ಮೈಸೂರು ಉಸ್ತುವಾರಿ ಸಚಿವ ಹಾಗೂ ಡಿಸಿ ವಿರುದ್ಧ ಸಾ.ರಾ ಮಹೇಶ್ ವಾಗ್ದಾಳಿ
ಮೈಸೂರು, ಏಪ್ರಿಲ್ 28: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಶಾಸಕ ಸಾ.ರಾ ಮಹೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ಇಲ್ಲದೆ ಜನ ಸಾಯುತ್ತಿದ್ದಾರೆ. ಮೈಸೂರು ಜಿಲ್ಲಾಡಳಿತ ಏನು ಮಾಡ್ತಿದೆ? ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ? ಎಂದು ಪ್ರಶ್ನಿಸಿದರು.
ಲಾಕ್ಡೌನ್ ಮುಂದುವರೆಯುವ ಬಗ್ಗೆ ಸುಳಿವು ನೀಡಿದ ಸಚಿವ ಎಸ್ಟಿಎಸ್
ನನ್ನ ಕ್ಷೇತ್ರದ ಮಹಿಳೆಯೊಬ್ಬರಿಗೆ ಆಕ್ಸಿಜನ್, ಬೆಡ್ ಕೊಡಿಸೋಕೆ ಆಗಲಿಲ್ಲ. ಆಕ್ಸಿಜನ್ ಇಲ್ಲದೆ ಆ ಮಹಿಳೆ ಸಾವನ್ನಪ್ಪಿದ್ದಾರೆ. ಕೆ.ಆರ್ ನಗರ ತಾಲ್ಲೂಕು ಆಸ್ಪತ್ರೆಯ ಎರಡು ವೆಂಟಿಲೇಟರ್ ತರಿಸಿಕೊಟ್ಟರೂ ಅದನ್ನು ಫಿಕ್ಸ್ ಮಾಡಲಿಲ್ಲ. ಅದನ್ನು ಫಿಕ್ಸ್ ಮಾಡಲು ಟೆಕ್ನಿಷಿಯನ್ ಬರಬೇಕೆಂದು ಹೇಳಿದರು. ಆದರೆ, ಬೆಳಗಾಗುವುದರಲ್ಲಿ ಆ ಮಹಿಳೆ ಸಾವನ್ನಪ್ಪಿದ್ದಾಳೆ. ನಾನು ರಾಜಕಾರಣ ಮಾಡುವುದಾಗಿದ್ದರೆ ಆ ಮಹಿಳೆ ಶವವನ್ನು ಡಿಎಚ್ಒ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ಮಾಡುತ್ತಿದ್ದೆ ಎಂದು ಕಿಡಿಕಾರಿದರು.
ಅಲ್ಲದೆ ಕೆ.ಆರ್ ನಗರಕ್ಕೆ 284 ವೈದ್ಯಕೀಯ ಸಿಬ್ಬಂದಿ ಬೇಕಿದೆ. ಆದರೆ ಕೇವಲ 50-60 ಮಂದಿ ಇದ್ದಾರೆ. ಮೈಸೂರು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಏನು ಮಾಡ್ತಿದೆ? ಕೋವಿಡ್ ಕೇರ್ ಸೆಂಟರ್ಗಳಲ್ಲಿ ಕೇವಲ ಮಂಚ, ಬೆಡ್ ಹಾಕಿದರೆ ಸಾಲದು. ಅದಕ್ಕೆ ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಬೇಡವಾ? ಮೈಸೂರಿಗೆ ಎಷ್ಟು ಡಾಕ್ಟರ್ ಮತ್ತು ವೆಂಟಿಲೇಟರ್ ಕೊಟ್ಟಿದಿರಾ ಸಾರ್ವಜನಿಕರಿಗೆ ಮಾಹಿತಿ ಕೊಡಿ ಎಂದು ಒತ್ತಾಯಿಸಿದರು.
ಪಂಕ್ಚರ್ ಹಾಕಿದ್ರೆ ಸಾಲಲ್ಲ
ಇದೇ ವೇಳೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಸಾ.ರಾ ಮಹೇಶ್, ""ಮೈಸೂರಿಗೆ ಪೋಸ್ಟಿಂಗ್ ಬೇಕೆಂದು ಹಠ ಹಿಡಿದು ಬಂದ್ರಲ್ಲ, ಏನ್ ಮಾಡ್ತಿದ್ದೀರ ನೀವು?. ಕೇವಲ ಕಾರಿನ ಟೈರ್ ಪಂಕ್ಚರ್ ಹಾಕುವ ವಿಡಿಯೋ ಮಾಡಿಸಿ ಪಬ್ಲಿಸಿಟಿ ಪಡೆಯೋದಲ್ಲ. ಬೆಂಗಳೂರು ಸ್ಥಿತಿಯನ್ನು ಮೈಸೂರಿಗೆ ತಂದೊಡ್ಡಬೇಡಿ. ಮೃತ ಕುಟುಂಬಗಳ ಶಾಪ ನಿಮಗೆ ತಟ್ಟದೇ ಇರದು. ಮೈಸೂರು ಜನತೆಗೆ ಎಷ್ಟು ದಿನ ಅಂತ ಸುಳ್ಳು ಹೇಳುತ್ತೀರಾ? ಎಂದು ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ ಮಹೇಶ್ ಹರಿಹಾಯ್ದರು.