ಮೋದಿ, ಅಮಿತ್ ಶಾ ಪರ ಮಾತಾಡಿದ ಸಚಿವ ಜಿ.ಟಿ. ದೇವೇಗೌಡ
ಮೈಸೂರು, ಜುಲೈ 2: ಕಾಂಗ್ರೆಸ್ - ಜಾ.ದಳ ಮೈತ್ರಿ ಪಾಳಯದಲ್ಲಿ ರಾಜೀನಾಮೆ ಗೊಂದಲ ಏರ್ಪಟ್ಟಿದ್ದರೆ, ಇತ್ತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡರು ಕಮಲಪಾಳಯದ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.
ನಗರದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾದ ರಾಮದಾಸ್, ಎಲ್.ನಾಗೇಂದ್ರ ಜೊತೆ ನಗರದ ಅಭಿವೃದ್ಧಿ ಕಾರ್ಯಗಳ ಕುರಿತು ಸಂಚಾರ ಕೈಗೊಂಡ ಸಚಿವರು, ಸಮಸ್ಯೆಗಳ ಪರಿಶೀಲನೆ ನಡೆಸಿದರು.
ಸಚಿವರಿಗೆ ಮೈಸೂರು ಜಿಲ್ಲಾಧಿಕಾರಿ, ಮೈಸೂರು ಪಾಲಿಕೆ ಮೇಯರ್ ಸಹ ಸಾಥ್ ನೀಡಿದರು. ಇದೇ ವೇಳೆ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ ಸಚಿವ ಜಿ.ಟಿ.ದೇವೇಗೌಡರು, ಮೋದಿ, ಅಮಿತ್ ಶಾ ಯಾರ ರಾಜೀನಾಮೆಯನ್ನು ಕೊಡಿಸೋಕೆ ಹೋಗಿಲ್ಲ. ಅವರು ಎದುರಾಳಿ ಸರ್ಕಾರಕ್ಕೆ ಅಭದ್ರತೆ ಸೃಷ್ಟಿಸುವ ಕೆಲಸ ಮಾಡುತ್ತಿಲ್ಲ ಎಂದರು.

ಸರ್ಕಾರ ಬೀಳಿಸುವುದು ಬಿಜೆಪಿ ರಾಜ್ಯ ನಾಯಕರ ಕೈಯಲ್ಲಿ ಇಲ್ಲ. ಅದೇನಿದ್ದರೂ ಅಮಿತ್ ಶಾ ಹಾಗೂ ಮೋದಿಯವರ ಕೈಯಲ್ಲಿದೆ. ಬಿಜೆಪಿ ಸರ್ಕಾರ ರಚನೆ ಮಾಡೋ ನಿರ್ಧಾರ ನರೇಂದ್ರ ಮೋದಿ ನಿರ್ದೇಶನ ಇದ್ದರೆ ಮಾತ್ರ. ಬೇರೆ ಯಾರ ನಿರ್ದೇಶನ ಇದ್ದರೂ ಅದು ಅಧೀಕೃತ ಅಲ್ಲ. ಬಿಜೆಪಿಯವರ ಮೇಲೆ ಯಾರೂ ಕೆಸರೆರೆಚೋ ಹಾಗಿಲ್ಲ ಎಂದರು.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಬಜೆಟ್ ಹಾಗೂ ಅಧಿವೇಶನದ ಕಡೆ ಗಮನಹರಿಸಿದ್ದಾರೆ. ಕಾಶ್ಮೀರ ಸಮಸ್ಯೆ, ಅಮೆರಿಕಾ, ಚೀನಾ ಜೊತೆ ಮಾತುಕತೆಯಲ್ಲಿ ಮಗ್ನರಾಗಿದ್ದಾರೆ. ಹೀಗಾಗಿ ಅವರು ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಅಭದ್ರತೆ ಸೃಷ್ಟಿಸುವ ಕೆಲಸ ಮಾಡುತ್ತಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಶಾಸಕರೂ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ಸುದ್ದಿ ಹರಡಿರುವ ಕುರಿತು ಸ್ಪಷ್ಟನೆ ನೀಡಿದ ಸಚಿವ ಜಿ.ಟಿ ದೇವೇಗೌಡ, ಜೆಡಿಎಸ್ ನಲ್ಲಿ ಯಾರೂ ರಾಜೀನಾಮೆ ಕೊಟ್ಟಿಲ್ಲ. ಕಾಂಗ್ರೆಸ್ನಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ಹೊಸದಲ್ಲ. ಆನಂದ್ ಸಿಂಗ್ ಅವರಿಗೆ ಪಾಪ ಏನು ಕಷ್ಟ ಇತ್ತೋ ನಮಗೆ ಗೊತ್ತಿಲ್ಲ ಎಂದರು.












Click it and Unblock the Notifications