ಮೈಸೂರಿನ ಈ ಹೋಟೆಲ್ ನಲ್ಲಿ ತಿಂಡಿ-ಊಟ ಏನೇ ಮಾಡಿದರೂ 10 ರುಪಾಯಿ ಮಾತ್ರ!
ಈ ರೀತಿಯ ಹೋಟೆಲ್ ಗಳು ನಿಮ್ಮೂರಿನಲ್ಲೂ ಇರಬಹುದು. ಅವರು ಹೀಗೆ ಅತ್ಯಂತ ಕಡಿಮೆ ದರಕ್ಕೆ ಊಟ- ತಿಂಡಿ ಕೊಡ್ತಾರೆ ಅನ್ನಿಸಬಹುದು. ಆದರೆ ಈಗ ಹೇಳಲು ಹೊರಟಿರುವುದು ಮೈಸೂರು ನಗರದಲ್ಲಿರುವ ಹೋಟೆಲ್ ಬಗ್ಗೆ. ಇಲ್ಲಿನ ವಿಶೇಷದ ಬಗ್ಗೆ.
ಒಂದು ಕೇಜಿ ಬೇಳೆ 100 ರುಪಾಯಿ, ಎಣ್ಣೆ 90, ತರಕಾರಿ ಕೇಜಿ 40 ರುಪಾಯಿ, ಸಿಲಿಂಡರ್ 900 ರುಪಾಯಿ. ಹೀಗೆ ಅಗತ್ಯ ವಸ್ತುಗಳ ಬೆಲೆ ಆಕಾಶದಲ್ಲಿ ತೇಲಾಡುವಾಗ ಊಟ-ತಿಂಡಿಗೆ ಹೋಟೆಲ್ ಗೆ ಹೋದರೆ ಅಷ್ಟೇ ಎನ್ನುವವರಿದ್ದರಂತೂ ಈ ಲೇಖನ ಕಡ್ಡಾಯವಾಗಿ ಓದಿ. ಈ ಹೋಟೆಲ್ ನಲ್ಲಿ ತಿಂಡಿ, ಊಟ ಏನು ತೆಗೆದುಕೊಂಡರೂ ಎಲ್ಲಕ್ಕೂ ತಲಾ 10 ರುಪಾಯಿ ಮಾತ್ರ.
ನಾಲಗೆ ಮೇಲೆ ಕರಗುವ ಚಿಬ್ಬುಲು ಇಡ್ಲಿ, ಕೆಂಪು ಚಟ್ನಿ ರುಚಿ ನೋಡಿ
ಹೌದು, ಇದೇನು ಸರಕಾರಿ ಯೋಜನೆಯ ಅಗ್ಗದ ಊಟ-ತಿಂಡಿ ಸ್ಕೀಮ್ ಅಲ್ಲ. ಮೈಸೂರಿನ ರಾಮಸ್ವಾಮಿ ಸರ್ಕಲ್ ಬಳಿ ಒಂದು ಹೋಟೆಲ್ ಇದೆ. ಇಲ್ಲಿ ಕೇವಲ 10 ರುಪಾಯಿ ಕೊಟ್ಟರೆ ಸಾಕು, ಹೊಟ್ಟೆ ತುಂಬಾ ಉಪಾಹಾರ ಸೇವಿಸಬಹುದು. ಬರೀ ಹತ್ತು ರುಪಾಯಿ ಕೊಟ್ಟು ಹೊಟ್ಟೆ ತುಂಬಾ ಊಟ ಮಾಡಬಹುದು. ಶ್ರೀ ಸಾಯಿ ಟಿಫನ್ಸ್ ಎಂಬ ಹೆಸರಿನ ಇದು ಪುಟ್ಟ ಜಾಗದಲ್ಲಿ ಚೊಕ್ಕವಾಗಿರುವ ಹೋಟೆಲ್. ಸ್ಥಳೀಯವಾಗಿಯೂ ಚಿರಪರಿಚಿತ.
ದಿನಕ್ಕೆ 500ಕ್ಕೂ ಹೆಚ್ಚು ಪ್ಲೇಟ್ ಊಟ ಮಾರಾಟ
ಮೂಲತಃ ಮೈಸೂರಿನವರೇ ಆದ ರಾಜೇಶ್ ಕಡು ಬಡತನದಲ್ಲಿ ಹುಟ್ಟಿ ಬೆಳೆದವರು. ಹೊಟ್ಟೆಪಾಡಿಗಾಗಿ 2 ವರ್ಷಗಳ ಹಿಂದೆ ಈ ಹೋಟೆಲ್ ಪ್ರಾರಂಭಿಸಿದರು. ಇವರು ತಮ್ಮ ಕ್ಯಾಂಟೀನ್ ಆರಂಭಿಸಿದ ದಿನದಿಂದಲೂ 10 ರುಪಾಯಿಗೆ ಹೊಟ್ಟೆ ತುಂಬಾ ಊಟವನ್ನು ನೀಡುತ್ತಿದ್ದಾರೆ. ದಿನಕ್ಕೆ ಇವರ ಹೋಟೆಲ್ ನಲ್ಲಿ 500ಕ್ಕೂ ಹೆಚ್ಚು ಪ್ಲೇಟ್ ಊಟ ಮಾರಾಟ ಆಗುತ್ತದೆ. ರಾಜೇಶ್ ಅವರು ಸಾಯಿಬಾಬಾ ಭಕ್ತರಾದ ಕಾರಣ ತಮ್ಮ ಕ್ಯಾಂಟೀನ್ಗೆ ಅದೇ ಹೆಸರನ್ನೇ ಇಟ್ಟಿದ್ದಾರೆ. ರಾಜೇಶ್ ಅವರ ಕ್ಯಾಂಟೀನ್ನ ವಿಶೇಷ ಅಂದ್ರೆ ಬೇರೆ ಹೋಟೆಲ್ಗಳ ರೀತಿಯಲ್ಲಿ ಲೆಕ್ಕ ಹಾಕಿ ಇಡ್ಲಿ ಹಾಕಲ್ಲ. ಬಟ್ಟಲು ಅಳತೆಯಲ್ಲಿ ಅನ್ನವನ್ನು ಹಾಕಲ್ಲ. ಕೈಗೆ ಸಿಕ್ಕಷ್ಟು ಇಡ್ಲಿ, ಪ್ಲೇಟ್ ತುಂಬ ಅನ್ನ ಹಾಕಿಕೊಡ್ತಾರೆ.
ಎಂದೂ ಗ್ರಾಹಕರಿಗೆ ಕಳಪೆ ಆಹಾರ ನೀಡುವುದಿಲ್ಲ
ಈ ಕ್ಯಾಂಟೀನ್ನಲ್ಲಿ ಬೆಳಗ್ಗೆ ರೈಸ್ ಬಾತ್, ಚಿತ್ರಾನ್ನ, ಇಡ್ಲಿ, ಪುಳಿಯೋಗರೆ ಅವೆಲ್ಲಕ್ಕೂ ಚಟ್ನಿ ಹಾಗೂ ಸಾಗು ನೀಡಲಾಗುತ್ತದೆ. ಇನ್ನು ಮಧ್ಯಾಹ್ನದ ನಂತರ 10 ರುಪಾಯಿ ಕೊಟ್ಟು ಅನ್ನ- ಸಾಂಬಾರು, ಚಿತ್ರಾನ್ನ ತಿನ್ನಬಹುದು. ಇಲ್ಲಿಗೆ ವಿದ್ಯಾರ್ಥಿಗಳು, ಚಾಲಕರು, ಕಾರ್ಮಿಕರು, ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದರ ಕಡಿಮೆ ಇದೆ ನಿಜ. ಆದರೆ ರಾಜೇಶ್ ಎಂದೂ ಗ್ರಾಹಕರಿಗೆ ಕಳಪೆ ಆಹಾರ ನೀಡುವುದಿಲ್ಲ. ಸಾಧ್ಯವಾದಷ್ಟೂ ಕಡಿಮೆ ದರದಲ್ಲಿ ಉತ್ತಮ ತರಕಾರಿ, ಆಹಾರ ಪದಾರ್ಥಗಳು ಸಿಗುವ ಹೋಲ್ಸೇಲ್ ಅಂಗಡಿಗಳನ್ನು ಹುಡುಕಿ, ಪದಾರ್ಥಗಳನ್ನು ತಂದು ಜನರಿಗೆ ಗುಣಮಟ್ಟದ ಆಹಾರವನ್ನೇ ಉಣ ಬಡಿಸುತ್ತಾರಂತೆ.
ಆಹಾ! ಘಮಘಮಿಸುವ ಸೊಪ್ಪಿನ ದೋಸೆ ಸವಿಯಲು ಮೈಸೂರಿನ ಜಿಟಿಆರ್ ಗೆ ಬನ್ನಿ
ದಿನಕ್ಕೆ 1 ಸಾವಿರ ರುಪಾಯಿ ಉಳಿಯುತ್ತದೆ
ನಮಗೆ ಹಸಿವಿನ ಬೆಲೆ ಗೊತ್ತಿದೆ. ಹೀಗಾಗಿ ಯಾರೂ ಹಸಿವಿನಿಂದ ನರಳಬಾರದು ಎಂದು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ದರದಲ್ಲಿ ಸೇವೆ ಮಾಡುತ್ತಿದ್ದೇವೆ. ಅಲ್ಲದೆ, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಖರ್ಚು- ವೆಚ್ಚ ಎಲ್ಲವೂ ಕಳೆದು 1 ಸಾವಿರ ರುಪಾಯಿ ಉಳಿಯುತ್ತದೆ. ಇದರಲ್ಲಿ ಇಬ್ಬರು ಕ್ಲೀನಿಂಗ್ ಮಾಡುವವರಿಗೆ ಕೊಟ್ಟು, ಉಳಿದಿದ್ದರಲ್ಲಿ ನಮ್ಮ ಜೀವನ ನಡೆಯುತ್ತದೆ. ಅಲ್ಲದೆ, ಮಕ್ಕಳು ಚೆನ್ನಾಗಿ ಓದಿದ್ದಾರೆ. ಹೀಗಾಗಿ ಸಂಸಾರಕ್ಕೆ ಎಷ್ಟು ಸಾಧ್ಯವೋ ಅಷ್ಟು ಲಾಭ ಬಂದರೆ ಸಾಕು ಎನ್ನುತ್ತಾರೆ ಕ್ಯಾಂಟೀನ್ ಮಾಲೀಕರಾದ ರಾಜೇಶ್.
ವ್ಯವಹಾರ ಎನ್ನುವವರ ಮಧ್ಯೆ ಮಾದರಿ ರಾಜೇಶ್
ರಾಜೇಶ್ ಅವರಿಗೆ ಕಾಲೇಜು ಹುಡುಗರಂದರೆ ಬಲು ಪ್ರೀತಿ. ಅವರು ಹಸಿವಿನಿಂದ ನರಳದೆ ಖುಷಿಯಿಂದ ಹೊಟ್ಟೆ ತುಂಬ ಊಟ ಮಾಡಿ, ಚೆನ್ನಾಗಿ ಓದಿ ಬುದ್ಧಿವಂತರಾಗಬೇಕು ಎಂಬುದು ಇವರ ಆಸೆ. ನಾನು ಓದಿದ್ದು ಎರಡನೇ ತರಗತಿಯಷ್ಟೇ. ಆದರೆ ಇಂದಿನ ವಿದ್ಯಾರ್ಥಿಗಳು ಓದಿ ವಿದ್ಯಾವಂತರಾಗಬೇಕು. ಅಪ್ಪ -ಅಮ್ಮ ಕಷ್ಟಪಟ್ಟು ದುಡಿದ ದುಡ್ಡನ್ನು ಹಾಳು ಮಾಡಬಾರದು. ಹಾಗಾಗಿ ವಿದ್ಯಾರ್ಥಿಗಳಿಗೆ ಹೊಟ್ಟೆ ತುಂಬಾ ಊಟ ನೀಡುತ್ತೇನೆ. ಅದೇ ನನ್ನ ಗುರು- ಆಶಯ ಎನ್ನುತ್ತಾರೆ ರಾಜೇಶ್. ಒಟ್ಟಾರೆ ಹೋಟೆಲ್ ಅಂದರೆ ವ್ಯವಹಾರ ಕಣ್ರೀ ಎಂದು ಮೂಗು ಮುರಿಯುವವರ ಮಧ್ಯೆ ರಾಜೇಶ್ ವಿಭಿನ್ನವಾಗಿ ನಿಲ್ಲುತ್ತಾರೆ.