"ಗಂಡುಮಗು ಆದ್ರೆ ಓಕೆ, ಹೆಣ್ಣುಮಗು ಬೇಡ ಎಂದ್ರೆ ಹೇಗೆ?: ಅಮಾನತು ಮಾಡಿದ್ರೂ ನಾನು ಹೆದರಲ್ಲ"
ಮೈಸೂರು, ಫೆಬ್ರವರಿ 27: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿ ಉದ್ಭವಿಸಿರುವ ಭಿನ್ನಮತ ಸ್ಪೋಟ ಸದ್ಯಕ್ಕೆ ನಿಲ್ಲುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಮೈಸೂರು ಪಾಲಿಕೆ ಮೇಯರ್ ಚುನಾವಣೆಯಲ್ಲಿ ಮಾಡಿಕೊಂಡಿರುವ ಜೆಡಿಎಸ್ ಜತೆಗಿನ ದೋಸ್ತಿಗೆ ಇದೀಗ ಕೈ ನಾಯಕರ ನಡುವೆ ವೈಮನಸ್ಸು ಶುರುವಾಗಿದೆ.
ತಮ್ಮದೇ ಪಕ್ಷದ ಶಾಸಕರ ವಿರುದ್ಧ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗರು, ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಸಿದ್ದು ಬೆಂಬಲಿಗರ ಆಕ್ರೋಶ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಶಾಸಕ ತನ್ವೀರ್ ಸೇಠ್, ಪಕ್ಷದಿಂದ ತಮ್ಮನ್ನು ಅಮಾನತು ಮಾಡಲಿ ಅಂತ ಸವಾಲು ಹಾಕಿದ್ದಾರೆ.
ಮೈಸೂರು ಕೈ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ: ಶಾಸಕ ತನ್ವೀರ್ ಸೇಠ್ ಉಚ್ಚಾಟನೆಗೆ ಆಗ್ರಹ
ಅಲ್ಲದೇ, ನಾನು ಯಾವುದಕ್ಕೂ ಹೆದರುವುದಿಲ್ಲ, ಅಮಾನತು ಮಾಡಿದರೂ ಸಿದ್ಧವಾಗಿದ್ದೇನೆ ಎಂದು ತಮ್ಮ ಎದುರಾಳಿಗಳಿಗೆ ಟಾಂಗ್ ನೀಡಿರುವ ತನ್ವೀರ್, ಇಲ್ಲಿ ಒಬ್ಬ ವ್ಯಕ್ತಿಯ ಗೌರವ ಅಲ್ಲ. ನಾನು ಸಹ 5 ಬಾರಿ ಗೆದ್ದಿದ್ದೇನೆ. ಒಬ್ಬರ ಗೌರವ ಕಾಪಾಡಲು ಪಕ್ಷದ ಗೌರವ ಹರಾಜು ಹಾಕಲು ಆಗುವುದಿಲ್ಲ ಎಂದಿದ್ದಾರೆ.
ಪದೇ ಪದೇ ನನ್ನ ತೇಜೋವಧೆ ಮಾಡಿ ನನ್ನ ಲೋಪ ಅಂತಾ ಹೇಳುವುದು ಸರಿ ಅಲ್ಲ. ನನ್ನ ವಿರುದ್ಧ ಆದ ಪದ ಬಳಕೆ ಸರಿಯಲ್ಲ. ನಮ್ಮದು ವ್ಯಕ್ತಿ ಪೂಜೆ ಮಾಡುವ ಪರಂಪರೆ ಅಲ್ಲ. ಇತ್ತೀಚೆಗೆ ವ್ಯಕ್ತಿ ಪೂಜೆ ಮಾಡುವುದು ಆಗುತ್ತಿದೆ. ನಿನ್ನೆ ಮಾಜಿ ಮೇಯರ್ ಪಾಲಿಕೆ ಸದಸ್ಯರಿಂದ ಪ್ರೆಸ್ ಮೀಟ್ ಗೆ ಸಮಜಾಯಿಷಿ ಕೊಡಲ್ಲ. ನನ್ನ ವಿರುದ್ಧ ಕ್ರಮ ಕೈಗೊಂಡರೆ ಅದರ ಪರಿಣಾಮ ಎದುರಿಸಲು ಸಿದ್ಧರಾಗಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ನಾನು ಮಾರಾಟದ ವಸ್ತುವಲ್ಲ, ರಾಜಕೀಯ ತತ್ವ ಸಿದ್ದಾಂತ ಉಳಿಸಿಕೊಂಡಿದ್ದೇನೆ. ಅದಕ್ಕಾಗಿ ಹಲವು ತ್ಯಾಗ ಮಾಡಿದ್ದೇನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಗಬಾರದು ಅನ್ನೋ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ಮೈತ್ರಿ ಆಯ್ತು ಅಂತ ಶಾಸಕ ತನ್ವೀರ್ ಪುನರುಚ್ಛರಿಸಿದ್ದಾರೆ.
"ಗಂಡು ಮಗು ಆಗಿಲ್ಲ ಹೆಣ್ಣು ಮಗು ಆಗಿದೆ. ಗಂಡು ಮಗು ಆದ್ರೆ ಓಕೆ ಹೆಣ್ಣು ಮಗು ಬೇಡ' ಅಂದರೆ ನಾನು ಒಪ್ಪಲ್ಲ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ಅದನ್ನು ನನ್ನ ಮೇಲೆ ಹಾಕುತ್ತಿದ್ದರು. ನಾಳೆ ಡಿಕೆ ಶಿವಕುಮಾರ್ ಭೇಟಿ ಮಾಡಿ ವರದಿ ನೀಡುವೆ. ಪಕ್ಷಕ್ಕಿಂತ ದೊಡ್ಡದು ಯಾವುದು ಇಲ್ಲ. ಏನೇ ಇದ್ದರೂ ಪಕ್ಷಕ್ಕೆ ಮಾತ್ರ ನಾನು ಉತ್ತರದಾಯಿ. ನನ್ನನ್ನು ಮುಗಿಸಲು ನನ್ನ ಜನರು ಬಿಡಲ್ಲ, ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ ಅಂತ ತನ್ವೀರ್ ಸೇಠ್ ಸವಾಲು ಹಾಕಿದರು.
ಇದೇ ವೇಳೆ ಸಿದ್ದರಾಮಯ್ಯ ಕಾಲ್ ಮಾಡಿದರೂ ಶಾಸಕ ತನ್ವೀರ್ ಸೇಠ್ ರಿಸೀವ್ ಮಾಡಲಿಲ್ಲ ಅನ್ನುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ತನ್ವೀರ್, ಸಿದ್ದರಾಮಯ್ಯ 16 ಬಾರಿ ಕಾಲ್ ಮಾಡಿದ್ದಾರೆ. ಆ ಸಮಯದಲ್ಲಿ ನಾನು ಪಾಲಿಕೆ ಸದನದ ಒಳಗಿದ್ದೆ. ಅಲ್ಲಿ ಮೊಬೈಲ್ ತೆಗೆದುಕೊಂಡು ಹೋಗುವ ಹಾಗಿಲ್ಲ. ಹಾಗಾಗಿ ಅವರ ಕರೆ ಸ್ವೀಕರಿಸಲು ಆಗಿಲ್ಲ ಎಂದು ಸಮಜಾಯಿಷಿ ಸಹ ಕೊಟ್ಟಿದ್ದಾರೆ.
ಒಟ್ಟಾರೆ, ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಾಳಯದಲ್ಲಿ ಎದ್ದಿರುವ ಭಿನ್ನಮತಕ್ಕೆ ಉತ್ತರ ನೀಡಲು ತಯಾರಾಗಿರುವ ಶಾಸಕ ತನ್ವೀರ್, ಮೈತ್ರಿ ವಿಚಾರವನ್ನೇ ಮುಂದಿಟ್ಟುಕೊಂಡು ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಲು ಮುಂದಾಗಿರುವವರ ವಿರುದ್ಧ ಸಹ ಶಾಸಕ ತನ್ವೀರ್ ಸೇಠ್ ತೊಡೆತಟ್ಟಿದ್ದಾರೆ.