ಮೈಸೂರಿನಲ್ಲಿ ಈ ಬಾರಿ ಕೈಗಾರಿಕಾ ದಸರಾ, ಚೆನ್ನೈ-ಮೈಸೂರು ಮಧ್ಯೆ ಮತ್ತೊಂದು ವಿಮಾನ
ಮೈಸೂರು, ಆಗಸ್ಟ್, 29: ಇದೇ ಮೊದಲ ಬಾರಿಗೆ ಆರೋಗ್ಯ ಮತ್ತು ಕೈಗಾರಿಕಾ ದಸರಾ ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತು ಸಭೆಯನ್ನು ಮಾಡಲಾಗಿತ್ತು. ನಾಡಹಬ್ಬ ದಸರಾ ಮಹೋತ್ಸವ-2022ರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ನಾಲ್ಕು ದಿನ ಕೈಗಾರಿಕಾ ದಸರಾ ಆಚರಣೆಗೆ ಕೈಗಾರಿಕಾ ಸಂಘದವರ ಮನವಿಯಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಕೈಗಾರಿಕಾ ದಸರಾದ ಬಗ್ಗೆ ಮಾಹಿತಿ ಸಂಗ್ರಹ
ಸಭೆಯಲ್ಲಿ ದಸರಾ ಕಾರ್ಯಕ್ರಮಗಳ ಆಯೋಜನೆ ಸಂಬಂಧ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು. ಹೊರ ರಾಜ್ಯಗಳಿಂದ ಆಗಮಿಸುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಹೆಸರನ್ನು ಸೇರ್ಪಡೆ ಮಾಡುವಂತೆ ಸೂಚಿಸಿದರು. ಮೈಸೂರಿಗೆ ಆಗಮಿಸುವ ಪ್ರವಾಸಿಗರು ಕೆಆರ್ಎಸ್ ಶ್ರೀರಂಗಪಟ್ಟಣ ಸೇರಿದಂತೆ ಮಂಡ್ಯ ಜಿಲ್ಲೆಯ ನಾನಾ ಪ್ರವಾಸಿ ಸ್ಥಳಗಳನ್ನು ವೀಕ್ಷಣೆ ಮಾಡಿಯೇ ಹಿಂದಿರುಗುತ್ತಾರೆ. ಹಾಗಾಗಿ ಪ್ರವಾಸಿಗರು ವೀಕ್ಷಣೆಗೆ ತೆರಳುವ ಸಂದರ್ಭದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ. ಅಂತಾರಾಜ್ಯ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವಾಗ ಮಂಡ್ಯ ಜಿಲ್ಲೆಯ ಹೆಸರನ್ನೂ ಸೇರ್ಪಡೆ ಮಾಡಬೇಕು ಎಂದರು.
ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ದಸರಾ ವಸ್ತು ಪ್ರದರ್ಶನ, ಪುಷ್ಪ ಪ್ರದರ್ಶನ ವೀಕ್ಷಣೆಗೆ ಏಕೀಕೃತ ಟಿಕೆಟ್ ನೀಡುವ ಬಗ್ಗೆ ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ಸಭೆಯಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷರು, ಪೊಲೀಸ್ ಆಯುಕ್ತರಾದ ಚಂದ್ರಗುಪ್ತ, ಜಿಲ್ಲಾ ಪಂಚಾಯತಿ ಸಿಇಒ ಪೂರ್ಣಿಮಾ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮೈಸೂರು- ಚೆನ್ನೈ ಮತ್ತೊಂದು ವಿಮಾನ ಹಾರಾಟ
ಬಹು ಬೇಡಿಕೆಯ ಮೈಸೂರು-ಚೆನ್ನೈ ನಡುವಿನ ವಿಮಾನಯಾನ ಸಂಚಾರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಇದೇ ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ಮತ್ತೊಂದು ವಿಮಾನ ಸೇವೆಯನ್ನು ಆರಂಭಿಸಲಾಗಿದೆ. ಮೈಸೂರು-ಚೆನ್ನೈ ನಿಲ್ದಾಣದ ನಡುವೆ ಈಗಾಗಲೇ ಇಂಡಿಗೊ ಸಂಸ್ಥೆಯು ಸೇವೆ ನಿರ್ವಹಿಸುತ್ತಿದೆ. ಮಧ್ಯಾಹ್ನ 4ಕ್ಕೆ ಮೈಸೂರಿನಿಂದ ಹೊರಡುವ ವಿಮಾನ ರಾತ್ರಿ 7:30ಕ್ಕೆ ಮತ್ತೆ ಮೈಸೂರಿಗೆ ವಾಪಸಾಗುತ್ತದೆ.

ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಹೆಚ್ಚಾಗಿರುವುದರಿಂದ ಪ್ರತಿ ನಿತ್ಯ ಎರಡೂ ಕಡೆಗಳಿಂದ ವಿಮಾನ ಭರ್ತಿ ಆಗುತ್ತಿದೆ. ಪ್ರಯಾಣಿಕರಿಂದ ದೊರೆಯುತ್ತಿರುವ ಉತ್ತಮ ಪ್ರತಿಕ್ರಿಯೆಯನ್ನು ಗಮನಿಸಿದ ಇಂಡಿಗೊ ಸಂಸ್ಥೆ ಬೆಳಗಿನ ವೇಳೆ ಇದೇ ಮಾರ್ಗದಲ್ಲಿ ಮತ್ತೊಂದು ವಿಮಾನ ಸೇವೆ ಆರಂಭಿಸಿದೆ.
ನೂತನ ವಿಮಾನಯಾನ ಸೇವೆಯ ಸಮಯ
ಈ ನೂತನ ಸೇವೆಯಂತೆ ಬುಧವಾರ, ಶುಕ್ರವಾರ, ಭಾನುವಾರ ಬೆಳಗ್ಗೆ 9:25ಕ್ಕೆ ಚೆನ್ನೈನಿಂದ ಹೊರಟು ಬೆಳಗ್ಗೆ 11ಕ್ಕೆ ವಿಮಾನ ಮೈಸೂರಿಗೆ ಆಗಮಿಸಲಿದೆ. 11:30ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 1ಕ್ಕೆ ಚೆನ್ನೈ ತಲುಪುತ್ತದೆ. ರಾಜ, ಮಹಾರಾಜರ ಕಾಲದಿಂದಲೂ ಮೈಸೂರು-ಚೆನ್ನೈ ನಡುವೆ ವ್ಯಾಪಾರ, ವಹಿವಾಟು ಸೇರಿದಂತೆ ಹಲವು ಚಟುವಟಿಕೆಗಳ ನಂಟಿದೆ. ವ್ಯಾಪಾರಸ್ಥರು ಸೇರಿದಂತೆ ವಿವಿಧ ವರ್ಗದವರು ಚೆನ್ನೈಗೆ ಹೋಗಿ ಬರುವ ಪರಿಪಾಠ ಹೆಚ್ಚಾಗಿದೆ. ಅಲ್ಲದೇ ಚೆನ್ನೈನಿಂದ ಹಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ತೆರಳುವ ವಿಮಾನ ಸೇವೆಯನ್ನು ಪಡೆಯಲು ಮೈಸೂರಿನ ಪ್ರಯಾಣಿಕರು ಉತ್ಸುಕರಾಗಿದ್ದಾರೆ.












Click it and Unblock the Notifications