KEA ಮೂಲಕ KSET ಪರೀಕ್ಷೆ: ಪ್ರತಾಪ್ ಸಿಂಹ ಮನವಿಗೆ ಸ್ಪಂದಿಸಿದ ಸಚಿವ ಅಶ್ವತ್ಥ್ ನಾರಾಯಣ್
ಮೈಸೂರು, ಡಿಸೆಂಬರ್ 23: ಕರ್ನಾಟಕ ಸಹಾಯಕ ಪ್ರಾಧ್ಯಾಪಕ ಪರೀಕ್ಷೆ (ಕೆ-ಸೆಟ್ )ಯಲ್ಲಿ ಪಾರದರ್ಶಕ ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ ಇನ್ಮುಂದೆ ರಾಜ್ಯ ಸರ್ಕಾರವು ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದ ಮೂಲಕ ನಡೆಸುವಂತೆ ಆದೇಶ ಮಾಡಿದೆ.
ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜಿನಲ್ಲಿ ಉಪನ್ಯಾಸಕರಾಗಲು ಕೆ-ಸೆಟ್ ಪರೀಕ್ಷೆ ಪಾಸು ಮಾಡಲೇಬೇಕು. ಕೆ-ಸೆಟ್ ಪರೀಕ್ಷೆ ಉತ್ತೀರ್ಣರಾದವರು ನೇಮಕಾತಿ ಪರೀಕ್ಷೆ ಬರೆಯಲು ಅರ್ಹರು. ಈ ನಿಟ್ಟಿನಲ್ಲಿ ಪ್ರತಿವರ್ಷ ಯುಜಿಸಿ ವತಿಯಿಂದ ಕೆ-ಸೆಟ್ ಪರೀಕ್ಷೆ ನಡೆಯುತ್ತದೆ.
ಮೈಸೂರು -ಬೆಂಗಳೂರು ಎಕ್ಸ್ಪ್ರೆಸ್ ವೇನಲ್ಲಿ ಕ್ಯಾಮೆರಾ ಅಳಡಿವಕೆಗೆ ನಿರ್ಧಾರ, ಇಲ್ಲಿದೆ ವಿವರ
ಕಳೆದ 6 ವರ್ಷದಿಂದ ಮೈಸೂರು ವಿಶ್ವವಿದ್ಯಾನಿಲಯ ಕೆ-ಸೆಟ್ ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೆ-ಸೆಟ್ ಪರೀಕ್ಷೆಯನ್ನು ಅಕ್ರಮವಾಗಿ ನಡೆಸುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೋಸ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿತು. ಮೂರು ನಾಲ್ಕು ಲಕ್ಷ ಕೊಟ್ಟರೆ ಕೆ ಸೆಟ್ ಪರೀಕ್ಷೆ ಪಾಸು ಮಾಡಿಸುತ್ತಾರೆ ಎಂಬ ಟೀಕೆಯೂ ಎದುರಾಗಿತ್ತು.
ಕೆ-ಸೆಟ್ ಪರೀಕ್ಷೆ ಅಕ್ರಮಗಳ ಗಣಿ ಆಗಿತ್ತು. ಇದರಿಂದ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗಿತ್ತು. ಅರ್ಹರಿಗೆ ಆದ್ಯತೆ ಸಿಗಬೇಕು ಎಂಬ ಉದ್ದೇಶದಿಂದ ಕೆ-ಸೆಟ್ ಪರೀಕ್ಷೆಯಲ್ಲಿ ಪಾರದರ್ಶಕತೆ ತರಬೇಕೆಂದು ಯುಜಿಸಿ ಚೇರ್ಮನ್ ಜಗದೀಶ್ ಕುಮಾರ್ ಅವರನ್ನು ಸಂಸದ ಪ್ರತಾಪ್ ಸಿಂಹ ,ಫೆಬ್ರವರಿ 2022ರಂದು ಭೇಟಿ ಮಾಡಿ ಮನವಿ ಮಾಡಿದ್ದರು. ಈ ಸಂಬಂಧ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ಥ್ ನಾರಾಯಣ್ ಅವರಿಗೆ ಪತ್ರದ ಮುಖೇನ ಮನವಿ ಮಾಡಿದ್ದರು.
"ಮನವಿ ಅನುಗುಣವಾಗಿ ಶುಕ್ರವಾರ ರಾಜ್ಯ ಸರ್ಕಾರವು ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದ ಮೂಲಕ ನಡೆಸುವಂತೆ ಆದೇಶ ಮಾಡಿರುವುದು ಶ್ಲಾಘನೀಯವಾಗಿದ್ದು, ನನ್ನ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿರುವ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವಥ್ ನಾರಾಯಣ ಅವರಿಗೆ ಅಭಿನಂದನೆ" ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.