ಮೈಸೂರಿನಲ್ಲಿ ಒಂಟಿ ಪುರುಷರನ್ನು ಕಾಮಕೇಳಿಗೆ ಆಹ್ವಾನಿಸುತ್ತಿರುವ ಮಂಗಳಮುಖಿಯರು!
ಮೈಸೂರು, ಡಿಸೆಂಬರ್.02: ಮೈಸೂರಿನಲ್ಲಿ ಕೆಲ ಕಿಡಿಗೇಡಿ ಮಂಗಳಮುಖಿಯರಿಂದ ಸಮಸ್ಯೆಯಾಗುತ್ತಿದೆ. ರಾತ್ರಿಯಾಯಿತೆಂದರೆ ಸಾಕು ನಗರದ ಗ್ರಾಮಾಂತರ ಬಸ್ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಅಡ್ಡಾಡುವ ಕೆಲ ಮಂಗಳಮುಖಿಯರು ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುವಂತೆ ನಡೆದುಕೊಳ್ಳುತ್ತಿರುವುದರಿಂದ ಈ ರಸ್ತೆಗಳಲ್ಲಿ ಜನರು ಭಯದಿಂದ ಓಡಾಡುವಂತಾಗಿದೆ.
ಕಳೆದ ಹಲವಾರು ತಿಂಗಳಿನಿಂದ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಗ್ರಾಮಾಂತರ ಬಸ್ ನಿಲ್ದಾಣದ ಸಮೀಪ ಪೀಪಲ್ಸ್ ಪಾರ್ಕ್ ಹಾಗೂ ಸರ್ಕಾರಿ ಅತಿಥಿ ಗೃಹವಿದೆ. ಅಲ್ಲಿನ ಖಾಲಿ ಜಾಗದಲ್ಲಿ ವಿದ್ಯುತ್ ದೀಪಗಳು ಕೆಟ್ಟು ನಿಂತಿವೆ.
ಹೀಗಾಗಿ ರಾತ್ರಿಯಾಯಿತೆಂದರೆ ಈ ರಸ್ತೆಯಲ್ಲಿ ಸಂಪೂರ್ಣ ಕತ್ತಲು. ಈ ಕತ್ತಲು ರಸ್ತೆಯಲ್ಲಿ ನಿಲ್ಲುವ ಮಂಗಳಮುಖಿಯರು ಒಂಟಿಯಾಗಿ ಓಡಾಡುವ ಪುರುಷರನ್ನು ಕಾಮಕೇಳಿಗೆ ಆಹ್ವಾನಿಸಲು ಮುಂದಾಗುತ್ತಾರೆ.
ಒಪ್ಪದವರನ್ನು ಬೆಂಬಿಡದೆ ಹಿಂಬಾಲಿಸುವ ಅವರುಗಳು ಅವರ ಮೈ, ಕೈ ಮುಟ್ಟಿ ಕಿರುಕುಳ ನೀಡಲಾರಂಭಿಸುತ್ತಾರೆ, ಅದಕ್ಕೂ ಅವರು ಬಗ್ಗದಿದ್ದಲ್ಲಿ ಅಂತಿಮವಾಗಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾರಂಭಿಸುತ್ತಾರೆ. ಸ್ವಲ್ಪ ಹೆದರುವರು ಸಿಕ್ಕರಂತೂ, ಅವರನ್ನು ಪೀಪಲ್ಸ್ ಪಾರ್ಕ್ ಅಥವಾ ಸರ್ಕಾರಿ ಅತಿಥಿ ಗೃಹದ ಆವರಣಕ್ಕೆ ಎಳೆದೊಯ್ಯುತ್ತಾರೆ. ಮುಂದೆ ಓದಿ...

ಮೊಬೈಲ್ ದೋಚಿ ಪರಾರಿಯಾಗುತ್ತಾರೆ
ಕೂಗಲೂ ಅವಕಾಶ ನೀಡದಂತೆ ಬೆದರಿಕೆ ಒಡ್ಡುವ ಮಂಗಳಮುಖಿಯರು ನಂತರ ತಾವು ಕರೆತಂದ ವ್ಯಕ್ತಿಗಳ ಬಳಿ ಇರುವ ಹಣ, ಚಿನ್ನಾಭರಣ ಹಾಗೂ ಮೊಬೈಲ್ ಗಳನ್ನು ದೋಚಿ ಪರಾರಿಯಾಗುತ್ತಾರೆ. ಸ್ವಲ್ಪ ವಿರೋಧ ವ್ಯಕ್ತಪಡಿಸಿದಲ್ಲಿ ಅವರಿಂದ ಹಲ್ಲೆಗೊಳಗಾಗಬೇಕಾಗುತ್ತದೆ ಎಂದು ಸದಾ ಅಲ್ಲಿಯೇ ಅಡ್ಡಾಡುವ ಕಾರು ಹಾಗೂ ಆಟೋ ಚಾಲಕರು ಹೇಳುತ್ತಾರೆ.

ಹಣ ನೀಡುವಂತೆ ಒತ್ತಾಯ
ನಗರದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಿಸಿ ಕ್ಲಬ್ ಮುಂಭಾಗ ಹಾಗೂ ಮಹಾರಾಜ ಕಾಲೇಜಿನ ರಸ್ತೆಯಲ್ಲಿ ಕೂಡ ಇವರ ಹಾವಳಿ ಹೆಚ್ಚಾಗುತ್ತಿದೆ. ಈ ರಸ್ತೆಗಳ ತಿರುವಿನಲ್ಲಿ ವಿದ್ಯುತ್ ದೀಪಗಳು ಇಲ್ಲದ್ದನ್ನೇ ಬಳಸಿಕೊಳ್ಳುವ ಮಂಗಳಮುಖಿಯರು ಒಂಟಿಯಾಗಿ ಓಡಾಡುವ ಹಾಗೂ ವಾಹನ ಚಾಲಕರನ್ನು ತಡೆದು ನಿಲ್ಲಿಸಿ ಹಣ ನೀಡುವಂತೆ ಪೀಡಿಸಲಾರಂಭಿಸುತ್ತಾರೆ.

8 ಗಂಟೆಯ ನಂತರ ಹೆಚ್ಚಾಗುತ್ತದೆ
ಇಂತಹ ಘಟನೆಗಳು ರಾತ್ರಿ 8 ಗಂಟೆಯ ನಂತರ ಹೆಚ್ಚಾಗಿ ನಡೆಯುತ್ತಿವೆ. ಈ ವೇಳೆ ಪೊಲೀಸ್ ಠಾಣೆಯ ಗರುಡ ವಾಹನವಾಗಲಿ ಅಥವಾ ಗಸ್ತಿನ ಪೊಲೀಸರಾಗಲಿ ಹೆಚ್ಚಾಗಿ ಕಂಡುಬರುತ್ತಿಲ್ಲ. ಹೀಗಾಗಿ ಇವರ ಕಿರಿಕಿರಿ ಎಗ್ಗಿಲ್ಲದೆ ಸಾಗಿದೆ. ರಸ್ತೆ ಬದಿಯಲ್ಲಿ ನಿಂತು ಸಾರ್ವಜನಿಕರಿಗೆ ತೊಂದರೆ ಕೊಡುವ ಇವರುಗಳನ್ನು ಇಲ್ಲದ ಉಸಾಬರಿ ನಮಗೇಕೆ ಎಂಬ ಮನೋಭಾವದಿಂದ ಸಾರ್ವಜನಿಕರೂ ಪ್ರಶ್ನಿಸುವುದಿಲ್ಲ.

ಪೊಲೀಸ್ ಅಧಿಕಾರಿಗಳು ಇತ್ತ ಗಮನಹರಿಸಲಿ
ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂಬುದು ಸಾರ್ವಜನಿಕರ ಒತ್ತಾಯ. ಇಲ್ಲವಾದಲ್ಲಿ ಅಮಾಯಕ ಜನರು ಇವರಿಂದ ಕಿರುಕುಳ ಅನುಭವಿಸಬೇಕಾಗುತ್ತದೆ ಎಂದು ಆತಂಕವ್ಯಕ್ತಪಡಿಸಿದ್ದಾರೆ.












Click it and Unblock the Notifications