೋ ಎಂದು ಪತ್ತೆ ಹಚ್ಚಬಲ್ಲರು.[ತರಹೇವಾರಿ ಹಕ್ಕಿಗಳು ಬಂದಿವೆ ತುಮಕೂರಿನ ಮೆಳೇಕೋಟೆ-ಭೀಮಸಂದ್ರ ಕೆರೆಗೆ]

ಮಂಗೋಲಿಯಾದ ಪಕ್ಷಿ
ಇದೀಗ ನಂಜನಗೂಡಿಗೆ ಸಮೀಪವಿರುವ ಹದಿನಾರು ಗ್ರಾಮದ ಕೆರೆಗಳಲ್ಲಿ ಸ್ವಚ್ಛಂದವಾಗಿ ಈಜಾಡುತ್ತಾ, ಹಾರಾಡುತ್ತಾ, ಕಲರವ ಮಾಡುತ್ತಾ ಗುಂಪು ಗುಂಪಾಗಿ ಕಾಣಸಿಗುತ್ತಿರುವ ಪಟ್ಟೆ ತಲೆಯ ಬಾತುಗಳು ದೇಶ ವಾಸಿಗಳಲ್ಲ. ಇವು ದೂರದ ಮಂಗೋಲಿಯಾದವು ಎಂಬುದು ಹೆಚ್ಚಿನವರಿಗೆ ಗೊತ್ತೇ ಇಲ್ಲ.
ಸಾಮಾನ್ಯವಾಗಿ ಚಳಿಗಾಲದಲ್ಲಿ ವಲಸೆ ಬಂದು, ಮೊಟ್ಟೆಯಿಟ್ಟು, ಸಂತಾನೋತ್ಪತ್ತಿ ಮಾಡಿಕೊಂಡು ಬೇಸಿಗೆ ವೇಳೆಗೆ ಮರಳುವುದು ಬಾನಾಡಿಗಳ ಜೀವನ ಪದ್ಧತಿಯಾಗಿದೆ. ಪ್ರತಿ ವರ್ಷವೂ ವಿದೇಶಗಳಿಂದ ಸಾವಿರಾರು ಪಕ್ಷಿಗಳು ನಮ್ಮ ದೇಶಕ್ಕೆ ವಲಸೆ ಬರುತ್ತವೆ. ಹೀಗೆ ಬರುವ ಪಕ್ಷಿಗಳಲ್ಲಿ ಒಂದೊಂದು ಜಾತಿ ಪಕ್ಷಿಗಳು ಒಂದೊಂದು ಕಡೆ ಬೀಡು ಬಿಡುತ್ತವೆ.[ಪ್ರೇಮ ಪಕ್ಷಿಗಳ ಪಾಲಿನ ಹನಿಮೂನ್ ಸ್ಪಾಟ್ ರಂಗನತಿಟ್ಟು!]

ಸಂತಾನೋತ್ಪತ್ತಿಗೆ ಬಂದಿಲ್ಲ
ಇತರೆ ಹಕ್ಕಿಗಳಿಗೆ ಹೋಲಿಸಿದರೆ ಮಂಗೋಲಿಯಾದಿಂದ ವಲಸೆ ಬಂದು ಹದಿನಾರು ಗ್ರಾಮದ ಕೆರೆಯಲ್ಲಿ ಬೀಡು ಬಿಟ್ಟಿರುವ ಪಟ್ಟೆಬಾತುಗಳು ವಿಭಿನ್ನ. ಇವು ಇಲ್ಲಿ ಸಂತನೋತ್ಪತ್ತಿ ಮಾಡಲು ಬಂದಿಲ್ಲ. ಬದಲಿಗೆ ಚಳಿಗಾಲವನ್ನು ಕಳೆಯಲು ಬಂದಿವೆ ಎಂದರೆ ಅಚ್ಚರಿಯಾಗುತ್ತದೆ.
ಹಾಗೆ ನೋಡಿದರೆ ಹಿಮಾಲಯ ಪರ್ವತವನ್ನು ದಾಟಿ ಬರುವುದು ಸುಲಭವಲ್ಲ. ಇಲ್ಲಿ ಶೀತ ಹವೆ ಜತೆಗೆ ಆಮ್ಲಜನಕದ ಕೊರತೆಯೂ ಕಾಣಿಸುತ್ತದೆ. ಆದರೆ ಇವೆಲ್ಲವನ್ನು ಮೀರಿ ಅವು ಬರುತ್ತವೆ ಎಂದರೆ ಸಾಮಾನ್ಯದ ಹಕ್ಕಿಗಳಲ್ಲ ಎಂಬುದು ಸಾಬೀತಾಗುತ್ತದೆ.[ಹಿಮಾಲಯದಿಂದ ಬಂದ ಅಪರೂಪದ ಅತಿಥಿ ನವರಂಗಿ!]
ತಮ್ಮ ಊರಿನ ಚಳಿಯನ್ನು ಸಹಿಸಲು ಸಾಧ್ಯವಾಗದ ಕಾರಣದಿಂದ ಚಳಿಗಾಲದಲ್ಲಿ ಭಾರತದತ್ತ ಬಂದು ಯಾವುದಾದರೊಂದು ಕೆರೆಯಲ್ಲಿ ಆಶ್ರಯ ಪಡೆದು ಅಲ್ಲಿಯೇ ಹುಳಹುಪ್ಪಟೆ ತಿನ್ನುತ್ತಾ ಕೆಲ ಕಾಲ ನೆಲೆಯೂರುವ ಈ ಬಾತುಗಳು ನೀರಿನಲ್ಲಿ ಸ್ವಚ್ಛಂದವಾಗಿ ಓಡಾಡುತ್ತಾ, ಹಾರಾಡುತ್ತಾ ಖುಷಿಯಾಗಿ ಕಾಲ ಕಳೆಯುತ್ತವೆ.
ಬೇಸಿಗೆ ಆರಂಭದಲ್ಲೇ ಜಾಗ ಖಾಲಿ
ಸೆಕೆ ಕಾಣಿಸಿಕೊಂಡು, ಬೇಸಿಗೆ ಶುರುವಾಯಿತು ಎಂಬುದು ಗೊತ್ತಾಗುತ್ತಿದ್ದಂತೆಯೇ ಇಲ್ಲಿಂದ ಜಾಗ ಖಾಲಿ ಮಾಡುತ್ತವೆ. ಅಷ್ಟೇ ಅಲ್ಲ, ಅಲ್ಲಿಯೇ ಸಂತನೋತ್ಪತ್ತಿಯನ್ನು ಕೂಡ ಮಾಡುತ್ತವೆ.[ನೀರು ಖಾಲಿಯಾದ ಕಬಿನಿಯಲ್ಲಿ ಎಲ್ಲಿಂದಲೋ ಬಂದ ಹಕ್ಕಿಗಳ ಸಂಭ್ರಮ]
ಹಗಲು ಹೊತ್ತಿನಲ್ಲಿ ಕೆರೆಯಲ್ಲಿ ತೇಲಾಡುತ್ತಾ ಕಾಲ ಕಳೆಯುವ ಇವು, ರಾತ್ರಿ ಹೊತ್ತಿನಲ್ಲಿ ಸಮೀಪದ ಹೊಲಗದ್ದೆಗಳಲ್ಲಿ ಕಾಳುಕಡ್ಡಿ, ಹುಳಹುಪ್ಪಟೆಗಳನ್ನು ತಿನ್ನುತ್ತವೆ. ತಲೆಮೇಲೆ ಪಟ್ಟೆ ಹೊಂದಿರುವ ಕಾರಣದಿಂದ ಪಟ್ಟೆ ತಲೆ ಬಾತು ಎಂದು ಕರೆಯಲಾಗುತ್ತದೆ. ಲಡಾಕ್ ನಲ್ಲಿ ಇವುಗಳ ಸಂತನೋತ್ಪತ್ತಿಯ ಕಾಲೋನಿ ಇದೆ ಎಂದು ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಆರ್.ಕೆ.ಮಧು ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications