ಬಿಜೆಪಿಯಿಂದ ಯಾವುದೇ ಆಫರ್ ಬಂದಿಲ್ಲ: ಅಶ್ವಿನ್ ಕುಮಾರ್
ಮೈಸೂರು, ಜೂನ್ 21: ನಾನೆಂದಿಗೂ ನನ್ನನ್ನು ಸಾಕಿ ಬೆಳೆಸಿದ ಪಕ್ಷವನ್ನು ಬಿಟ್ಟು ಹೋಗಲಾರೆ. ನಾನು ಜೆಡಿಎಸ್ ನಲ್ಲಿಯೇ ಇರುತ್ತೇನೆ ಎಂದು ಜೆಡಿಎಸ್ ಟಿ.ನರಸೀಪುರ ಕ್ಷೇತ್ರದ ಶಾಸಕ ಅಶ್ವಿನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ 10 ಕೋಟಿ ಆಫರ್ ಬಂದಿಲ್ಲ. ನನ್ನನ್ನು ಯಾರೂ ಸಂಪರ್ಕಿಸಿಯೂ ಇಲ್ಲ. ಇದು ಕೇವಲ ಮಾಧ್ಯಮದ ವರದಿ ಅಷ್ಟೇ. ಅಲ್ಲದೇ ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಸಿಎಂ ಕುಮಾರಣ್ಣನ ನೆರಳಲ್ಲಿ ಬಂದವನು. ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟು ಹೋಗುವುದಿಲ್ಲ. ಕುಮಾರಣ್ಣನ ಜೊತೆಯೇ ಇರುತ್ತೇನೆ. ಬಿಜೆಪಿಯ ಕೆಲ ಶಾಸಕರು ನನ್ನ ಸ್ನೇಹಿತರು. ನಾವೆಲ್ಲ ಒಟ್ಟಾಗಿ ಸೇರಿ ಮಾತಾಡ್ತೀವಿ. ಆದರೆ ನನಗೆ ಯಾರು ಕೂಡ ಬಿಜೆಪಿಗೆ ಬರುವಂತೆ ಹೇಳಿಲ್ಲ. ಇದೆಲ್ಲ ಕೇವಲ ಊಹಾಪೋಹ ಎಂದು ಗೊಂದಲಕ್ಕೆ ತೆರೆ ಎಳೆದರು.

ಶಾಸಕ ಅಶ್ವಿನ್ ಕುಮಾರ್ಗೆ ಬಿಜೆಪಿಯಿಂದ 10 ಕೋಟಿ ಆಫರ್ ಬಂದಿದೆ. ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಇದೀಗ ಅಶ್ವಿನ್ ಅವರೇ ಈ ಬಗ್ಗೆ ಸ್ಪಷ್ಟನೆ ಕೊಡುವ ಮೂಲಕ ಯಾವುದೇ ಪ್ರಶ್ನೆ ಬಾರದಂತೆ ಉತ್ತರಿಸಿದ್ದಾರೆ.












Click it and Unblock the Notifications