ಸುಳ್ವಾಡಿ ವಿಷಪ್ರಸಾದ ಪ್ರಕರಣ:ಇನ್ನೆರಡು ದಿನದಲ್ಲಿ ಸಂಪೂರ್ಣ ಮಾಹಿತಿ ಲಭ್ಯ
ಮೈಸೂರು, ಡಿಸೆಂಬರ್ 18 : ಸುಳ್ವಾಡಿ ಮಾರಮ್ಮನ ದೇಗುಲವನ್ನು ಕೆಲವೇ ದಿನಗಳಲ್ಲಿ ಮುಜರಾಯಿ ಇಲಾಖೆಗೆ ತೆಗೆದುಕೊಳ್ಳಲಾಗುವುದು ಎಂದು ಹನೂರು ಶಾಸಕ ನರೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಬಳಿಕ ಈ ಮಾರಮ್ಮನ ದೇಗುಲವನ್ನು ಮುಜರಾಯಿ ಇಲಾಖೆಗೆ ತೆಗೆದುಕೊಳ್ಳುವ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಈ ನಿರ್ಧಾರಕ್ಕೆ ಸಾಲೂರು ಮಠದ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿಯರಾದ ದೇವಾನ್ ಬುದ್ದಿ ಒಪ್ಪಿದ್ದಾರೆ. ನಮಗೆ ಆ ದೇವಸ್ಥಾನದ ಉಸ್ತುವಾರಿ ಬೇಡ ಎಂದಿದ್ದಾರೆ. ಸದ್ಯ ದೇವಸ್ಥಾನ ಜಿಲ್ಲಾಡಳಿತದ ವಶದಲ್ಲಿದೆ. ಮುಂದೆಯೂ ಅದನ್ನು ಸರ್ಕಾರವೇ ನಿರ್ವಹಿಸಲಿದೆ ಎಂದು ಹೇಳಿದರು.
ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ತಂದೆ ತಾಯಿಯನ್ನು ಕಳೆದುಕೊಂಡ ಮೂವರ ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಪ್ರಿಯಾ ಮತ್ತು ಅವರ ಸೋದರ-ಸೋದರಿಯರ ವಿದ್ಯಾಭ್ಯಾಸದ ಹೊಣೆಯನ್ನ ಆಳ್ವಾ ಸಂಸ್ಥೆಯೇ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಈಗಾಗಲೇ ಸಂಸ್ಥೆಯ ಮುಖ್ಯಸ್ಥರು ಜೊತೆ ಮಾತನಾಡಿದ್ದೇವೆ. ವಿದ್ಯಾಭ್ಯಾಸ ಮುಗಿದ ನಂತರ ಅವರ ಸಂಸ್ಥೆಯಲ್ಲೇ ಕೆಲಸ ನೀಡುವುದಾಗಿ ತಿಳಿಸಿದ್ದಾರೆ.

ಜೊತೆಗೆ ಗೃಹ ಸಚಿವರೊಂದಿಗೆ ಸಹ ನಾಳೆ ಮಾತನಾಡುತ್ತೇನೆ. ಮೂವರು ಮಕ್ಕಳಲ್ಲಿ ಇಬ್ಬರಿಗೂ ಸರ್ಕಾರಿ ಕೆಲಸ ನೀಡುವಂತೆ ಮನವಿ ಮಾಡುತ್ತೇನೆ ಎಂದು ಶಾಸಕ ನರೇಂದ್ರ ಭರವಸೆ ನೀಡಿದ್ದಾರೆ.
ಇನ್ನು ಪ್ರಕರಣ ಸಂಬಂಧ ಇನ್ನೆರಡು ಆರೋಪಿಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಪೊಲೀಸರು ಇನ್ನೆರಡು ದಿನದಲ್ಲಿ ಸಂಪೂರ್ಣ ಮಾಹಿತಿ ಕೊಡಲಿದ್ದಾರೆ. ಎಲ್ಲಾ ಆಯಾಮದಲ್ಲಿ ವಿಚಾರಣೆ ನಡೆದಿದೆ. ನಾವು ವಿಚಾರಣೆಯ ಮಾಹಿತಿ ಬಹಿರಂಗಗೊಳಿಸುವಂತಿಲ್ಲ. ಮಾಹಿತಿ ಸಿಕ್ಕಿದೆ. ಆದರೆ ಬಹಿರಂಗಪಡಿಸುವಂತಿಲ್ಲ. ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವುದು ಖಚಿತ ಎಂದು ತಿಳಿಸಿದರು.












Click it and Unblock the Notifications