ಚಾಮುಂಡೇಶ್ವರಿಗೆ ಚಿನ್ನದ ರಥ: ಸಚಿವ ಸೋಮಣ್ಣ
ಮೈಸೂರು, ಫೆಬ್ರವರಿ 28: ಮೈಸೂರು ಚಾಮುಂಡಿಬೆಟ್ಟದ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಾಣ ವಿಚಾರ ಈ ಬಾರಿಯ ಬಜೆಟ್ ನಲ್ಲಿ ನಿರ್ಧಾರವಾಗುವ ವಿಶ್ವಾಸ ಇದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಮೈಸೂರು ನಗರದಲ್ಲಿ ಮಾತನಾಡಿದ ಸೋಮಣ್ಣ ಅವರು, ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಮಾತನಾಡಿದ್ದೇನೆ. ಚಿನ್ನದ ರಥ ನಿರ್ಮಾಣ ಮಾಡುವುದಕ್ಕೆ ಬಜೆಟ್ ನಲ್ಲಿ ಅನುದಾನ ಕೊಡಿಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದರು.
ಸಪ್ತಪದಿ ಯೋಜನೆ ಅನುಷ್ಠಾನಕ್ಕೂ ನಮ್ಮ ಸರ್ಕಾರ ಸಿದ್ಧವಾಗಿದ್ದು, ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಯೋಜನೆ ಅನುಷ್ಠಾನ ಮಾಡಲು ಮೈಸೂರು ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದು ತಿಳಿಸಿದರು.

ಇನ್ನೊಂದು ತಿಂಗಳಲ್ಲಿ ಚಾಮುಂಡಿಬೆಟ್ಟ ಕಾಮಗಾರಿ ಪೂರ್ಣವಾಗಲಿದೆ. ಬೀದಿ ಬದಿವ್ಯಾಪಾರಿಗಳಿಗೆ ಅಂಗಡಿ ಮಳಿಗೆ ನೀಡುತ್ತೇವೆ. ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತವ್ಯವಸ್ಥೆ ಮಾಡುತ್ತೇವೆ. ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡುತ್ತೇವೆಂದರು.
ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ಮನೆ ವಿತರಣೆ ವಿಚಾರದಲ್ಲಿ ಕೃಷ್ಣನ ಲೆಕ್ಕ ಹೋಗಿ ರಾಮನಲೆಕ್ಕ ಮಾತ್ರ ಉಳಿದಿದೆ. ರಾಜ್ಯದಲ್ಲಿ 3.5 ಲಕ್ಷ ಮನೆ ವಿತರಣೆಗೆ ಎಲ್ಲ ಸಿದ್ಧತೆನಡೆದಿದೆ. ಮೊದಲ ಹಂತದಲ್ಲಿ 15 ಲಕ್ಷ ಮನೆಗಳ ವಿತರಣೆ ಅರ್ಜಿ ಬಂದಿದ್ದವು ಎಂದು ಮಾಹಿತಿ ನೀಡಿದರು.
ಆಧಾರ್, ಬಿಪಿಎಲ್, ಎಪಿಎಲ್ ಕಾರ್ಡುಗಳನ್ನು ಲಿಂಕ್ ಮಾಡಿದ ನಂತರ 15 ಲಕ್ಷದಿಂದ 6 ಲಕ್ಷಕ್ಕೆ ಬಂತು. ಇದೀಗ 3.5 ಲಕ್ಷ ನಿಜವಾದ ಸಂತ್ರಸ್ತರಿಗೆ ಮನೆ ವಿತರಣೆ ಸಿದ್ಧತೆ ನಡೆದಿದೆ. ಜೂನ್ ಅಂತ್ಯದ ಒಳಗೆ ಎಲ್ಲರಿಗೂ ಮನೆ ವಿತರಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications