ಆಣೆ ಪ್ರಮಾಣಕ್ಕೆ 1 ವರ್ಷ; ವಿಶ್ವನಾಥ್ಗೆ ನ್ಯಾಯದೇವತೆಯಿಂದ ಶಿಕ್ಷೆಯಾಗಿದೆ: ಸಾ.ರಾ ಮಹೇಶ್
ಮೈಸೂರು, ಡಿಸೆಂಬರ್ 1: ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ನ್ಯಾಯ ದೇವತೆ ಸರಿಯಾದ ಶಿಕ್ಷೆ ನೀಡಿದ್ದಾಳೆ ಎಂದು ಕೆ.ಆರ್ ಜೆಡಿಎಸ್ ಶಾಸಕ ಸಾರಾ ಮಹೇಶ್ ಹೇಳಿದ್ದಾರೆ.
ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ ಹಿನ್ನೆಲೆಯಲ್ಲಿ ಇಂದು ಚಾಮುಂಡಿ ಬೆಟ್ಟಕ್ಕೆ ಸಾರಾ ಮಹೇಶ್ ಆಗಮಿಸಿ ದೇವಿಯ ದರ್ಶನ ಪಡೆದರು. ಬಳಿಕ ಕ್ಷೇತ್ರವನ್ನು ಸಾಕ್ಷಿಯಾಗಿಸಿದ್ದಕ್ಕೆ 1,001 ರೂ. ತಪ್ಪು ಕಾಣಿಕೆ ಹಾಕಿ ಬಳಿಕ ಮಾತನಾಡಿದ ಅವರು, ಪ್ರಸಂಗ ನಡೆದ ಸರಿಯಾಗಿ ಒಂದು ವರ್ಷಕ್ಕೆ ನ್ಯಾಯ ದೇವತೆ ತೀರ್ಪು ಕೊಟ್ಟಿದ್ದಾಳೆ. ಎಚ್.ವಿಶ್ವನಾಥ್ಗೆ ನ್ಯಾಯದೇವತೆಯಿಂದ ಶಿಕ್ಷೆಯಾಗಿದೆ ಎಂದು ತಿಳಿಸಿದರು.
ವಿಶ್ವನಾಥ್ ಅನರ್ಹತೆ ಹಿಂದೆ ಬಾಂಬೆ ಟೀಂ ಕರಾಮತ್ತಿದೆ; ಹೊಸ ಬಾಂಬ್ ಸಿಡಿಸಿದ ಸಾರಾ ಮಹೇಶ್
ಆಣೆ ಪ್ರಮಾಣ ನಡೆದು ಸರಿಯಾಗಿ ಒಂದೇ ವರ್ಷಕ್ಕೆ ಸತ್ಯ ಯಾವುದು ಎಂಬುದು ನಿರ್ಧಾರವಾಗಿದೆ. ಈ ಮೂಲಕ ಚಾಮುಂಡಿ ತಾಯಿ ನ್ಯಾಯ ದೇವತೆ ಮೂಲಕ ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟಿದ್ದಾಳೆ ಎಂದು ಸಾ.ರಾ ಮಹೇಶ್ ಹೇಳಿದರು.
ನಾನು ದೇವಾಲಯದಲ್ಲಿ ಕಣ್ಣೀರಿಟ್ಟು ತಪ್ಪು ಯಾರದ್ದು, ಸರಿ ಯಾರದ್ದು ಎಂದು ನೀನೇ ತೋರಿಸು ತಾಯಿ ಎಂದು ಕೇಳಿಕೊಂಡಿದ್ದೆ. ಆಣೆ-ಪ್ರಮಾಣ ಪ್ರಸಂಗ ನಡೆದು ಸರಿಯಾಗಿ ಒಂದು ವರ್ಷಕ್ಕೆ ನ್ಯಾಯ ದೇವತೆ ತೀರ್ಪು ಕೊಟ್ಟಿದ್ದಾಳೆ. ತಪ್ಪು ಮಾಡಿದ್ದರೂ ಭಂಡತನದಿಂದ ಶಕ್ತಿ ದೇವತೆ ಮುಂದೆ ಕೂತರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದ್ದು, ನಮ್ಮಂತ ರಾಜಕಾರಣಿಗಳಿಗೆ ಪಾಠ ಎಂದು ತಿಳಿಸಿದರು.
ಎಚ್.ವಿಶ್ವನಾಥ್ ಅವರನ್ನು ಮಂತ್ರಿ ಮಾಡುವ ಇರಾದೆ ಬಿಜೆಪಿಯವರಿಗೆ ಇರಲಿಲ್ಲ. ಈ ಕಾರಣದಿಂದಲೇ ನಾಮ ನಿರ್ದೇಶನ ಮಾಡಿದ್ದಾರೆ. ಈಗ ಈ ಇಳಿವಯಸ್ಸಲ್ಲಿ ಪಾಪ ವಿಶ್ವನಾಥ್ಗೆ ಈ ಗತಿ ಬಂತಲ್ಲ ಅಂತ ಸಾ.ರಾ.ಮಹೇಶ್ ವ್ಯಂಗೋಕ್ತಿಯಲ್ಲಿ ಮರುಕ ಪಟ್ಟರು.
ವಾಹನದ ಇಂಜಿನ್ ಸೀಜ್ ಆಗಿ ಕಾಂಗ್ರೆಸ್ ಪಕ್ಷದಲ್ಲಿ ಓಡದೇ ನಿಂತಿದ್ದ ಗಾಡಿಯನ್ನು, ನಾವು ಜೆಡಿಎಸ್ ಗೆ ತಂದು ರಿಪೇರಿ ಮಾಡಿಸಿ ಬಣ್ಣ ಹೊಡೆಸಿ ಹೊಸದಾಗಿ ರೂಪಿಸಿದ್ದೇವು. ವಿಶ್ವನಾಥ್ ಕಾಗೆ ಅಲ್ಲ ಕೋಗಿಲೆ ಎಂದು ನಂಬಿಸಿದ್ದೇವು. ಈ ಎಲ್ಲಾ ಬೆಳವಣಿಗೆಗಳಿಂದ ಎಚ್.ವಿಶ್ವನಾಥ್ ರಾಜಕೀಯ ಭವಿಷ್ಯ ಮಂಕಾಗುತ್ತದೆ ಎಂದು ಸಾ.ರಾ.ಮಹೇಶ್ ಲೇವಡಿ ಮಾಡಿದರು.
ಇದು ನನ್ನ ಮತ್ತು ಕಾರ್ಯಕರ್ತರ ನಿಟ್ಟುಸಿರಿಗೆ ದೇವರು ವಿಶ್ವನಾಥ್ಗೆ ಕೊಟ್ಟ ಶಿಕ್ಷೆಯಾಗಿದೆ. 16 ಜನರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ವಿಶ್ವನಾಥ್ ಒಬ್ಬರಿಗೆ ಶಿಕ್ಷೆ ಆಗುತ್ತದೆ ಎಂದರೆ, ಅದರ ಅರ್ಥ ದೇವರ ಮುಂದೆ ಹೇಗೆ ನಡೆದುಕೊಂಡರು ಎಂಬುದು ಗೊತ್ತಾಗುತ್ತದೆ ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿಕೆ ತಿಳಿಸಿದರು.