ನಂಜನಗೂಡಿನಲ್ಲಿ ಗೆದ್ದ ಕಳಲೆ ಕೇಶವಮೂರ್ತಿ ವ್ಯಕ್ತಿಚಿತ್ರ
ಕಳಲೆ ಎನ್ ಕೇಶವ ಮೂರ್ತಿ ನಂಜನಗೂಡಿನ ಕಳಲೆ ಗ್ರಾಮದವರು. ಕೃಷಿಕರಾದ ಕಳಲೆ ರಾಜಕೀಯ ರಂಗ ಪ್ರವೇಶವಾಗಿದ್ದು ಜನತಾ ಪರಿವಾರದಿಂದ. ನಂತರ ಜೆಡಿಎಸ್ ಪ್ರವೇಶ, ಸದ್ಯ ಕಾಂಗ್ರೆಸಿನಿಂದ ಸ್ಪರ್ಧಿಸಿ ನಂಜನಗೂಡಿನಲ್ಲಿ ಗೆದ್ದು ಬಂದಿದ್ದಾರೆ.
ಮೈಸೂರು, ಏಪ್ರಿಲ್ 12: ಜಾತ್ಯಾತೀತ ಜನತಾದಳದಿಂದ ಕಾಂಗ್ರೆಸಿಗೆ ಹಾರಿ ಕಳಲೆ ಎನ್ ಕೇಶವಮೂರ್ತಿ ನಂಜನಗೂಡಿನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಶ್ರೀನಿವಾಸ್ ಪ್ರಸಾದ್ ರಂಥ ಪ್ರಬಾವಿ ರಾಜಕಾರಣಿಯ ವಿರುದ್ಧವೇ ಗೆದ್ದಿದ್ದು ಕಡಿಮೆ ಸಾಧನೆ ಏನಲ್ಲ. ಹಾಗಿದ್ದರೆ ಈ ಕಳಲೆ ಕೇಶವ ಮೂರ್ತಿ ಯಾರು?
ಕಳಲೆ ಎನ್ ಕೇಶವ ಮೂರ್ತಿ ಮೂಲತಃ ನಂಜನಗೂಡಿನ ಕಳಲೆ ಗ್ರಾಮದವರು. ಎನ್ ನಂಜಯ್ಯ ಕಳಲೆಯವರ ತಂದೆ. ಸದ್ಯ ಅವರಿಗೆ 62 ವರ್ಷ ವಯಸ್ಸು. ಕೃಷಿಕರಾದ ಕಳಲೆ ಕೇಶವಮೂರ್ತಿಯವರ ರಾಜಕೀಯ ರಂಗ ಪ್ರವೇಶವಾಗಿದ್ದು ಜನತಾ ಪರಿವಾರದಿಂದ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ LIVE]
ನಂಜನಗೂಡು ಎಪಿಎಂಸಿ ಅಧ್ಯಕ್ಷರಾಗಿ ಕೇಶವಮೂರ್ತಿ ಈ ಹಿಂದೆ ಆಯ್ಕೆಯಾಗಿದ್ದರು. 2008, 2013ರಲ್ಲಿ ಜೆಡಿಎಸ್ ನಿಂದ ನಂಜನಗೂಡಿನಲ್ಲಿ ಸ್ಪರ್ಧಿಸಿದ್ದ ಕಳಲೆ ಕೇಶವಮೂರ್ತಿ ವಿ ಶ್ರೀನಿವಾಸ್ ಪ್ರಸಾದ್ ಎದುರು ಸೋಲು ಕಂಡಿದ್ದರು.
2013ರಲ್ಲಿ ಸೋಲು
2013ರಲ್ಲಿ ಜೆಡಿಎಸ್ ನಿಂದ ಸ್ಪರ್ಧಸಿದ್ದ ಕಳಲೆ 25,551 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು. ಆದರೆ 2013ರ ಚುನಾವಣೆ ವೇಳೆಗೆ ತಮ್ಮ ವರ್ಚಸ್ಸು ವೃದ್ಧಿಸಿಕೊಂಡು ಪ್ರಬಾವಿ, ಕ್ಷೇತ್ರದ ಮೇಲೆ ಭಾರಿ ಹಿಡಿತ ಹೊಂದಿದ್ದ ಶ್ರೀನಿವಾಸ್ ಪ್ರಸಾದ್ ಗೆ ಭಾರಿ ಸ್ಪರ್ಧೆ ಒಡ್ಡಿದ್ದರು.
2008 – ಅಲ್ಪ ಮತದಿಂದ ಪರಾಭವ
2008ರ ಚುನಾವಣೆಯಲ್ಲೂ ಕಳಲೆ ಕೇಶವಮೂರ್ತಿ 8,941 ಮತಗಳಿಂದ ಸೋತರಾದರೂ ಪ್ರಭಲ ಸ್ಪರ್ಧೆ ನೀಡುವಲ್ಲಿ ಸಫಲರಾಗಿದ್ದರು. ಆ ಭಾರೀ ಅವರು ಮತಗಳಿಕೆಯನ್ನು 41,843ಕ್ಕೆ ಹೆಚ್ಚಿಸಿಕೊಂಡರು.[ಉಪ ಚುನಾವಣೆ ಫಲಿತಾಂಶ: ಯಾರಿಗೆ ಲಾಭ? ಯಾರಿಗೆ ನಷ್ಟ?]
ಅವಿವಾಹಿತರು
ಕಳಲೆ ಅವಿವಾಹಿತರಾಗಿದ್ದಾರೆ. ಅವರಿಗೆ ಅವಲಂಬಿತರು ಯಾರೂ ಇಲ್ಲ. ಚುನಾವಣೆಗೆ ಅಫಿದವಿತ್ತು ಸಲ್ಲಿಸುವ ವೇಳೆ ಘೋಷಿಸಿಕೊಂಡಂತೆ ಅವರ ಬಳಿ ಸ್ಕಾರ್ಪಿಯೋ ವಾಹನ ಇದೆ. ಜತೆಗೆ ಕೈಯಲ್ಲಿ 30 ಲಕ್ಷ ನಗದು ಇದ್ದು ಒಟ್ಟು ಮೌಲ್ಯ 34 ಲಕ್ಷ ರೂಪಾಯಿ ಆಗಿದೆ. ತಾವು ಈವರೆಗೆ ಆದಾಯ ತೆರಿಗೆ ಪಾವತಿಸಿಲ್ಲ ಎಂದು ಅವರು ಹೇಳಿಕೊಂಡಿದ್ದರು.[ಉಪ ಚುನಾವಣೆ ಫಲಿತಾಂಶದ ಬಗ್ಗೆ ತಕರಾರು ತೆಗೆಯುವಂತೆಯೇ ಇಲ್ಲ]
90 ಲಕ್ಷದ ಆಸ್ತಿ ಒಡೆಯ
ಕೃಷಿಕರಾದ ಕಳಲೆ ಬಳಿ ನಂಜನಗೂಡು ತಾಲೂಕಿನ ಕರಳೆಪುರ ಗ್ರಾಮದಲ್ಲಿ 30 ಲಕ್ಷ ಮಾರುಕಟ್ಟೆ ಮೌಲ್ಯದ 4.37 ಎಕರೆ ಕೃಷಿ ಭೂಮಿ, ಕಳಲೆ ಗ್ರಾಮದಲ್ಲಿ ಹೆಂಚಿನ ಮನೆ ಇದೆ. ಇನ್ನು ಮೈಸೂರಿನಲ್ಲಿ 40*60 ಅಳತೆಯ ವಾಸದ ಮನೆಯನ್ನೂ ಅವರು ಹೊಂದಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 60 ಲಕ್ಷ. ಹೀಗೆ ಒಟ್ಟು ಸೇರಿ ತಮ್ಮ ಬಳಿ 90 ಲಕ್ಷ ಮೌಲ್ಯದ ಆಸ್ತಿ ಇರುವುದಾಗಿ ಕಳಲೆ ಕೇಶವಮೂರ್ತಿ ಘೋಷಿಸಿಕೊಂಡಿದ್ದರು.
ಜೆಡಿಎಸ್ ನಿಂದ ಕಾಂಗ್ರೆಸಿಗೆ
ಶ್ರೀನಿವಾಸ್ ಪ್ರಸಾದ್ ರಂಥ ಘಟಾನುಘಟಿ ನಂಜನಗೂಡಿನಲ್ಲಿ ಚುನಾವಣೆಗೆ ನಿಂತಾಗ ಅವರಿಗೆ ಸರಿಸಮರು ಎಂದು ಕಾಂಗ್ರೆಸಿಗೆ ಅನಿಸಿದ್ದು ಇದೇ ಕಳಲೆ ಕೇಶವಮೂರ್ತಿ. ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಳಲೆ ಕೇಶವಮುರ್ತಿ ನೇರ ಕಾಂಗ್ರೆಸ್ ಪಾಳಯಕ್ಕೆ ಲಗ್ಗೆ ಇಟ್ಟರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಈ ಭಾಗದ ದಲಿತ, ಲಿಂಗಾಯತ ಹಾಗೂ ಒಕ್ಕಲಿಗ ಮತದಾರರ ಜೊತೆ ಕಳಲೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿಯಾದರೆ ಚುನಾವಣೆಯಲ್ಲಿ ಲಾಭವಾಗುತ್ತೆ ಅನ್ನುವ ಲೆಕ್ಕಚಾರದಲ್ಲಿ ಕಾಂಗ್ರೆಸ್ ಕಳಲೆಯವರಿಗೆ ಮಣೆ ಹಾಕಿತ್ತು.
ಕಾಂಗ್ರೆಸ್ ಲೆಕ್ಕಾಚಾರ ಯಶಸ್ವಿಯಾಗಿದೆ. ಕಳಲೆ ಗೆದ್ದಿದ್ದಾರೆ; ಹಿರಿಯ ರಾಜಕಾರಣಿ ಶ್ರೀನಿವಾಸ್ ಪ್ರಸಾದ್ ಮಕಾಡೆ ಮಲಗಿದ್ದಾರೆ.