ನಿಮ್ಮನ್ನೇ ಕೇಳಿ ಸರಿಮಾಡಿಕೊಳ್ಳುತ್ತೇನೆ: ಸಚಿವ ಸಾ ರಾ ಮಹೇಶ್ ವ್ಯಂಗ್ಯ
ಮೈಸೂರು, ಜೂನ್ 3: ಜಾತ್ಯತೀತ ಜನತಾದಳ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವ ಪಕ್ಷ. ವಿಶ್ವನಾಥ್ ಅವರೇ ನಮ್ಮ ರಾಜ್ಯಾಧ್ಯಕ್ಷರು. ಅವರನ್ನೇ ಒಪ್ಪಿಕೊಂಡ ಮೇಲೆ ಅವರ ಸಲಹೆಗಳನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಹೇಳುವ ಮೂಲಕ ರಾಜ್ಯ ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್ ರವರು ವಿಶ್ವನಾಥ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅನುಭವದ ಮೇಲೆ ಎಲ್ಲವನ್ನೂ ಹೇಳುತ್ತಾರೆ. ಅವರು ನಲವತ್ತು ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ನನಗೆ ಕೇವಲ 20 ವರ್ಷದ ರಾಜಕೀಯ ಅನುಭವವಷ್ಟೇ. ನಮ್ಮಂಥವರಿಗೆ ಸಲಹೆ ಕೊಡುವ ಸಂಪೂರ್ಣ ಹಕ್ಕು ಅವರಿಗಿದೆ. ಅವರ ಸಲಹೆ ಸೂಚನೆಯಲ್ಲಿ ಸತ್ಯಾಂಶವಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇನೆ. ನನ್ನನ್ನು ಕೆ ಆರ್ ನಗರದ ಜನರು 1840 ಅಂತರದಲ್ಲಿ ಮೂರನೇ ಬಾರಿ ಗೆಲ್ಲಿಸಿದ್ದಾರೆ. ನಾನು ಯಾವುದನ್ನೂ ಮರೆತಿಲ್ಲ ಎಂದು ವಿಶ್ವನಾಥ್ ಅವರಿಗೆ ಹೇಳಿದ್ದಾರೆ.
ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದರೇ ವಿಶ್ವನಾಥ್?
ಅಲ್ಲದೇ ಕೆಆರ್ ನಗರ ಪುರಸಭೆ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಕಳೆದ ವರ್ಷದ ಚುನಾವಣೆಯಲ್ಲಿ ಕೆ ಆರ್ ನಗರ ಟೌನ್ ನಲ್ಲಿ 2 ಸಾವಿರ ಮತಗಳ ಅಂತರವಿತ್ತು. ಈ ಬಾರಿಯ ಚುನಾವಣೆಯಲ್ಲಿ 516 ಮತ ವ್ಯತ್ಯಾಸವಿದೆ. ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವುದನ್ನು ವಿಶ್ವನಾಥ್ ಅವರ ಸಲಹೆ ಸ್ವೀಕರಿಸಿ ಸರಿಮಾಡಿಕೊಳ್ಳುತ್ತೇನೆ ಎಂದು ವ್ಯಂಗ್ಯ ಮಾಡಿದ್ದಾರೆ. ನಾನು ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ ಎಂದಿದ್ದಾರೆ.
ಸ್ವಂತ ಪಕ್ಷದ ವಿರುದ್ಧವೇ ತಿರುಗಿ ಬಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್
ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್ ವಿರುದ್ಧ, ದುಡ್ಡಿನ ದುರಹಂಕಾರ ಮತ್ತು ದ್ವೇಷದ ರಾಜಕಾರಣದಿಂದ ಪುರಸಭೆಯಲ್ಲಿ ಜಾ.ದಳ ಸೋಲಬೇಕಾಯಿತು ಎಂದು ಹೇಳಿಕೆ ನೀಡಿದ್ದು, ತಾಲ್ಲೂಕು ದಳದ ಮುಖಂಡರು ಹಾಗೂ ಸಾರಾ ಮಹೇಶ್ ಬೆಂಬಲಿಗರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.