ಶ್ರೀನಿವಾಸ್ ಪ್ರಸಾದ್ V/S ಮಹದೇವಪ್ಪ; ಕತ್ತೆ - ಹೇಸರಗತ್ತೆ ಕೆಸರೆರೆಚಾಟ
ಮೈಸೂರು, ಜನವರಿ 17: "ಒಂದೂವರೆ ವರ್ಷದಲ್ಲಿ ನಾನು ಉಸ್ತುವಾರಿ ಸಚಿವನಾಗಿ ಕತ್ತೆಯಂತೆ ದುಡಿದು ಜಿಲ್ಲೆಯ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಆದರೆ ಆ ವ್ಯಕ್ತಿ ಮೂರೂವರೆ ವರ್ಷ ಸಚಿವರಾಗಿ ಕೆಲಸವನ್ನೇ ಮಾಡದೆ, ಏನೂ ಗೊತ್ತಿಲ್ಲದೆ ಮೈಮೇಲೆ ಬಿಳಿ ಪಟ್ಟೆ ಬಳಿದುಕೊಂಡು ಹೇಸರಗತ್ತೆಯಂತೆ ಮೇಯ್ಕಂಡು ಸುಮ್ಮನೆ ಬಿದ್ದಿದ್ದರು," ಎಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ವಿರುದ್ಧ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹರಿಹಾಯ್ದರು.
ನಂಜನಗೂಡಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಹೆಚ್.ಸಿ.ಮಹದೇವಪ್ಪ ಕೂಡ ಸಿಎಂ ರೇಸ್ನಲ್ಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, "ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಗಳಾಗಲು ಮಹದೇವಪ್ಪ ರೇಸ್ನಲ್ಲಿದ್ದಾರೆ ಅಂತಾರೆ. ಎಷ್ಟೋ ಕುದುರೆಗಳಿರುವಾಗ ಕತ್ತೆ ಹೆಸರು ಹೇಳ್ತಿಯಲ್ಲಪ್ಪ," ಎಂದು ಪರೋಕ್ಷವಾಗಿ ಮಹದೇವಪ್ಪ ಅವರನ್ನು ಕತ್ತೆಗೆ ಹೋಲಿಸಿ ಟಾಂಗ್ ನೀಡಿದ್ದರು.
ಸಿವಿ ರಾಮನ್ ನಗರದಿಂದ ಸ್ಪರ್ಧೆ: ಅಡ್ಡಗೋಡೆ ಮೇಲೆ ದೀಪವಿಟ್ಟ ಮಹದೇವಪ್ಪ
ಇಂದು ಟಿ.ನರಸೀಪುರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟನೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಶ್ರೀನಿವಾಸ್ ಪ್ರಸಾದ್ರ ವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
"ಸಾಮಾಜಿಕ ಪ್ರಜ್ಞೆ ಹಾಗೂ ರಾಜಕಾರಣದ ಸಿದ್ಧಾಂತವೇ ಗೊತ್ತಿಲ್ಲದ ವ್ಯಕ್ತಿಗೆ ಮೂರೂವರೆ ವರ್ಷಗಳ ಕಾಲ ಉಸ್ತುವಾರಿ ಸಚಿವರಾಗಿ, ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ನಾನು ನನ್ನ ಕಳೆದ ನಾಲ್ಕೂವರೆ ವರ್ಷದ ಅಧಿಕಾರಾವಧಿಯಲ್ಲಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸಲು ಕತ್ತೆಯಂತೆ ದುಡಿದಿದ್ದೇನೆ. ಹೇಸರಗತ್ತೆಯತೆ ತಿಂದು ಉಂಡು ಬಿದ್ದಲ್ಲೇ ಬಿದ್ದಿಲ್ಲ," ಎಂದು ತಿರುಗೇಟು ನೀಡಿದರು.
"ಹೇಸರಗತ್ತೆ ಒಂದು ಕೆಲಸಕ್ಕೆ ಬಾರದ ಪ್ರಾಣಿ. ಅದರಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ? ಆಡಳಿತದ ಗಂಧವೇ ಗೊತ್ತಿಲ್ಲದ, ಸಂವಿಧಾನದ ಮೂಲಭೂತ ಆಶಯ ಅರಿಯದ ರಾಜಕಾರಣಿ ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿರುವವರ ಜೊತೆ ಕೈ ಜೋಡಿಸಲು ಮುಂದಾಗಿರುವುದು ಅವರ ಹೊಣೆಗೇಡಿತನಕ್ಕೆ ಸಾಕ್ಷಿ," ಎಂದು ಶ್ರೀನಿವಾಸ್ ಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.
"ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆಯಂತೆ ಮುಂದಿನ ವಿಧಾನಸಭಾ ಚುನಾವಣೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ನಡೆಯಲಿದೆ. ಮತ್ತೊಮ್ಮೆ ಅವರೇ ಮುಖ್ಯಮಂತ್ರಿಯಾಗಲಿದ್ದು, ಚುನಾವಣೆಯ ನಂತರ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದು ಖಚಿತ,'' ಎಂದು ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದರು.