KEA ಮೂಲಕ KSET ಪರೀಕ್ಷೆ: ಪ್ರತಾಪ್ ಸಿಂಹ ಮನವಿಗೆ ಸ್ಪಂದಿಸಿದ ಸಚಿವ ಅಶ್ವತ್ಥ್ ನಾರಾಯಣ್
ಮೈಸೂರು, ಡಿಸೆಂಬರ್ 23: ಕರ್ನಾಟಕ ಸಹಾಯಕ ಪ್ರಾಧ್ಯಾಪಕ ಪರೀಕ್ಷೆ (ಕೆ-ಸೆಟ್ )ಯಲ್ಲಿ ಪಾರದರ್ಶಕ ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ ಇನ್ಮುಂದೆ ರಾಜ್ಯ ಸರ್ಕಾರವು ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದ ಮೂಲಕ ನಡೆಸುವಂತೆ ಆದೇಶ ಮಾಡಿದೆ.
ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜಿನಲ್ಲಿ ಉಪನ್ಯಾಸಕರಾಗಲು ಕೆ-ಸೆಟ್ ಪರೀಕ್ಷೆ ಪಾಸು ಮಾಡಲೇಬೇಕು. ಕೆ-ಸೆಟ್ ಪರೀಕ್ಷೆ ಉತ್ತೀರ್ಣರಾದವರು ನೇಮಕಾತಿ ಪರೀಕ್ಷೆ ಬರೆಯಲು ಅರ್ಹರು. ಈ ನಿಟ್ಟಿನಲ್ಲಿ ಪ್ರತಿವರ್ಷ ಯುಜಿಸಿ ವತಿಯಿಂದ ಕೆ-ಸೆಟ್ ಪರೀಕ್ಷೆ ನಡೆಯುತ್ತದೆ.
ಕಳೆದ 6 ವರ್ಷದಿಂದ ಮೈಸೂರು ವಿಶ್ವವಿದ್ಯಾನಿಲಯ ಕೆ-ಸೆಟ್ ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೆ-ಸೆಟ್ ಪರೀಕ್ಷೆಯನ್ನು ಅಕ್ರಮವಾಗಿ ನಡೆಸುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೋಸ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿತು. ಮೂರು ನಾಲ್ಕು ಲಕ್ಷ ಕೊಟ್ಟರೆ ಕೆ ಸೆಟ್ ಪರೀಕ್ಷೆ ಪಾಸು ಮಾಡಿಸುತ್ತಾರೆ ಎಂಬ ಟೀಕೆಯೂ ಎದುರಾಗಿತ್ತು.

ಕೆ-ಸೆಟ್ ಪರೀಕ್ಷೆ ಅಕ್ರಮಗಳ ಗಣಿ ಆಗಿತ್ತು. ಇದರಿಂದ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗಿತ್ತು. ಅರ್ಹರಿಗೆ ಆದ್ಯತೆ ಸಿಗಬೇಕು ಎಂಬ ಉದ್ದೇಶದಿಂದ ಕೆ-ಸೆಟ್ ಪರೀಕ್ಷೆಯಲ್ಲಿ ಪಾರದರ್ಶಕತೆ ತರಬೇಕೆಂದು ಯುಜಿಸಿ ಚೇರ್ಮನ್ ಜಗದೀಶ್ ಕುಮಾರ್ ಅವರನ್ನು ಸಂಸದ ಪ್ರತಾಪ್ ಸಿಂಹ ,ಫೆಬ್ರವರಿ 2022ರಂದು ಭೇಟಿ ಮಾಡಿ ಮನವಿ ಮಾಡಿದ್ದರು. ಈ ಸಂಬಂಧ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ಥ್ ನಾರಾಯಣ್ ಅವರಿಗೆ ಪತ್ರದ ಮುಖೇನ ಮನವಿ ಮಾಡಿದ್ದರು.
"ಮನವಿ ಅನುಗುಣವಾಗಿ ಶುಕ್ರವಾರ ರಾಜ್ಯ ಸರ್ಕಾರವು ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದ ಮೂಲಕ ನಡೆಸುವಂತೆ ಆದೇಶ ಮಾಡಿರುವುದು ಶ್ಲಾಘನೀಯವಾಗಿದ್ದು, ನನ್ನ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿರುವ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವಥ್ ನಾರಾಯಣ ಅವರಿಗೆ ಅಭಿನಂದನೆ" ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.












Click it and Unblock the Notifications