ಮೈಸೂರಿನಲ್ಲಿ ಮಿನಿಲಾಕ್ ಡೌನ್; ರೋಹಿಣಿ ಸಿಂಧೂರಿ ಎಚ್ಚರಿಕೆ
ಮೈಸೂರು, ಮಾರ್ಚ್ 22: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ 2ನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಮಿನಿ ಲಾಕ್ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿಗಳು, "ರಾಜ್ಯಕ್ಕೆ ಕೊರೊನಾ ಎರಡನೇ ಅಲೆ ಬಂದಿದೆ ಅಂತ ಆರೋಗ್ಯ ಸಚಿವರೇ ಘೋಷಣೆ ಮಾಡಿದ್ದಾರೆ. ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅದರ ಪ್ರಕಾರವೇ ನಾವು ಕ್ರಮ ಕೈಗೊಂಡಿದ್ದೇವೆ" ಎಂದರು.
ಪಂಚರಥೋತ್ಸವಕ್ಕಾಗಿ ನಂಜನಗೂಡು ಬಂದ್ ಮಾಡಿದ ಭಕ್ತರು!
"500 ಜನರಿಗಿಂತ ಹೆಚ್ಚಾಗಿ ಎಲ್ಲಿಯೂ ಜನ ಸೇರಬಾರದು. ಇದೇ ಕಾರಣಕ್ಕೆ ನಾವು ಎಲ್ಲಾ ಜಾತ್ರೆ, ಉತ್ಸವಗಳನ್ನು ರದ್ದು ಮಾಡಿದ್ದೇವೆ. ಅಲ್ಲದೇ ಜನರು ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು" ಎಂದು ಕರೆ ನೀಡಿದರು.
ನಂಜನಗೂಡು; ಗೌತಮ ಪಂಚ ಮಹಾರಥೋತ್ಸವಕ್ಕೆ ಕೋವಿಡ್ ಅಡ್ಡಿ
"ಲಕ್ಷಾಂತರ ಜನ ಬಂದು ಜಾತ್ರೆ ಮಾಡುವುದಕ್ಕೆ ಆಗುವುದಿಲ್ಲ. ಅದರ ನಂತರದ ಪರಿಸ್ಥಿತಿ ನಿಭಾಯಿಸಲು ನಮಗೂ ಕಷ್ಟ ಆಗುತ್ತದೆ. ಹೀಗಾಗಿ ನಂಜನಗೂಡು ಜಾತ್ರೆಗೆ 500 ಮಂದಿ ಭಾಗಿಯಾಗಲು ಅನುಮತಿ ನೀಡಿದ್ದೇವೆ. ಜಾತ್ರೆಯನ್ನು ಮುಂದಿನ ವರ್ಷ ಮಾಡಬಹುದು. ಆದರೆ, ಜೀವ ಉಳಿಸಿಕೊಳ್ಳುವುದು ಮುಖ್ಯ ಆಗಿದೆ" ಎಂದು ಹೇಳಿದರು.
ಧಾರವಾಡ; ಜಾತ್ರೆ, ಉರುಸ್ ರದ್ದು. ಮಾಸ್ಕ್ ಧರಿಸದಿದ್ದರೆ ದಂಡ
"ಮೈಸೂರು ಅರಮನೆಯಲ್ಲಿ ಮತ್ತೆ RTPCR ಹಾಗೂ ಆಂಟಿಜೆನ್ ಟೆಸ್ಟ್ ಆರಂಭಿಸುತ್ತೇವೆ. ಜೊತೆಗೆ ಬಾವಲಿ ಗಡಿಯಲ್ಲಿ ಪ್ರತಿಯೊಬ್ಬರಿಗೂ RTPCR ಟೆಸ್ಟ್ ಕಡ್ಡಾಯವಾಗಿದ್ದು, ತರಕಾರಿ ವಾಹನ ಸೇರಿದಂತೆ ಎಲ್ಲಾ ವಾಹನದಲ್ಲಿ ಪ್ರಯಾಣಿಸುವವರಿಗೆ ಟೆಸ್ಟ್ ಇಲ್ಲದೆ ಪ್ರವೇಶವಿಲ್ಲ" ಎಂದು ರೋಹಿಣಿ ಸಿಂಧೂರಿ ಸ್ಪಷ್ಟಪಡಿಸಿದರು.
"ಶಾಲಾ ಕಾಲೇಜುಗಳಲ್ಲಿ ಮತ್ತೆ ಆಂಟಿಜೆನ್ ಟೆಸ್ಟ್ ಮಾಡುತ್ತಿದ್ದೇವೆ. ಸೋಂಕು ಎಲ್ಲಿಂದ ಹರಡುತ್ತಿದೆ? ಎನ್ನುವುದನ್ನು ಪತ್ತೆ ಹಚ್ಚಬೇಕಿದೆ. ಈ ಎಲ್ಲಾ ಕಾರಣದಿಂದ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಅಗತ್ಯಬಿದ್ದರೆ ಎಲ್ಲಿ ಸೋಂಕು ಹೆಚ್ಚಿದೆ ಅಲ್ಲಿ ಮಿನಿ ಲಾಕ್ಡೌನ್ ಮಾಡುವ ಉದ್ದೇಶವನ್ನು ಹೊಂದಿದ್ದೇವೆ" ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಮಾರ್ಚ್ 21ರ ವರದಿ ಪ್ರಕಾರ ಮೈಸೂರಿನಲ್ಲಿ 70 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 54,811. ಸಕ್ರಿಯ ಪ್ರಕರಣಗಳ ಸಂಖ್ಯೆ 339.