ಪಿಎಂ ಕೇರ್ ಲೆಕ್ಕ ಕೇಳಿದ ಸಂಸದ ಪ್ರತಾಪ್ ಸಿಂಹಗೆ ಶಾಸಕ ರಾಮದಾಸ್ ಟಾಂಗ್
ಮೈಸೂರು, ಮೇ 31: ಕೊರೊನಾ ನಿರ್ವಹಣೆ ವಿಚಾರದಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳ ಜಟಾಪಟಿ ನಡುವೆಯೇ, ಶಾಸಕ ಎಸ್.ಎ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವಿನ ಒಳಜಗಳ ಬಹಿರಂಗಗೊಂಡಿದೆ.
ಮೈಸೂರು ಜಿಲ್ಲೆಗೆ ಬಂದಿರುವ ಪಿಎಂ ಕೇರ್ಸ್ ಲೆಕ್ಕ ಕೇಳಿದ ಸಂಸದ ಪ್ರತಾಪ್ ಸಿಂಹಗೆ ಶಾಸಕ ರಾಮದಾಸ್ ಟಾಂಗ್ ನೀಡಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರ ಬ್ಯಾಟ್ ಬೀಸಿದ್ದಾರೆ.
ಕೋವಿಡ್ ನಿರ್ವಹಣೆಗಾಗಿ ಬಿಡುಗಡೆ ಮಾಡಿರುವ ಅನುದಾನದ ಸಮರ್ಪಕ ಬಳಕೆಯಾಗಿಲ್ಲ ಎಂಬ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ಹೊರಹಾಕಿದ್ದ ಸಂಸದ ಪ್ರತಾಪ್ ಸಿಂಹ, ಪಿಎಂ ಕೇರ್ನಿಂದ ಬಂದ 40 ವೆಂಟಿಲೇಟರ್ಗಳನ್ನು ಇನ್ನೂ ಅಳವಡಿಕೆ ಮಾಡಿಲ್ಲ, ಇದು ಜಿಲ್ಲಾಧಿಕಾರಿಗಳ ವೈಫಲ್ಯ ತೋರಿಸುತ್ತದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ್ದರು.
Recommended Video
ಆದರೆ ತಮ್ಮದೇ ಪಕ್ಷದ ಸಂಸದರ ಈ ಆರೋಪಕ್ಕೆ ಶಾಸಕ ಎಸ್.ಎ ರಾಮದಾಸ್ ತಿರುಗೇಟು ನೀಡಿದ್ದು, ನೂತನವಾಗಿ ಉದ್ಘಾಟನೆಗೊಂಡ ತುಳಸಿದಾಸಪ್ಪ ಹೆರಿಗೆ ಆಸ್ಪತ್ರೆಯಲ್ಲಿ ಪಿಎಂ ಕೇರ್ನ ವೆಂಟಿಲೇಟರ್ಗಳನ್ನು ಅಳವಡಿಕೆ ಮಾಡಲಾಗಿದೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಫೋಟೋ ಶೇರ್ ಮಾಡಿರುವ ಶಾಸಕ ರಾಮದಾಸ್, ಪಿಎಂ ಕೇರ್ಸ್ ಲೆಕ್ಕ ಕೇಳಿದವರಿಗೆ ಟಾಂಗ್ ನೀಡಿದ್ದಾರೆ. ಆ ಮೂಲಕ ರೋಹಿಣಿ ಸಿಂಧೂರಿ ಪರ ಶಾಸಕ ರಾಮದಾಸ್ ಬ್ಯಾಟಿಂಗ್ ಮಾಡಿದ್ದರೆ, ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ರಾಮದಾಸ್ ಒಳಜಗಳ ಕೂಡ ಬಹಿರಂಗವಾದಂತಿದೆ.