ಕಾಂಗ್ರೆಸ್ ನಾಟಕ, ಚೌಕಿದಾರ್ ಕಥೆ ಈ ಚುನಾವಣೇಲಿ ಮುಗಿಯಲಿದೆ:ಮಾಯಾವತಿ
ಮೈಸೂರು, ಏಪ್ರಿಲ್ 10:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿಎಸ್ಪಿ ಅಧಿನಾಯಕಿ ಮಾಯಾವತಿ ಭರ್ಜರಿ ಪ್ರಚಾರ ನಡೆಸಿದರು.ಇದೇ ವೇಳೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮಾತನಾಡಿದ ಅವರು, ಕಮಲ ಹಾಗೂ ಕೈ ಪಕ್ಷದ ಕುರಿತಾಗಿ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇನ್ನು ಮುಂದೆ ದೇಶದಲ್ಲಿ ಕಾಂಗ್ರೆಸ್ ನ ನಾಟಕ, ಪ್ರಚಾರ ಮುಗಿಯಲಿದೆ. ಜೊತೆಗೆ ಚೌಕಿದಾರ್ ಕಥೆಯು ಈ ಚುನಾವಣೆಯಲ್ಲಿ ಮುಗಿಯಲಿದೆ. ಚೌಕಿದಾರ್ ಹೊಸ ನಾಟಕವು ಕೂಡ ಈ ಚುನಾವಣೆಯಲ್ಲಿ ನಡೆಯುವುದಿಲ್ಲ. ಪ್ರಧಾನಿ ಮೋದಿ ರೈತರಿಂದ ಹಿಡಿದು ಕೆಲ ವರ್ಗದ ಜನರವರೆಗೂ ನೀಡಿದ ಭರವಸೆ ಹುಸಿಯಾಗಿದೆ.ಮೋದಿ ಸರ್ಕಾರ ಪ್ರಚಾರಕ್ಕಾಗಿಯೇ ಸಾವಿರಾರು ಕೋಟಿ ನಷ್ಟ ಮಾಡಿದೆ ಎಂದು ಆರೋಪಿಸಿದರು.
ರೈತರಿಗೆ ವಿದ್ಯುತ್ ಸಮಸ್ಯೆಯಿಂದ ಎಲ್ಲಾ ರೀತಿಯ ಸಮಸ್ಯೆ ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಕಾಂಗ್ರೆಸ್ ನಂತೆ ಏನು ಮಾಡದೆ ಜನರನ್ನು ವಂಚಿಸಿದೆ. ಕರ್ನಾಟಕದಲ್ಲೂ ಕಡು ಬಡವರು, ಅಸಹಾಯಕರು ಇದ್ದಾರೆ. ಅವರಿಗೆ ಒಳಿತು ಮಾಡುವ ಉದ್ದೇಶ ನಮ್ಮದಾಗಿದೆ ಎಂದು ಮಾಯಾವತಿ ಭರವಸೆ ನೀಡಿದರು.

ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರವೆಂದರೆ ಬಿಎಸ್ಪಿ ಗೆಲುವು. ನಾವು ದೆಹಲಿಯ ಗದ್ದುಗೆ ಏರಬೇಕಿದೆ. ಇಲ್ಲಿಂದಲು ನಮಗೆ ಸಹಕಾರ ನೀಡಿ, ನಮ್ಮ ಅಭ್ಯರ್ಥಿಗೆ ದೆಹಲಿಗೆ ಕಳುಹಿಸಿ. ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳಿವೆ. ಅದರಲ್ಲಿ ಬಿಜೆಪಿ ಒಂದು ಕ್ಷೇತ್ರವೂ ಗೆಲ್ಲದೆ ಕ್ಲೀನ್ ಸ್ವೀಪ್ ಆಗಲಿದೆ. ನೀವೂ ಮೈಸೂರಿನಿಂದಲೇ ಅಭ್ಯರ್ಥಿ ಗೆಲ್ಲಿಸಿ ಸಹಕರಿಸಿ ಎಂದು ಮಾಯಾವತಿ ಮನವಿ ಮಾಡಿದರು.
ರಾಜ್ಯದಲ್ಲಿ ಬಿಎಸ್ಪಿ ಒಂದು ಹೆಜ್ಜೆ ಮುಂದಿಟ್ಟಿದೆ. ಈಗಾಗಲೇ ಎನ್ ಮಹೇಶ್ ಗೆಲ್ಲಿಸಿ ಕೊಟ್ಟಿದ್ದೀರಿ. ಇದರಿಂದ ಮಹೇಶ್ ಸಚಿವರು ಕೂಡ ಆಗಿದ್ದರು. ಈಗ ಮತ್ತಷ್ಟು ಹೆಚ್ಚಿನದಾಗಿ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಡಿ. ಮುಂದಿನ ಕರ್ನಾಟಕದ ಚುನಾವಣೆಯಲ್ಲಿ ಬಿಎಸ್ಪಿ ಅಧಿಕಾರಕ್ಕೆ ಬರಲಿದೆ. ಆ ವೇಳೆ ಮಹೇಶ್ರನ್ನ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಮಾಯಾವತಿ ಭರವಸೆ ನೀಡಿದರು.

ಮಾಯಾವತಿ ದೇಶಕ್ಕೆ ಅನಿವಾರ್ಯ ಎಂಬ ಗೀತೆಗೆ ಮಕ್ಕಳು ನೃತ್ಯ ಮಾಡುತ್ತಿದ್ದರು. ಇದನ್ನು ನೋಡುತ್ತ ಮಾಯಾವತಿ ಭಾವುಕರಾದ ದೃಶ್ಯ ಕಂಡುಬಂದಿತು. ದೆಹಲಿ ಗದ್ದುಗೆಯನ್ನು ಮಾಯಾವತಿ ಏರಿದಂತೆ ನೃತ್ಯ ಪ್ರಸ್ತುತಪಡಿಸಲಾಗಿತ್ತು.












Click it and Unblock the Notifications