ಮೈಸೂರು ಮೃಗಾಲಯಕ್ಕೆ ಬಂತು 2.32 ಕೋಟಿ ರೂ ನೆರವು
ಮೈಸೂರು, ಮೇ 07: ಮೈಸೂರು ಜಯಚಾಮರಾಜೇಂದ್ರ ಮೃಗಾಲಯದ ನಿರ್ವಹಣೆಗಾಗಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು 3ನೇ ಹಂತವಾಗಿ ಗುರುವಾರ 21.14 ಲಕ್ಷ ರೂಪಾಯಿ ಚೆಕ್ ಅನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರಿಗೆ ಹಸ್ತಾಂತರಿಸಿದರು.
ಇದೇ ವೇಳೆ, ಉಸ್ತುವಾರಿ ಸಚಿವರ ಮನವಿಗೆ ಸ್ಪಂದಿಸಿದ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ವತಿಯಿಂದ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಅವರು 84 ಲಕ್ಷ ರೂಪಾಯಿ ಚೆಕ್ ಅನ್ನು ಸಚಿವ ಸೋಮಶೇಖರ್ ಅವರ ಮೂಲಕ ಮೃಗಾಲಯಕ್ಕೆ ಹಸ್ತಾಂತರಿಸಿದರು. ಈ ಮೂಲಕ ಗುರುವಾರ ಒಂದೇ ದಿನ ಮೃಗಾಲಯಕ್ಕೆ ಒಟ್ಟಾರೆ 1.5 ಕೋಟಿ ರೂಪಾಯಿ ದೇಣಿಗೆಯಾಗಿ ನೀಡಿದಂತಾಗಿದೆ. ಒಟ್ಟಾರೆ 2.32 ಕೋಟಿ ರೂ. ಸಂಗ್ರಹವಾಗಿದೆ.
"ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಅವರು ಮೃಗಾಲಯಕ್ಕೆ ದೇಣಿಗೆ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿ 84 ಲಕ್ಷ ರೂ. ಸಂಗ್ರಹಿಸಿ ಕೊಡುಗೆಯಾಗಿ ನೀಡಿದ್ದಾರೆ. ಇದು ಅವರ ಸಮಾಜಮುಖಿ ಕಾರ್ಯವನ್ನು ತೋರಿಸುತ್ತದೆ. ಅಮೆರಿಕದ ಅಕ್ಕ ಸಂಸ್ಥೆಯ ಅಧ್ಯಕ್ಷರಾದ ಅಮರನಾಥ ಅವರೊಂದಿಗೆ ಮಾತನಾಡಿದ್ದೇನೆ. ಅವರೂ ದೇಣಿಗೆ ಬಗ್ಗೆ ಮಾಹಿತಿ ನೀಡಿದ್ದೇನೆ. ಅವರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಅಕ್ಕ ಸಮ್ಮೇಳನ ನಡೆಯದಿರುವುದರಿಂದ ಸಹಾಯಮಾಡುವಂತೆ ಕೇಳಿಕೊಂಡಿದ್ದೇನೆ. ಶೀಘ್ರ ಆರ್ಥಿಕ ಸಹಾಯ ಮಾಡಲಿದ್ದಾರೆ" ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು. ಸಂಸದರಾದ ಪ್ರತಾಪ್ ಸಿಂಹ, ಹಿರಿಯ ಶಾಸಕ ಎಸ್.ಎ.ರಾಮದಾಸ್ ಇತರ ಮುಖಂಡರು ಇದ್ದರು.

ರೈತರ ಅನುಕೂಲಕ್ಕಾಗಿ ಗಡಿಭಾಗ ಸಡಿಲ: ಮೈಸೂರು 90 ಪಾಸಿಟಿವ್ ಪ್ರಕರಣದಿಂದ 7ಕ್ಕೆ ಬಂದಿದೆ. ರೈತರಿಗೆ ಬೆಳೆದ ಬೆಳೆ ಮಾರಾಟಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಹೂವು, ತರಕಾರಿ ಹಾಗೂ ಇನ್ನಿತರ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಗಡಿಭಾಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಶೀಘ್ರ ಆರೆಂಜ್ ಝೋನ್: ಇನ್ನು ವಾರದಲ್ಲೇ ಮೈಸೂರು ಕೊರೊನಾ ಮುಕ್ತವಾಗುವ ಸಾಧ್ಯತೆ ಇದೆ. ಆದಷ್ಟು ಬೇಗ ಸಂಖ್ಯೆ ಶೂನ್ಯಕ್ಕೆ ಇಳಿಯಲಿದೆ. ಹೀಗಾಗಿ ರೆಡ್ ಝೋನ್ ನಿಂದ ಆರೆಂಜ್ ಝೋನ್ ಆಗಿ ಪರಿವರ್ತಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಶೀಘ್ರ ನಿರ್ಧಾರ ಹೊರಬೀಳಲಿದೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಗ್ರೀನ್ ಝೋನ್ ಗೆ ತರುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದರು.












Click it and Unblock the Notifications