"ಶ್ರೀನಿವಾಸ್ ಪ್ರಸಾದ್ ಅವರಿಗೆ ಕೇಂದ್ರದಲ್ಲಿ ಸ್ಥಾನ ಕೊಡಿ, ಇಲ್ಲವಾದರೆ ನನಗೆ ಸಚಿವ ಸ್ಥಾನ ಕೊಡಿ"
ಮೈಸೂರು, ನವೆಂಬರ್ 24: ಕೇಂದ್ರದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೆ ಸ್ಥಾನಮಾನ ಕೊಡಿ. ಇಲ್ಲವಾದರೆ ನನಗಾದರೂ ಸಚಿವ ಸ್ಥಾನ ಕೊಡಿ ಎಂದು ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಆಗ್ರಹಿಸಿದ್ದಾರೆ.
ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂಲ-ವಲಸಿಗ ಎಂದು ನೋಡಿದರೆ ಈ ಸರ್ಕಾರ ಅಧಿಕಾರಕ್ಕೆ ಬರಲು ಬರಬೇಕಾದರೆ ಮೂಲದವರು ಕಾರಣವಾಗಿರಲಿಲ್ಲ. ಬೇರೆ ಪಕ್ಷದಿಂದ ಬಂದು ಕೈ ಹಿಡಿದವರು ಇದ್ದರು. ಈಗ ಸಂಪುಟ ಪುನರ್ ರಚನೆಯಾಗುತ್ತದೋ ವಿಸ್ತರಣೆ ಆಗುತ್ತದೋ ಅದೆಲ್ಲವೂ ಸಿಎಂಗೆ ಬಿಟ್ಟ ವಿಚಾರ ಎಂದು ಹೇಳಿದರು.
ಬಿಜೆಪಿಯಲ್ಲಿ ಮೂಲ-ವಲಸಿಗರ ಕಾದಾಟ; ಸಿಎಂ ಯಡಿಯೂರಪ್ಪ ಪರದಾಟ!
ಇದೇ ಸಂದರ್ಭ, ಹಳೇ ಮೈಸೂರು ಭಾಗಕ್ಕೆ ನೀವು ಏನು ಪ್ರಾತಿನಿಧ್ಯ ಕೊಡುತ್ತಿದ್ದೀರ? ಈ ಭಾಗಕ್ಕಾಗಿ ಏನು ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಕೊನೆಗೆ, "ನನಗೆ ಎಲ್ಲಾ ಅರ್ಹತೆ ಇದೆ. ಆದರೆ ನಾನು ಇಲ್ಲಿ ಲಾಬಿ ಮಾಡಲು ಹೋಗುತ್ತಿಲ್ಲ. ನೀವು ಯಾರಿಗೆ ಸಚಿವ ಸ್ಥಾನ ಕೊಡುತ್ತೀರಾ, ಅವರು ಹಿಂದೆ ಕ್ಷೇತ್ರದ ಕೆಲಸವನ್ನು ಹೇಗೆ ಮಾಡಿದ್ದಾರೆ ಎನ್ನುವುದನ್ನು ನೋಡಬೇಕು. ಹಳೇ ಮೈಸೂರು ಭಾಗದಲ್ಲಿ ದಲಿತ ಬಲಗೈ ವರ್ಗಕ್ಕೆ ಪ್ರಾತಿನಿಧ್ಯ ಕೊಡಿ" ಎಂದು ಮನವಿ ಮಾಡಿದರು. ಈ ಮೂಲಕ ತಾವೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.